ಉಜಿರೆ: ಪೇಟೆಯ ರಸ್ತೆಗಳ ಪರಿಸದಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆ, ಫುಟ್ ಪಾತ್ ಗಳಲ್ಲಿ ವಾಹನ ಪಾರ್ಕಿಂಗ್ ಮಾಡುವುದರಿಂದ ಸಾರ್ವಜನಿಕರು,ಶಾಲಾ ಮಕ್ಕಳು,ಹಿರಿಯ ನಾಗರಿಕರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಉಜಿರೆಯಲ್ಲಿ ರಸ್ತೆಗಳನ್ನು ದಾಟುವುದು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಬಹು ಕಾಲದ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸುವ ಅಗತ್ಯ ಇದೆ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಉಜಿರೆ ಗ್ರಾಮ ಪಂಚಾಯಿತಿಯ ಗ್ರಾಮಸಭೆಯು ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಶಾರದಾ ಮಂಟಪದಲ್ಲಿ ಜೂ.6ರಂದು ಸಭೆ ಜರಗಿತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಳೆದ ಕೆಲವು ಸಮಯದ ಹಿಂದೆ ಪಾರ್ಕಿಂಗ್ ನ ಸೂಕ್ತ ವ್ಯವಸ್ಥೆಗೆ ಗ್ರಾಮಸ್ಥರ ವಾಹನ ಸವಾರರ,ಚಾಲಕರ ಹಾಗೂ ಇಲಾಖೆಗಳ ಸಮ್ಮುಖದಲ್ಲಿ ಸಭೆ ಕರೆಯಲಾಗಿತ್ತು.ಆದರೆ ಆ ಸಮಯ ಅಗತ್ಯ ಇಲಾಖೆಗಳ ಗೈರಿನಿದ ಸಭೆ ಅಪೂರ್ಣವಾಗಿ ತ್ತು. ಮುಂದಿನ ಕೆಲವೇ ದಿನಗಳಲ್ಲಿ ಈ ಬಗ್ಗೆ ಸಭೆ ಕರೆದು,ಪಂಚಾಯಿತಿಯಿಂದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು.
ಪೇಟೆ ವ್ಯಾಪ್ತಿಯಲ್ಲಿರುವ ಫ್ಲೆಕ್ಸ್,ಬ್ಯಾನರ್,ಶಾಶ್ವತ ಫಲಕಗಳನ್ನು ಅಳವಡಿಸಲು ಪಂಚಾಯಿತಿಯಿಂದ ಅನುಮತಿ ಪಡೆಯಲಾಗಿದೆಯೆ ಎಂಬ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದ ಪಿಡಿಒ ಅನುಮತಿ ಯಿಲ್ಲದೆ ಅಳವಡಿಸಲಾದ ಫಲಕಗಳನ್ನು ಗುರುತಿಸಿ ಅವುಗಳನ್ನು ಒಂದು ವಾರದಲ್ಲಿ ತೆರವು ಗೊಳಿಸುವುದಾಗಿ ತಿಳಿಸಿದರು.
ಶಾಶ್ವತ ಫಲಕ ಅಳವಡಿಸಲು ಪಂಚಾಯಿತಿ ಅನುಮತಿ ನೀಡುತ್ತಿಲ್ಲ. ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಗಳಿಂದ ಎನ್ ಒ ಸಿ ಕೆಳಲಾಗುತ್ತಿದ್ದು ರಸ್ತೆ ಅಭಿವೃದ್ದಿ ಆಗಲಿರುವ ಕಾರಣ ಎನ್ ಒಸಿ ಸಿಗುತ್ತಿಲ್ಲ, ಹಾಗಾಗಿ ಪಂಚಾಯಿತಿವತಿಯಿಂದ ತಾತ್ಕಾಲಿಕ ಅನುಮತಿ ನೀಡಲು ತಿಳಿಸಲಾಯಿತು.
ಸರಾಸರಿ ಬಿಲ್ ಹೊರೆ
ಗ್ರಾಮದಲ್ಲಿರುವ 2,000 ಕ್ಕಿಂತ ಅಧಿಕ ಕುಡಿಯುವ ನೀರಿನ ಮೀಟರ್ ಗಳ ರೀಡಿಂಗ್ ನಡೆಸಬೇಕು. ಪ್ರಸ್ತುತ ಸರಾಸರಿ ಬಿಲ್ಲು ಹಾಕಲಾಗುತ್ತಿದ್ದು ಇದು ಕೆಲವರಿಗೆ ಹೊರೆಯಾಗುತ್ತಿದೆ ಎಂಬ ವಿಚಾರ ಚರ್ಚೆಗೆ ಬಂತು. ಹೆಚ್ಚಿನ ಕಡೆ ಮೀಟರ್ ಹಾಳಾಗಿದ್ದು ಈ ರೀತಿ ಮಾಡಲಾಗುತ್ತಿದೆ ಮುಂದಿನ ಕೆಲವೇ ತಿಂಗಳುಗಳಲ್ಲಿ ಜಲಜೀವನ್ ಮಿಷನ್ ವತಿಯಿಂದ ಉತ್ತಮ ಮಟ್ಟದ ಮೀಟರ್ ಗಳು ಅಳವಡಿಕೆಯಾಗಲಿವೆ ಆ ಬಳಿಕ ಪ್ರತಿ ತಿಂಗಳು ರೀಡಿಂಗ್ ನಡೆಸುವುದಾಗಿ ಸಭೆಗೆ ತಿಳಿಸಲಾಯಿತು.
ಭೂ ಪರಿವರ್ತನೆಗೊಂಡ ಭೂಮಿಗಳ ದಾಖಲಿಕರಣ, ಮೆಸ್ಕಾಂಗೆ ಸಬ್ ಸ್ಟೇಷನ್ ನಿರ್ಮಿಸಲು 10 ಎಕರೆ ಜಾಗ ಗುರುತಿಸುವಂತೆ, ಹಾಗೂ ಮುಂದಿನ ಬಾರಿಯಿಂದ ಗ್ರಾಮ ಸಭೆಗೆ ರಾಷ್ಟ್ರೀಕೃತ ಬ್ಯಾಂಕಿನ ಅಧಿಕಾರಿಗಳನ್ನು ಭಾಗವಹಿಸಲು ಆಹ್ವಾನಿಸುವಂತೆ, ಹಾಗೂ ಅಗತ್ಯ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗದಂತೆ ಗ್ರಾಮಸ್ಥರಿಂದ ಆಗ್ರಹ ವ್ಯಕ್ತವಾಯಿತು. ಮೆಸ್ಕಾಂ,ಆರೋಗ್ಯ, ಕೃಷಿ,ತೋಟಗಾರಿಕೆ, ಕಂದಾಯ,ಪೋಲಿಸ್, ಅರಣ್ಯ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿದರು. ಕಾರ್ಯದರ್ಶಿ ಶ್ರಾವಣ ಕುಮಾರ್ ವರದಿ ವಾಚಿಸಿದರು. ಸಿಬ್ಬಂದಿ ರಮೇಶ್ ವಾರ್ಡ್ ಸಭೆಯ ಬೇಡಿಕೆಗಳ ಪಟ್ಟಿ ಮಂಡಿಸಿದರು.ಉಮೇಶ್ ವಸತಿ ಪಟ್ಟಿ ವಾಚಿಸಿದರು.