ಕುಂದಾಪುರ: ಬೈಂದೂರು ವಿಧಾನಸಭೆ ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರಿಗೆ ಚುನಾವಣೆ ಟಿಕೆಟ್ ಮಿಸ್ ಆಗಿದೆ. ಹಲವು ಲೆಕ್ಕಾಚಾರವನ್ನು ಹಾಕಿಕೊಂಡಿದ್ದ ಬಿಜೆಪಿ ಪಕ್ಷದ ಹೈಕಮಾಂಡ್ ಹೊಸ ಅಭ್ಯರ್ಥಿಗೆ ಮಣೆ ಹಾಕಿದ್ದು, ಗುರುರಾಜ್ ಗಂಟಿಹೊಳೆ ಅವರಿಗೆ ಟಿಕೇಟ್ ನಿಶ್ಚಿತ ಎನ್ನಲಾಗಿದೆ.
ಕ್ಷೇತ್ರದ ಶಾಸಕರಿಗೆ ವಿಧಾನಸಭೆ ಚುನಾವಣೆ ಟಿಕೆಟ್ ಕೈತಪ್ಪಿದರ ಹಿನ್ನೆಲೆಯಲ್ಲಿ ಶಾಕರ ಮನೆಯಲ್ಲಿ ಆಪ್ತರು,ಕಾರ್ಯಕರ್ತರು,ಅಭಿಮಾನಿಗಳು ಸೇರಿದ್ದಾರೆ. ಬಿ.ಎಂ ಸುಕುಮಾರ್ ಶೆಟ್ಟಿ ಅವರಿಗೆ ಜೈಕಾರ ಹಾಕುತ್ತಾ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.
ರಾಜಕೀಯ ತೆವಲಿಗೆ ಬೈಂದೂರು ಕ್ಷೇತ್ರವನ್ನು ಬಲಿಪಶು ಮಾಡಿದ್ದಾರೆ ಎಂದು ಸಿಟ್ಟಿಗೆದ್ದಿರುವ ಅಭಿಮಾನಿಗಳು ರಾಜ್ಯ ಮಟ್ಟದ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಬೈಂದೂರು ಕ್ಷೇತ್ರ ಅಭಿವೃದ್ಧಿಗೆ ಹಗಲು ರಾತ್ರಿ ದುಡಿದ ಪಕ್ಷದ ನಿಷ್ಠಾವಂತ ವ್ಯಕ್ತಿಗೆ ಮಾಡಿದ ದ್ರೋಹವೆಂದು ಆಪಾದನೆ ಮಾಡಿರುವ ಶಾಸಕರ ಬೆಂಬಲಿಗರು ಪಕ್ಷದ ವಿರುದ್ಧವಾಗಿ ಸಿಡಿಮಿಡಿಗೊಂಡಿದ್ದಾರೆ. ಶಾಸಕರು ತಮ್ಮ ಬೆಂಬಲಿಗರೊಂದಿಗೆ ತಮ್ಮ ಗೃಹ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರ್ಯಕರ್ತರ ನಡುವಿನ ಅಂತರ ಮತ್ತು ಆರ್ಎಸ್ಎಸ್ ನಡುವೆ ಬಾಂಧವ್ಯ ಕೊರತೆ ಟಿಕೆಟ್ ಕೈ ತಪ್ಪಲು ಕಾರಣ ಎನ್ನಲಾಗುತ್ತಿದೆ.