ಮಂಗಳೂರು: ಮಂಗಳೂರಿನ ಕುಂಟಿಕಾನದ ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಹಿರಿಯರ ಜೀವನದಲ್ಲಿ ಹೊಸ ಚೈತನ್ಯ ಮತ್ತು ಭರವಸೆ ಮೂಡಿಸುವ ನಿಟ್ಟಿನಲ್ಲಿ “ವೃದ್ಧಿ” – ಹಿರಿಯರ ಅಭಿವೃದ್ಧಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮವು ಆಸ್ಪತ್ರೆಯ ಕಾನ್ಫರೆನ್ಸ್ ಹಾಲ್ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಎಜೆ ಆಸ್ಪತ್ರೆಯ ಮುಖ್ಯ ವೈದ್ಯಕೀಯ ನಿರ್ದೇಶಕರಾದ ಡಾ.ಎ.ಜೆ ಶೆಟ್ಟಿ ಅವರು ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಎಲ್ಲಾ ರೀತಿಯ ರೋಗಗಳಿಗೆ ಚಿಕಿತ್ಸೆ ನೀಡಲು ನುರಿತ ವೈದ್ಯರ ತಂಡಗಳಿವೆ, ಈಗ ಹೊಸದಾಗಿ ಹಿರಿಯರಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಪ್ರಯೋಜನೆಯನ್ನು ಪಡೆದುಕೊಳ್ಳಿ ಎಂದರು.
ಉರ್ವ ಠಾಣೆಯ ಇನ್ಸಪೆಕ್ಟರ್ ಭಾರತಿ ಅವರು ಮಾತನಾಡಿ, ಪೊಲೀಸ್ ಇಲಾಖೆಯು ಹಲವು ಸಂಘ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳ ಸಹಯೋಗದಿಂದ ಮನೆ ಮನೆಗಳಿಗೆ ಭೇಟಿ ನೀಡಿ ಹಲವು ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿದ್ದೇವೆ. ಅದರಲ್ಲಿ ಬಹುಮುಖ್ಯ ಸಮಸ್ಯೆ ನಾವು ಕಂಡುಕೊಂಡಿರುವುದು ಹಿರಿಯ ನಾಗರಿಕರ ಆರೋಗ್ಯ ವಿಚಾರದಲ್ಲಿ ತುರ್ತು ಸೇವೆಯ ಅಗತ್ಯತೆಯಾಗಿತ್ತು. ಆದರೆ ಈಗ ಎಜೆ ಸಂಸ್ಥೆಯು ಮನೆಯ ಬಾಗಿಲಿಗೆ ಈ ತುರ್ತು ಸೇವೆಯನ್ನು ಕೈಗೆಟಕುವ ದರದಲ್ಲಿ ಮತ್ತು ಉಚಿತವಾಗಿ ನೀಡುತ್ತಿದ್ದು, ಇದರ ಉಪಯೋಗವನ್ನು ಪ್ರತಿಯೊಬ್ಬರು ಸ್ವೀಕರಿಸಿ ಎಂದರು.
ಪೇಜ್ ಮಂಗಳೂರಿನ ಉಪಾಧ್ಯಕ್ಷರಾದ ಡಾ.ಪ್ರಭಾ ಅಧಿಕಾರಿ ಅವರು ಮಾತನಾಡಿ, ಸಾಮಾನ್ಯವಾಗಿ ಹಿರಿಯ ನಾಗರಿಕರು ತಮ್ಮ ವೃದ್ದಾಪ್ಯವನ್ನು ಸ್ವತಂತ್ರವಾಗಿ ಕಳೆಯಬೇಕೆಂದು ಬಯಸುತ್ತಾರೆ. ಆದರೆ ಅವರಲ್ಲಿ ಸಾಮಾನ್ಯವಾಗಿ ಕಾಡುವ ಒಂದು ಪ್ರಶ್ನೆಯೆಂದರೆ ತಮಗೇನಾದರೂ ತುರ್ತು ಆರೋಗ್ಯ ಸಮಸ್ಯೆಯಾದರೆ ಯಾರು ಸಹಾಯ ಮಾಡುತ್ತಾರೆ ಎನ್ನುವುದು. ಅದಕ್ಕೆ ಪರಿಹಾರವೆಂಬಂತೆ ಎಜೆ ಆಸ್ಪತ್ರೆಯಿಂದ “ವೃದ್ಧಿ” ಯೋಜನೆ ಪ್ರಾರಂಭಿಸಿರುವುದು ಹಲವು ಹಿರಿಯ ನಾಗರಿಕರಿಗೆ ಸಹಾಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಪೇಜ್ ಮಂಗಳೂರಿನ ಅಧ್ಯಕ್ಷರಾದ ಡಾ.ಸಿ.ವಿ.ರಘುವೀರ್, ವೈದ್ಯಕೀಯ ನಿರ್ದೇಶಕರಾದ ಡಾ.ಪ್ರಶಾಂತ್ ಮಾರ್ಲ, ಆಡಳಿತ ನಿರ್ದೇಶಕರಾದ ಡಾ.ಅಮಿತ ಮಾರ್ಲ, ಜನರಲ್ ಮೆಡಿಸಿನ್ ವಿಭಾಗದ ಪ್ರೋಫೇಸರ್ ಡಾ.ರಮೇಶ್ ಪೈ, ಮಹಿಳಾ ವೇದಿಕೆಯ ಅಧ್ಯಕ್ಷೆ ಕುಸುಮಾ ಎನ್ ರಾವ್ ಉಪಸ್ಥಿತರಿದ್ದರು.
ವಯೋವೃದ್ಧರ ಆರೈಕೆ, ಅವರ ಆರೋಗ್ಯದ ಬಗ್ಗೆ ಜಾಗೃತಿ, ಅವರ ಜೀವನಕ್ಕೆ ಸಂತೋಷದಾಯಕ ವೇದಿಕೆಯನ್ನು ಕಲ್ಪಿಸುವುದು ಹಾಗೂ ನಿರಂತರವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮಾಡುವುದು “ವೃದ್ಧಿ” ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ಯೋಜನೆಯು ವಯಸ್ಸಾದವರ ಸಮಗ್ರ ಆರೈಕೆಯ ಮೇಲೆ ಕೇಂದ್ರೀಕೃತವಾಗಿದ್ದು ಹಿರಿಯರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಈ ಯೋಜನೆಯು ಹೊಂದಿದೆ.