ಮಂಗಳೂರು: ನಗರದ ಚೆಸ್ ಆಟಗಾರ ಡಾ.ಶುಭಾನಂದ ರಾವ್ ಮತ್ತು ಜ್ಯೋತಿ ಎಸ್.ರಾವ್ ಅವರ ಪುತ್ರ ಶರಣ್ ರಾವ್ ಇಂಟರ್ನ್ಯಾಷನಲ್ ಮಾಸ್ಟರ್ (ಐಎಂ) ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ. ಆಸ್ಟ್ರಿಯಾದಲ್ಲಿ ಜುಲೈ 15ರಂದು ಮುಕ್ತಾಯಗೊಂಡ ಸೇಂಟ್ ವೇಟ್ ಜಾಕ್ಸ್ ಲೇಮಾನ್ಸ್ ಓಪನ್ ಟೂರ್ನಿಯಲ್ಲಿ ಅವರು ಈ ಸಾಧನೆ ಮಾಡಿದರು. ಯುರೋಪ್ ಪ್ರವಾಸದಲ್ಲಿರುವ ಅವರು ಜೆಕ್ ಗಣರಾಜ್ಯದ ಪ್ರಾಗ್ನಲ್ಲಿ ನಡೆದ ಟೂರ್ನಿಯಲ್ಲಿ ಐಎಂ ಪಟ್ಟದ ಮೂರನೇ ನಾರ್ಮ್ ಗಳಿಸಿದ್ದರು. ಅವರು ಐಎಂ ಪಟ್ಟ ಪಡೆದ ಕರ್ನಾಟಕದ ಹತ್ತನೇ ಆಟಗಾರ.
ಒಂಬತ್ತು ಸುತ್ತುಗಳ ಸೇಂಟ್ ವೇಟ್ ಜಾಕ್ಸ್ ಲೇಮಾನ್ಸ್ ಓಪನ್ ಟೂರ್ನಿಯಲ್ಲಿ 7.5 ಪಾಯಿಂಟ್ ಕಲೆ ಹಾಕಿದ್ದ ಶರಣ್ ಎರಡನೇ ಸ್ಥಾನ ಪಡೆದಿದ್ದಾರೆ. ಅಂತಿಮ ಸುತ್ತಿನಲ್ಲಿ ಜರ್ಮನಿಯ ಸೆಬಾಸ್ಟಿಯನ್ ಹಫ್ಮ್ಯಾನ್ ವಿರುದ್ಧ ಜಯ ಸಾಧಿಸುವುದರೊಂದಿಗೆ ರೇಟಿಂಗ್ನಲ್ಲಿ 2400ರ ಗಡಿ ದಾಟಿದರು.
ಇಲ್ಲಿನ ಲಾಲ್ಬಾಗ್ ನಿವಾಸಿಗಳಾದ ಶುಭಾನಂದ ರಾವ್ ಮತ್ತು ಜ್ಯೋತಿ ರಾವ್ ಅವರ ಪುತ್ರ ಶರಣ್ ಇಂಟರ್ನ್ಯಾಷನಲ್ ಮಾಸ್ಟರ್ ಪಟ್ಟದ ಮೊದಲ ನಾರ್ಮ್ ಗಳಿಸಿದ್ದು 2021ರಲ್ಲಿ. ಸ್ಪೇನ್ನ ಬಾರ್ಸಿಲೋನಾದಲ್ಲಿ ನಡೆದ ಸನ್ವೇ ಸಿಟ್ಜಸ್ ಚೆಸ್ ಫೆಸ್ಟಿವಲ್ನಲ್ಲಿ ಈ ಸಾಧನೆ ಮಾಡಿದ ಅವರು ಕಳೆದ ವರ್ಷ ನಡೆದ ಮಹಾರಾಷ್ಟ್ರ ಓಪನ್ ಟೂರ್ನಿಯಲ್ಲಿ ಎರಡನೇ ನಾರ್ಮ್ ಗಳಿಸಿದ್ದರು. 7,9,11,13 ಮತ್ತು 15 ವರ್ಷದೊಳಗಿನವರ ವಿಭಾಗದಲ್ಲಿ ಸತತವಾಗಿ ರಾಜ್ಯ ಚಾಂಪಿಯನ್ ಆಗಿದ್ದರು. ಬಳಿಕ ಶರಣ್ ಚೆಸ್ ನಿಂದ ವಿರಾಮ ತೆಗೆದುಕೊಂಡು ಸೇಂಟ್ ಥೆರೆಸಾ ಮತ್ತು ಕೆನರಾ ಕಾಲೇಜಿನಲ್ಲಿ ಪಿಯು ಓದುವತ್ತ ಗಮನ ಹರಿಸಿದರು.
ಜುಲೈ ಮೊದಲ ವಾರದಲ್ಲಿ 2255 ಎಲೊ ರೇಟಿಂಗ್ ಹೊಂದಿದ್ದ ಶರಣ್ ಜೆಕ್ ಗಣರಾಜ್ಯದ ಪ್ರಾಗ್ ಟೂರ್ನಿಯಲ್ಲಿ 69.6 ಪಾಯಿಂಟ್ಗಳ ಸಾಧನೆ ಮಾಡಿದರು. ನಂತರ ಬಲ್ಗೇರಿಯಾದಲ್ಲಿ 40.2 ಮತ್ತು ಆಸ್ಟ್ರಿಯಾದಲ್ಲಿ 37 ಪಾಯಿಂಟ್ ಕಲೆ ಹಾಕುವ ಮೂಲಕ ಒಟ್ಟು ಪಾಯಿಂಟ್ಗಳನ್ನು 2401.8ಕ್ಕೇರಿಸಿಕೊಂಡರು. ಈ ನಡುವೆ ಸ್ಲೊವಾಕಿಯಾದಲ್ಲಿ ನಡೆದ ಟೂರ್ನಿಯಲ್ಲೂ ಅವರು ಪ್ರಶಸ್ತಿ ಗೆದ್ದುಕೊಂಡಿದ್ದರು.
ಇನ್ನು ಸುರತ್ಕಲ್ ಎನ್ ಐಟಿಕೆಯಲ್ಲಿ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದ ಶರಣ್ ಅವರು ಪ್ರಸ್ತುತ ತಮ್ಮದೇ ಆದ ಅಕಾಡೆಮಿ “ರಾವ್ಸ್ ಚೆಸ್ ಕಾರ್ನರ್” ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.