ಉಚ್ಚಿಲ: ಇಂದು ಎರಡು ವಿಚಾರಧಾರೆಗಳ ಮಧ್ಯೆ ಚುನಾವಣೆ ನಡೆಯುತ್ತಿದ್ದೆ. ಬಡವರ ಕಲ್ಯಾಣ ಕಾಂಗ್ರೆಸ್ ಉದ್ದೇಶವಾಗಿದೆ. ಆದರೆ ಬಿಜೆಪಿ ವಾಮಮಾರ್ಗದಲ್ಲಿ ನಮ್ಮ ಶಾಸಕರನ್ನು ಕುದುರೆ ವ್ಯಾಪಾರದ ಮೂಲಕ ಖರೀದಿಸಿ ಸರ್ಕಾರ ರಚಿಸಿದ್ದಾರೆ. ಕೋಟ್ಯಂತರ ಬಂಡವಾಳ ಹೂಡಿ ಪ್ರಜಾಪ್ರಭುತ್ವ ತಳಹದಿ ತಪ್ಪಿಸಿ ಶಾಸಕರನ್ನು ಖರೀದಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದರು.
ಉಚ್ಚಿಲದಲ್ಲಿ ಮೀನುಗಾರರೊಂದಿಗೆ ಸಂವಾದದಲ್ಲಿ ಅವರು ಮಾತನಾಡಿದರು. ಬಿಜೆಪಿಯ ಮುಖಂಡರೊಬ್ಬರು ಹೇಳಿಂದತೆ ಸಿಎಂ ಆಗಲು ಬಿಜೆಪಿಯಲ್ಲಿ 2500 ಕೋಟಿ ರೂ. ನೀಡಬೇಕಿದೆ. ಗುತ್ತಿಗೆದಾರರ ಸಂಘದವರು 40 ಶೇ. ಕಮಿಷನ್ ಆರೋಪ ಮಾಡಿದ್ದಾರೆ. ದಿಂಗಲೇಶ್ವರ ಸ್ವಾಮಿ ಅಂತಹ ಹಿರಿಯರಿಗೂ ಕೂಡ ಬಿಜೆಪಿ ಸರ್ಕಾರ 30 ಪರ್ಸೆಂಟ್ ಕೊಡಿ ಅಂತ ಬೇಡಿಕೆ ಇಟ್ಟಿರುವುದು ಜಗತ್ತಿಗೆ ತಿಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ನೇಮಕಾತಿ, ಇಂಜಿನಿಯರ್ ನೇಮಕಾತಿ, ಶಿಕ್ಷಕರ ನೇಮಕಾತಿ 40 ಪರ್ಸೆಂಟ್ ಮೂಲಕ ನಡೆದಿದೆ. ಈ ಹಣ ತಮ್ಮ ತೆರಿಗೆ ಮೂಲಕ ವ್ಯಯವಾಗುತ್ತಿದೆ. ಮೀನುಗಾರರು, ಬಡವರಿಗೆ, ಕಾರ್ಮಿಕರು ರಾಜ್ಯದ ಸರ್ಕಾರದಿಂದ ಪ್ರಯೋಜನ ದೊರೆಯತ್ತಿಲ್ಲ ಎಂದರು. ಯುಪಿಎ ಸರ್ಕಾರವಿದ್ದಾಗ ಗ್ಯಾಸ್ ಬೆಲೆ 400 ರೂ. ಇತ್ತು. ಇಂದು ಅದು 1500 ಆಗಿದೆ. ಅಡುಗೆ ಎಣ್ಣೆ 200 ರೂ. ಆಗಿದೆ.
ಹಾಲು ಮೊಸರಿನ ಮೇಲೆ ಜಿಎಸ್ಟಿ ಹಾಕಲಾಗಿದೆ. ಭ್ರಷ್ಟಾಚಾರ, ಬೆಲೆಯೇರಿಕೆ ನಡುವೆ ಬಡವರು ಸಿಲುಕಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ 1 ಗಂಟೆಯೊಳಗೆ ನಾವು ನೀಡಿರುವ 4 ಆಶ್ವಾಸನೆ ಈಡೇರಿಸಲಾಗುವುದು ಎಂದರು.
ಬೆಲೆಯೇರಿಕೆಯಿಂದಾಗಿ ಮಾತೆಯರಿಗೆ ತೊಂದರೆಯಾಗಿದ್ದು, ಈ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿ ಮಾತೆಯರಿಗೆ 2000 ರೂ.ಗಳನ್ನು ಪ್ರತಿ ತಿಂಗಳು ನೀಡುವ ಕೆಲಸ ಮಾಡುತ್ತೇವೆ. ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ವಿದ್ಯುತ್ ಉಚಿತ, ಅನ್ನಭಾಗ್ಯ ಯೋಜನೆ ಮೂಲಕ 10 ಕಿಲೋ ಅಕ್ಕಿ ಪ್ರತಿ ತಿಂಗಳು ನೀಡುವ ಯೋಜನೆ ಜಾರಿಯಾಗಲಿದೆ. ಪ್ರತಿತಿಂಗಳು ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದು ರಾಹುಲ್ ಹೇಳಿದರು.
