ಪುತ್ತೂರು: ಕೇಂದ್ರ ಗೃಹಮಂತ್ರಿ ಅಮಿತ್ ಶಾ ಗೆ ದಕ್ಷಿಣಕನ್ನಡಕ್ಕೆ ಬರಲು ಜೀವ ಭಯವಿರುವ ಕಾರಣ, ಜಿಲ್ಲೆಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಆರ್ ಎಸ್ ಎಸ್ ಭದ್ರಕೋಟೆಯಾಗಿರುವ ದಕ್ಷಿಣಕನ್ನಡದಲ್ಲಿ ಬಜರಂಗದಳದವರೇ ಕೇಂದ್ರ ಗೃಹಮಂತ್ರಿಗೆ ರಕ್ಷಣೆ ನೀಡಲಿ ಎಂದು ಕಾಂಗ್ರೆಸ್ ಮುಖಂಡ ಮಹಮ್ಮದ್ ಆಲಿ ಆಗ್ರಹಿಸಿದ್ಧಾರೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾತನಾಡಿದ ಅವರು ಫೆಬ್ರವರಿ 11 ರಂದು ಕೇಂದ್ರ ಗೃಹಸಚಿವ ಅಮಿತ್ ಶಾ ಕ್ಯಾಂಪ್ಕೋ ಸುವರ್ಣ ವರ್ಷಾಚರಣೆ ಸಮಾರಂಭದಲ್ಲಿ ಭಾಗವಹಿಸಲು ಪುತ್ತೂರಿಗೆ ಬರುತ್ತಿದ್ದು, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಗೃಹಸಚಿವರಿಗೆ ಇಷ್ಟೊಂದು ಭದ್ರತೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.
ಗೃಹಸಚಿವರ ಭೇಟಿ ಹಿನ್ನಲೆಯಲ್ಲಿ ಬೇರೆ ಬೇರೆ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯ ಪೊಲೀಸರನ್ನು ಪುತ್ತೂರಿನಲ್ಲಿ ನಿಯೋಜಿಸಲಾಗಿದೆ. ಆರ್ ಎಸ್ ಎಸ್ ಸಂಘಟನೆಯ ಮೂಲನೆಲೆಯಾಗಿರುವ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಲು ಅಮಿತ್ ಶಾ ರಿಗೆ ಜೀವಭಯವಿದೆ.
ಜಿಲ್ಲೆಯ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಗೃಹಮಂತ್ರಿಗೆ ಭದ್ರತೆ ಕೊಡುವ ಎಲ್ಲಾ ಅರ್ಹತೆ ಇರುವಾಗ ಇಷ್ಟೊಂದು ಪ್ರಮಾಣದ ಪೊಲೀಸರ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.
ಜಿಲ್ಲೆಗೆ ಆಗಮಿಸುವ ಅಮಿತ್ ಶಾ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆಗಾರರ ಸಂಸ್ಥೆಯಾದ ಕ್ಯಾಂಪ್ಕೋವನ್ನು ಕೂಡಾ ಗುಜರಾತಿನ ವ್ಯಾಪಾರಿಗಳಿಗೆ ಮಾರಾಟ ಮಾಡದಿದ್ದರೆ ಸಾಕು ಎಂದು ವ್ಯಂಗ್ಯವಾಡಿದರು.