ಮಣಿಪಾಲ: ಆಮ್ ಆದ್ಮಿ ಪಕ್ಷದ ಮುಖಂಡ ಮನೀಶ್ ಸಿಸೋಡಿಯಾ ಅಕ್ರಮ ಬಂಧನ ಖಂಡಿಸಿ ಆಮ್ ಆದ್ಮಿ ಪಕ್ಷದ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪೊರಕೆ ಹಿಡಿದು ಪ್ರತಿಭಟನೆ ಮಾಡಲಾಯಿತು.
ನೂರಾರು ಸಂಖ್ಯೆಯ ಆಪ್ ಕಾರ್ಯಕರ್ತರು ಮಣಿಪಾಲ ಕಾಯಿನ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪೊರಕೆ ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಿಬಂದರು.
ಈ ಸಂದರ್ಭದಲ್ಲಿ ಆಪ್ ಮುಖಂಡ ಪ್ರಭಾಕರ್ ಪೂಜಾರಿ ತೊಟ್ಟಂ ಮಾತನಾಡಿ, ಕೇಂದ್ರ ಸರಕಾರ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮನೀಶ್ ಸಿಸೋಡಿಯಾ ಅವರನ್ನು ಬಂಧಿಸುವ ಮೂಲಕ ಪ್ರಜಾಪ್ರಭುತ್ವದ ಹಕ್ಕನ್ನು ಕಸಿದುಕೊಂಡಿದೆ ಎಂದು ದೂರಿದರು.
ದೆಹಲಿ ಅಬಕಾರಿ ನೀತಿಗೆ ದೆಹಲಿಯ ಲೆಫ್ಟಿನೆಂಟ್ ಗರ್ವನರ್ ಸಹಿ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಗರ್ವನರ್ ಮೊದಲ ಆರೋಪಿ ಆಗಬೇಕು. ಕಾನೂನು ಎಲ್ಲರಿಗೂ ಒಂದೇ ಎಂದು ವಾಗ್ದಾಳಿ ನಡೆಸಿದ್ರು.
ಆಪ್ ಮುಖಂಡರಾದ ದೀನಾ ಪ್ರಭಾಕರ್ ಪೂಜಾರಿ, ಜಯರಾಜ್, ಜೈ ಕಿಶನ್ ಪೂಜಾರಿ, ಆಶ್ಲೇ ಕಾರ್ನೆಲಿಯೋ, ಸ್ಟಿಫನ್ ರಿಚಾರ್ಡ್ ಲೋಬೋ, ರಮೇಶ್ ಕೋಟ್ಯಾನ್, ವಿಜಯಾನಂದ್ ಪಾಂಗಾಳ, ದಿನೇಶ್ ರಾವ್ ಹಾಗೂ ಆಮ್ ಆದ್ಮಿ ಪಕ್ಷದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.