ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಅಭ್ಯರ್ಥಿ ಡಾ.ವೈ.ಭರತ್ ಶೆಟ್ಟಿಯವರು ಮಂಗಳವಾರ ಮಂಗಳೂರಿನಲ್ಲಿ ನಾಮಪತ್ರ ಸಲ್ಲಿಸಿದರು. ಅದಕ್ಕಿಂತಲೂ ಮೊದಲು ಭಾರೀ ಜನಸ್ತೋಮದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಶಕ್ತಿ
ಪ್ರದರ್ಶನ ಮಾಡಿದರು. ಬೆಳಗ್ಗೆ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ
ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಭರತ್ ಶೆಟ್ಟಿಯವರು ತೆರೆದ ವಾಹನದಲ್ಲಿ ಕಾವೂರು ಮೈದಾನಕ್ಕೆ ಸಾಗಿದರು.
ಈ ಸಂದರ್ಭ ಮಾರ್ಗದುದ್ದಕ್ಕೂ ಕೇಸರಿ ಕಲರವ ಕಾಣಿಸಿತು. ಸಾವಿರಾರು ಮಂದಿ ಕಾರ್ಯಕರ್ತರು ಕೇಸರಿ ಶಾಲು ಧರಿಸಿ, ಬಿಜೆಪಿ ಬಾವುಟ ಹಾರಿಸಿ ಡಾ.ವೈ.ಭರತ್ ಶೆಟ್ಟಿಯವರಿಗೆ ಸ್ವಾಗತಕೋರಿದರು. ಕಾವೂರು ಮೈದಾನದಲ್ಲಿ ಸಾಂಕೇತಿಕ ಸಭಾ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಪುರಂದರದಾಸ್ ಕೂಳೂರು, ಮಾಜಿ ಕಾರ್ಪೊರೇಟರ್ ಅಶೋಕ್ ಶೆಟ್ಟಿ ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆಕೊಂಡರು. ಆ ಬಳಿಕ ಭರತ್ ಶೆಟ್ಟಿಯವರು ನಾಮಪತ್ರ ಸಲ್ಲಿಸಲು ಮಿನಿವಿಧಾನಸೌಧದಲ್ಲಿರುವ ಚುನಾವಣಾ ಕಚೇರಿಗೆ ಆಗಮಿಸಿದರು. ಈ ಬಗ್ಗೆ ಮಾತನಾಡಿದ ಡಾ.ವೈ.ಭರತ್ ಶೆಟ್ಟಿ, ಕಳೆದ ಐದು ವರ್ಷಗಳಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕನಾಗಿ ಅಭಿವೃದ್ಧಿ ಹಾಗೂ ಹಿಂದುತ್ವದ ಕೆಲಸ ಎರಡೂ ಕಾರ್ಯಗಳನ್ನು ಪೂರೈಸಿದ್ದೇನೆ. ಈ ಮೂಲಕ ಕಾರ್ಯಕರ್ತರ ಆಕಾಂಕ್ಷೆ ಈಡೇರಿಸಿದ್ದೇನೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ನನ್ನ ವಿರುದ್ಧವಾಗಿ ಕಾಂಗ್ರೆಸ್ ನಿಂದ ಯಾರೇ ಸ್ಪರ್ಧಿಸಿದ್ದರೂ ಬಿಜೆಪಿ ಎದುರಿಸಲು ತಯಾರಿದ್ದು, ನಾವು ಬಹುಮತದೊಂದಿಗೆ ಗೆದ್ದು ಬರುತ್ತೇವೆ ಎಂದು ಹೇಳಿದರು.