ಕುಂದಾಪುರ: ಬೈಂದೂರು ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಹೆಗ್ಡೆ ಹಾಗೂ ಇನ್ನೊರ್ವ ಟಿಕೆಟ್ ಆಕಾಂಕ್ಷಿ ಪ್ರಣಯ್ ಕುಮಾರ್ ಶೆಟ್ಟಿ ಮತ್ತು ಅವರ ಬೆಂಬಲಿಗರ ಉಪಸ್ಥಿತಿಯಲ್ಲಿ ಶಾಸಕರ ನಿವಾಸದಲ್ಲಿ ಬುಧವಾರ ತಡರಾತ್ರಿ ಸಭೆ ನಡೆದಿದೆ.
ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಅವರ ರಾಜಕೀಯ ಬದ್ದ ವೈರಿಗಳಾದ ಬಿಜೆಪಿ ಪಕ್ಷದ ಮುಖಂಡರುಗಳಾದ ಬಾಬು ಹೆಗ್ಡೆ ಮತ್ತು ಪ್ರಣಯ್ ಕುಮಾರ್ ಶೆಟ್ಟಿ ಜತೆ ಸೇರಿ ಶಾಸಕರು ತಮ್ಮ ನಿವಾಸದಲ್ಲಿ ಸಭೆ ನಡೆಸಿರುವುದು ರಾಜಕೀಯ ರಂಗದಲ್ಲಿ ಅಚ್ಚರಿ ಮೂಡಿಸಿದೆ.
ಸುಕುಮಾರ್ ಶೆಟ್ಟಿ ಅವರಿಗೆ ಬೈಂದೂರು ಕ್ಷೇತ್ರದ ಟಿಕೆಟ್ ತಪ್ಪಲು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಹೆಗ್ಡೆ ಹಾಗೂ ಪ್ರಣಯ್ ಕುಮಾರ್ ಶೆಟ್ಟಿ ಅವರ ಬಣದ ರಾಜಕಾರಣವೇ ಪ್ರಮುಖ ಕಾರಣ ಎನ್ನುವ ಸುದ್ದಿ ಬಿಜೆಪಿ ಪಕ್ಷದ ಕಾರ್ಯಕರ್ತರ ನಡುವೆ ಹರಿದಾಡುತ್ತಿದೆ.
ಬಿ.ಎಂ ಸುಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ಕೈ ತಪ್ಪಿದಕ್ಕೆ ಬೆಂಬಲಿಗರ ಆಕ್ರೋಶ
ಹಾಲಿ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಅವರಿಗೆ ಬೈಂದೂರು ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೆಂಬಲಿಗರೊಂದಿಗೆ ಗುರುವಾರ ತಮ್ಮ ನಿವಾಸದಲ್ಲಿ ಸಭೆಯನ್ನು ನಡೆಸಿದರು. ಬೈಂದೂರು ಕ್ಷೇತ್ರ ಟಿಕೆಟ್ ಸುಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ನಿರಾಕರಿಸಿದ್ದಕ್ಕೆ ರಾಷ್ಟ್ರೀಯ ನಾಯಕರ ವಿರುದ್ಧ ಆಕ್ರೋಶವನ್ನು ಹೊರಹಾಕಿ ಸಂಸದ ರಾಘವೇಂದ್ರ ಟಿಕೆಟ್ ತಪ್ಪಿರುವ ಬಗ್ಗೆ ಸ್ಪಷ್ಟವಾದ ಕಾರಣ ನೀಡಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರು ನೆರೆದಿದ್ದರು.
ಬೈಂದೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಅವರು ಬಿಜೆಪಿ ಗೊಂದಲದ ನಡುವೆ ಸೈಲೆಂಟ್ ಆಗಿ ಪ್ರಚಾರದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.