ಮೂಡುಬಿದಿರೆ: ಮೂಡುಬಿದಿರೆ-ಬಂಟ್ವಾಳ, ಮೂಡುಬಿದಿರೆ-ಧರ್ಮಸ್ಥಳಕ್ಕೆ ಬೇರ್ಪಡುವ ರಸ್ತೆಯ ಬಳಿ ಅವೈಜ್ಞಾನಿಕ ರೀತಿಯಲ್ಲಿ ವೃತ್ತವು ನಿರ್ಮಾಣಗೊಳ್ಳುತ್ತಿದೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮೂಡುಬಿದಿರೆಯ ಅಭಿವೃದ್ಧಿಯ ಹರಿಕಾರ, ಸಮಾಜ ಮಂದಿರ, ಮಹಾವೀರ ಕಾಲೇಜು, ಜಿ.ವಿ.ಪೈ ಆಸ್ಪತ್ರೆಯ ಸ್ಥಾಪಕರಾಗಿರುವ ಎಸ್.ಎನ್ಮೂಡುಬಿದಿರೆ ಅವರ ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡಬೇಕೆಂದು ಪುರಸಭೆಯಲ್ಲಿ ಚರ್ಚಿಸಲಾಗಿತ್ತು. ಆದರೆ ಆಡಳಿತ ಪಕ್ಷದವರು ಬೇರೆ ಹೆಸರನ್ನು ಇಡುತ್ತಿದ್ದಾರೆಂದು ಆರೋಪಿಸಿದ ಅವರು ಇದೀಗ ತಾನೇ ಅಭಿವೃದ್ಧಿಯ ಹರಿಕಾರನೆಂದು ಬೊಗಳೆ ಬಿಡುವ ಶಾಸಕ ಎಲ್ಲಾ ಕಾಮಗಾರಿಗಳಲ್ಲೂ ಭ್ರಷ್ಟಾಚಾರವನ್ನು ಮಾಡುತ್ತಿದ್ದಾರೆ. ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸುತ್ತಿರುವ ವೃತ್ತವನ್ನು ಸರಿಪಡಿಸದಿದ್ದರೆ ಪಿಡಬ್ಲುö್ಯ ಇಲಾಖೆಯ ಎದುರು ಧರಣಿ ನಡೆಸಲಾಗುವುದು ಎಂದರು.
ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಮಾತನಾಡಿ, ಕಳೆದ ಒಂದು ವಾರದಿಂದ ವೃತ್ತದ ಕಾಮಗಾರಿ ಆರಂಭಗೊಂಡಿದ್ದು ಅವೈಜ್ಞಾನಿಕ ರೀತಿಯಲ್ಲಿ ವೃತ್ತ ನಿರ್ಮಾಣವಾಗುತ್ತಿದೆ.ಧರ್ಮಸ್ಥಳ , ಬಂಟ್ವಾಳಕ್ಕೆ ಹೋಗುವ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇಲ್ಲಿ ಏನಾದರೂ ಅನಾಹುತ ನಡೆದರೆ ಅದಕ್ಕೆ ಪುರಸಭೆಯ ಬಿಜೆಪಿಯ ಆಡಳಿತವೇ ಕಾರಣ. ಎರಡು ದಿನಗಳಲ್ಲಿ ಇದನ್ನು ತೆಗೆದು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸದಿದ್ದರೆ ತಾವು ಬಿಡಲಾರೆವು ಎಂದು ಎಚ್ಚರಿಸಿದ ಅವರು ಎಸ್.ಎನ್.ಮೂಡುಬಿದಿರೆಯ ಹೆಸರನ್ನು ವೃತ್ತಕ್ಕೆ ಇಡಬೇಕೆಂದು ನಾವು ಸೂಚಿಸಿದ್ದೆವು ಆದರೆ ಬಿಜೆಪಿಯವರ ಹುನ್ನಾರದಿಂದ ಹೆಸರನ್ನು ಬದಲಾಯಿಸಲಾಗಿದೆ ಎಂದರು.
ಪುರಸಭಾ ಸದಸ್ಯರಾದ ಕೊರಗಪ್ಪ, ಪಿ.ಕೆ.ಥೋಮಸ್, ಜೊಸ್ಸಿ ಮಿನೇಜಸ್, ಸುರೇಶ್ ಪ್ರಭು, ಹಿಮಾಯುತ್ತುಲ್ಲಾ, ಪುರಂದರ ದೇವಾಡಿಗ, ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ಮತ್ತಿತರರು ಭಾಗವಹಿಸಿದ್ದರು.