ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ (ಇಸ್ಕಾನ್) ಮಂಗಳೂರು ಶಾಖೆಯ ಆಶ್ರಯದಲ್ಲಿ ಸೆಪ್ಟೆಂಬರ್ 6 ಮತ್ತು 7ರಂದು ನಗರದ ಕೊಡಿಯಾಲ್ಬೈಲ್ನ ಪಿವಿಎಸ್ ಕಲಾಕುಂಜ ಸಭಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಆಚರಿಸಲಾಗುವುದು ಎಂದು ಇಸ್ಕಾನ್ ಮಂಗಳೂರು ಅಧ್ಯಕ್ಷ ಗುಣಕರ ರಾಮದಾಸ ತಿಳಿಸಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 2 ಮತ್ತು 3ರಂದು ದೇವಾಲಯದ ಸಭಾಂಗಣದಲ್ಲಿ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಉತ್ಸವದ ಏರ್ಪಡಿಸಲಾಗಿದೆ. ಭರತನಾಟ್ಯ , ಪ್ರಬಂಧ, ಭಜನೆ, ಚಿತ್ರಕಲಾ ಮತ್ತು ಕೃಷ್ಣವೇಷ ಸ್ಪರ್ಧೆಗಳು ನಡೆಯಲಿವೆ. ಎರಡು ಅನಾಥಾಶ್ರಮಗಳ ಮಕ್ಕಳಿಗೆ ವಿಶೇಷ ಆಮಂತ್ರಣ ನೀಡಿ ಅವರಿಗೆ ಪ್ರಸಾದ ನೀಡಲಾಗುವುದು’ ಎಂದರು.
ಭಕ್ತರು ಹರಿನಾಮ ಜಪ ಮಂತ್ರವನ್ನು ಜಪಿಸಿ 108 ಹೆಜ್ಜೆಗಳನ್ನು ದಾಟುವ ಕಾರ್ಯಕ್ರಮಕ್ಕೆ ವಿಶೇಷ ವೇದಿಕೆ ನಿರ್ಮಿಸಲಾಗಿದೆ. ಕೃಷ್ಣನ ಜನ್ಮಸ್ಥಳ ಮಥುರಾದಿಂದ ತರುವ ವಿಶೇಷ ರಕ್ಷೆಯನ್ನು ಭಕ್ತರಿಗೆ ಕಟ್ಟಲಾಗುವುದು ಎಂದು ಹೇಳಿದರು.
ಸೆ.6ರಂದು ಬೆಳಿಗ್ಗೆ 7ಗಂಟೆಗೆ ಶೃಂಗಾರ, ಅಲಂಕಾರ ಪೂಜೆ, 8ಕ್ಕೆ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ, 9 ಗಂಟೆಗೆ ಬೆಣ್ಣೆ ಕೃಷ್ಣನಿಗೆ ತೊಟ್ಟಿಲು ಸೇವೆ, ಮಧ್ಯಾಹ್ನ 12ಕ್ಕೆ ರಾಜಭೋಗ ಆರತಿ, ಸಂಜೆ 4ಕ್ಕೆ ಭಜನೆ, 4ಕ್ಕೆ ಅಭಿಷೇಕ, 8.15ಕ್ಕೆ ಮಹಾಪೂಜೆ ನಡೆಯಲಿದೆ. ಸೆ.7ರಂದು ಬೆಳಿಗ್ಗೆ 7ಕ್ಕೆ ಶೃಂಗಾರ, ಅಲಂಕಾರ ಪೂಜೆ, 8ಕ್ಕೆ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ, 9ಕ್ಕೆ ಬೆಣ್ಣೆ ಕೃಷ್ಣನಿಗೆ ತೊಟ್ಟಿಲು ಸೇವೆ, ಮಧ್ಯಾಹ್ನ 12ಕ್ಕೆ ರಾಜಭೋಗ ಆರತಿ, ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೆ ಭಜನೆ, 9ಕ್ಕೆ ಮಹಾಭಿಷೇಕ, ಮಧ್ಯರಾತ್ರಿ 12 ಗಂಟೆಗೆ ಮಹಾ ಮಂಗಳಾರತಿ ನಡೆಯಲಿದೆ. ಭಕ್ತರು ಹೂ, ಹಣ್ಣು, ತೆಂಗಿನಕಾಯಿ, ತುಳಸಿ ಅರ್ಪಿಸಬಹುದು. ಬೆಳಿಗ್ಗೆ 9ರಿಂದ ರಾತ್ರಿ 12 ಗಂಟೆಯವರೆಗೆ ಪ್ರಸಾದ ವಿತರಣೆ ನಡೆಯಲಿದೆ ಎಂದರು. ಕಾರ್ಯದರ್ಶಿ ಸನಂದನದಾಸ, ಜತೆ ಕಾರ್ಯದರ್ಶಿ ಸುಂದರಗೌರ ದಾಸ ಇದ್ದರು.