ಮಂಗಳೂರು: ನಾಡಿನಾದ್ಯಂತ ಭ್ರಾತೃತ್ವದ ಮಹತ್ವ ಸಾರುವ ರಕ್ಷಾಬಂಧನ ಹಬ್ಬದ ತಯಾರಿ ಜೋರಾಗಿದೆ. ಈ ಹಬ್ಬದಂದು ತಂಗಿಯರು ಅಣ್ಣನ ಕೈಗೆ ರಾಖಿ ಕಟ್ಟುವ ಮೂಲಕ ಆಶೀರ್ವಾದ ಪಡೆಯುತ್ತಾರೆ. ಅಲ್ಲದೇ ಅಣ್ಣ ದೀರ್ಘಾಯಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಮೊದಲಿಗೆ ಮನೆಯಲ್ಲಿಯೇ ನೂಲು ಬಳಸಿ ರಾಖಿ ಸಿದ್ಧ ಮಾಡಲಾಗುತ್ತಿತ್ತು. ಆದ್ರೆ ಈಗ ಕಾಲ ಬದಲಾಗಿದ್ದು, ಬಗೆ ಬಗೆಯ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ ಅದಕ್ಕೆಲ್ಲ ಸೆಡ್ಡು ಹೊಡೆಯುವಂತೆ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬದಲು ಪರಿಸರ ಪೂರಕ ತರಕಾರಿ ಗಿಡವಾಗಿ ಮೊಳಕೆಯೊಡೆಯುವ ರಾಖಿಗಳನ್ನು ಸಿದ್ದಪಡಿಸುವ ಮಂಗಳೂರಿನ ರಾಖಿ ಬಾಯ್ ಈ ಬಾರಿ ದೇಶಿಯ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗೆ ಲಗ್ಗೆ ಹಾಕಿದ್ದಾರೆ.
ಹೌದು. . .ಮಂಗಳೂರಿನ ಪಕ್ಷಿಕೆರೆ ಬಳಿಯ ಪೇಪರ್ ಸೀಡ್ ಎನ್ನುವ ಎನ್ ಜಿ ಒ ಸಂಸ್ಥೆಯ ಮೂಲಕ ಪರಿಸರ ಪೂರಕ ವಸ್ತುಗಳನ್ನು ಸಿದ್ದಪಡಿಸುವ ನಿತಿನ್ ವಾಸ್ ಈ ಬಾರಿಯ ರಕ್ಷಾ ಬಂಧನಕ್ಕೆ ಕಾರ್ಡ್ ಬೋರ್ಡ್ಗಳನ್ನು ಬಳಸಿ ರಾಖಿ ಸಿದ್ದಪಡಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಇಕೋ ಗ್ರೀನ್ ಕಲ್ಪನೆ ಯಲ್ಲಿ ನಾನಾ ವಸ್ತುಗಳನ್ನು ಸಿದ್ದಪಡಿಸಿ ನಿತಿನ್ ಜನರಲ್ಲಿ ಪರಿಸರ ಜಾಗೃತಿ ಹುಟ್ಟು ಹಾಕುತ್ತಿದ್ದಾರೆ.
ನಿತಿನ್ ವಾಸ್ ಈ ಬಾರಿ ಕಾರ್ಡ್ ಬೋರ್ಡ್ ಗಳನ್ನು ಪುಟ್ಟದಾಗಿ ಹುಡಿ ಮಾಡಿ ಅದನ್ನು ರಾಖಿಯಾಗಿ ಬದಲಾಯಿಸುತ್ತಾರೆ. ಆದರೆ ಮಳೆಗಾಲದಲ್ಲಿ ಇದು ಬೇಗನೆ ಒದ್ದೆಯಾಗುತ್ತದೆ ಎನ್ನುವ ಉದ್ದೇಶದಿಂದ ಕಾರ್ಡ್ ಬೋರ್ಡ್ ಹುಡಿಯಿಂದ ರಾಖಿ ಸಿದ್ದಪಡಿಸಿ ತೆಳುವಾದ ಲೆಟೆಕ್ಸ್ ಹೊದಿಕೆ ಹಾಕಿದರೆ ಬೇಗನೆ ಒದ್ದೆಯಾಗದ ರಾಖಿಗಳು ಸಿದ್ಧವಾಗುತ್ತದೆ.
ಮಳೆ ಬಿದ್ದರೂ ಕರಗದ ನೈಸರ್ಗಿಕ ಬಣ್ಣಗಳನ್ನು ಈ ಬಾರಿ ಪ್ರಯೋಗಿಸಲಾಗಿದೆ. ಇದರಿಂದ ಮಳೆಗೆ ಬಣ್ಣಗಳು ಕರಗಿ ಬಟ್ಟೆಗಳಿಗೆ ಬೀಳುವ ಸಾಧ್ಯತೆಗಳು ಕಡಿಮೆ ಇರುತ್ತದೆ. ರಾಖಿಗೆ ಕಟ್ಟುವ ಹಗ್ಗವನ್ನು ಸಿದ್ದಪಡಿಸುವ ಹೊಣೆಗಾರಿಕೆಯನ್ನು ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀಡುವ ಮೂಲಕ ಅವರಿಗೆ ಆದಾಯ ವೃದ್ಧಿಗೂ ನಿತಿನ್ ಸಹಕಾರಿಯಾಗಿದ್ದಾರೆ.
ಈ ಬಾರಿಯ ವಿಶೇಷ ಎಂದರೆ ರಾಖಿಯನ್ನು ಮಣ್ಣಿಗೆ ಹಾಕಿದರೆ ಅಲ್ಲಿ ಹರಿವೆ, ಮೂಲಂಗಿ, ಬದನೆಕಾಯಿ ಸೇರಿದಂತೆ ತರಹೇವಾರಿ ಗಿಡಗಳು ಹುಟ್ಟುವಂತೆ ರಾಖಿಯ ಹಿಂಭಾಗದಲ್ಲಿ ಬೀಜಗಳನ್ನು ಇಡಲಾಗಿದೆ. ರಕ್ಷಾಬಂಧನ ಬರೀ ಒಂದು ದಿನವನ್ನಾಗಿ ಆಚರಣೆಯಾಗುವ ಬದಲು ಅದೊಂದು ಬದುಕಿನ ಪುಟಕ್ಕೆ ಹಸಿರಿನ ಹೂರಣ ತರುವುದು ನಿತಿನ್ ಅವರ ಉದ್ದೇಶವಾಗಿದೆ.