ಸುರತ್ಕಲ್: ಕಳೆದ ಸೋಮವಾರ ಆಕಸ್ಮಿಕ ಬೆಂಕಿ ಅವಘಡಕ್ಕೆ ತುತ್ತಾಗಿ ಮನೆ ಕಳೆದುಕೊಂಡಿರುವ ಕಾವೂರು ಪಳನೀರು ನಿವಾಸಿ ಇಂದಿರಾರವರ ಹೊಸ ಮನೆಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಭರತ್ ಶೆಟ್ಟಿ ವೈ. ಅವರು ಗುರುವಾರ ಭೂಮಿ ಪೂಜೆ ನೆರವೇರಿಸಿದರು.
ಇಂದಿರಾ ಅವರು ಮನೆಯಲ್ಲಿ ಇಲ್ಲದ ವೇಳೆ ಬೆಂಕಿ ಅನಾಹುತ ಉಂಟಾಗಿದ್ದು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಸುಟ್ಟು ಭಸ್ಮವಾಗಿತ್ತು. ಶಾಸಕರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಇಂದಿರಾ ಕುಟುಂಬವನ್ನು ಬಾಡಿಗೆ ಮನೆಗೆ ಸಾಗಿಸಿ ಅವರಿಗೆ ರೇಷನ್ ಮತ್ತಿತರ ಅಗತ್ಯ ಸೌಕರ್ಯ ಕಲ್ಪಿಸಲು ನೆರವಾಗಿದ್ದರು.
ಇಂದಿರಾ ಹಾಗೂ ಸುರತ್ಕಲ್ ಬಳಿಯ ಬಾಂಗ್ಲಾ ಕಾಲನಿಯಲ್ಲಿ ಬೆಂಕಿ ಅನಾಹುತಕ್ಕೆ ಮನೆ ಕಳೆದುಕೊಂಡಿರುವ ಉಮೇಶ್ ಆಚಾರ್ಯ ಕುಟುಂಬಕ್ಕೆ ದಾನಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ನೆರವಿನಿಂದ ಹೊಸ ಮನೆ ನಿರ್ಮಿಸಿಕೊಡುವುದಾಗಿ ಶಾಸಕ ಭರತ್ ಶೆಟ್ಟಿ ಅವರು ಭರವಸೆ ನೀಡಿದ್ದರು. ಅದರಂತೆ ಗುರುವಾರ ಹೊಸ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದು ಕೂಡಲೇ ಮನೆಯ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದಾರೆ. ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.