ಉಡುಪಿ: ವಾಣಿಜ್ಯ ಬ್ಯಾಂಕ್ ಗಳಿಗಿಂತ ಸಹಕಾರಿ ಸಂಘಗಳು ಉತ್ತಮ ಸೇವೆ ನೀಡುತ್ತಿವೆ. ಆದ್ದರಿಂದ ಜನರು ಸಹಕಾರಿ ಸಂಘಗಳ ಮೇಲೆ ವಿಶ್ವಾಸ ಇಡಲು ಸಾಧ್ಯವಾಗಿದೆ. ವಾಣಿಜ್ಯ ಬ್ಯಾಂಕ್ ಗಳು ವಿಕಸನಗೊಳ್ಳದೇ ಸಂಕುಚಿತವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಹಾಗೂ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ ನಗರದ ಓಷನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಆರ್ಥಿಕ ವ್ಯವಹಾರದ ಕಾರ್ಯದಕ್ಷತೆ, ಆದಾಯ ತೆರಿಗೆ ಹಾಗೂ ಚುನಾವಣಾ ವಿಧಿ ವಿಧಾನ ಕುರಿತ ರಾಜ್ಯಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿರುವ ಐವತ್ತ ನಾಲ್ಕು ಸಹಕಾರಿ ಸಂಘಗಳು ಲಾಭದಲ್ಲಿದೆ. ಗ್ರಾಹಕರಿಗೆ ಸಿಗುತ್ತಿರುವ ನಗುಮೊಗದ ಸೇವೆಯೇ ಇದಕ್ಕೆ ಕಾರಣ ಎಂದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಉನ್ನತ ಮಟ್ಟದಲ್ಲಿದೆ. ಸಹಕಾರಿ ರಂಗಕ್ಕೆ ಸಂಕಷ್ಟ ಎದುರಾದಾಗ ಎಂ.ಎನ್ ರಾಜೇಂದ್ರ ಕುಮಾರ್ ಅವರು ನಡೆಸಿದ ಹೋರಾಟದ ಫಲವಾಗಿ ಈ ಮಟ್ಟಕ್ಕೆ ತಲುಪಲು ಸಾಧ್ಯವಾಗಿದೆ. ಉಡುಪಿ ಜಿಲ್ಲೆಯಲ್ಲಿಯೇ 4200 ಕೋಟಿ ರೂ ಠೇವಣಿ ಸಹಕಾರಿ ಕ್ಷೇತ್ರದಲ್ಲಿದೆ. ಇದಕ್ಕೆ ಜನರು ಇಟ್ಟ ನಂಬಿಕೆ, ವಿಶ್ವಾಸವೇ ಕಾರಣ ಎಂದು ಅಭಿಪ್ರಾಯಪಟ್ಟರು.
ಸಹಕಾರ ಸಂಘಗಳ ಉಪನಿಬಂಧಕ ಲಕ್ಷ್ಮೀನಾರಾಯಣ, ಲೆಕ್ಕ ಪರಿಶೋಧಕ ಸಂಘದ ನಿವೃತ್ತ ನಿಬಂಧಕ ಗಣೇಶ್ ಮಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ದೇವಿ ಪ್ರಸಾದ್ ಶೆಟ್ಟಿ, ರಾಜು ಪೂಜಾರಿ, ಅಶೋಕ್ ಕುಮಾರ್ ಬಳ್ಳಾಲ್, ಕಟಪಾಡಿ ಶಂಕರ ಪೂಜಾರಿ, ಹರೀಶ್ ಕಿಣಿ, ಯಶ್ ಪಾಲ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.