ಮೀನುಗಾರರಿಗೆ 10 ಲಕ್ಷ ರೂ. ವಿಮೆ: ಮೀನುಗಾರರಿಗೆ 10 ಲಕ್ಷ ವಿಮೆ, ಮೀನುಗಾರ ಮಹಿಳೆಯರಿಗೆ ಒಂದು ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ಹಾಗೂ ಪ್ರತಿದಿನ 500 ಲೀಟರ್ಗೆ ಮೀನುಗಾರರಿಗೆ 25 ರೂ. ಸಬ್ಸಿಡಿ ನೀಡುವುದಾಗಿ ಭರವಸೆ ನೀಡಿದ್ದಾರೆ.
ಸಂವಾದ ವಿವರ:
ಸಂವಾದ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಪ್ರಾಮುಖ್ಯತೆ ಪಡೆಯಿತು.
ಮೀನುಗಾರಿಕಾ ಜೆಟ್ಟಿಗಳಲ್ಲಿ ಡ್ರೆಜ್ಜಿಂಗ್ ನಡೆಯುತ್ತಿಲ್ಲ. ಇದರಿಂದ ಬೋಟ್ಗಳಿಗೆ ತೊಂದರೆಯಾಗುತ್ತಿದೆ ಇದಕ್ಕೇನು ಪರಿಹಾರ ನೀಡುತ್ತೀರಿ?
ರಾಹುಲ್ ಗಾಂಧಿ: ಸರ್ಕಾರ ರಚನೆ ಬಳಿಕ ಮೀನುಗಾರರರೊಂದಿಗೆ ಸಂವಾದ ನಡೆಸಿ ಸಮಸ್ಯೆ ಪರಿಹಾರ ಮಾಡಲಾಗುತ್ತದೆ. ನಾನೇ ಸ್ವತಃ ಮುಂದೆ ನಿಂತು ಪರಿಹಾರ ಒದಗಿಸುವ ಕೆಲಸ ಮಾಡುತ್ತೇನೆ.
ಕಡಲ ತೀರದಲ್ಲಿ ಮೀನುಗಾರಿಕಾ ಆಂಬುಲೆನ್ಸ್ ಸ್ಥಾಪಿಸಿ ಮೀನುಗಾರರ ಜೀವ ಉಳಿಸುವಿರಾ?
ರಾಹುಲ್ ಗಾಂಧಿ: ಖಂಡಿತಾ ಕ್ರಮ ಕೈಗೊಳ್ಳುತ್ತೇವೆ ಎಂದು ರಾಹುಲ್ ಹೇಳಿದರು. ಈಗ ಇಂತಹ ವ್ಯವಸ್ಥೆ ಇದೆಯೇ ಎಂದು ಪ್ರಶ್ನಿಸಿದರು. ಅಲ್ಲದೆ ಕೋಸ್ಟ್ ಗಾರ್ಡ್ ಅವರು ಕ್ರಮಕೈಗೊಳ್ಳುತ್ತಿಲ್ಲವೇ ಎಂದು ಪ್ರಶ್ನಿಸಿದರು. ಆಗ ಮಹಿಳೆ ಹಲವರು ಜೀವ ಕಳೆದುಕೊಂಡಿದ್ದಾರೆ ಎಂದು ಉತ್ತರಿಸಿದರು. ಈ ಬಗ್ಗೆ ಕಾಂಗ್ರೆಸ್ ಸರ್ಕಾರ ಭವಿಷ್ಯದಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಎಂಎನ್ಸಿ ಕಂಪನಿಗಳಿಗೆ ಕಡಲು, ಮೀನುಗಾರಿಕೆ ಹಕ್ಕು ನೀಡಲಾಗುತ್ತಿದೆ. 18 ಪರ್ಸೆಂಟ್ ಮೀನುಗಾರಿಕೆ ಹಕ್ಕು ಮೀನುಗಾರ ಸಮುದಾಯಕ್ಕೆ ನೀಡಲು ಸಿದ್ದರಾಮಯ್ಯ ಆದೇಶಿಸಿದ್ದರು. ಈಗ ಬಿಜೆಪಿ ಅದನ್ನು ನಿರ್ಲಕ್ಷ್ಯ ಮಾಡಿದೆ ಎಂದು ಸಂವಾದದಲ್ಲಿ ವ್ಯಕ್ತಿಯೊಬ್ಬರು ವಿವರಿಸಿದರು. ಈ ಬಗ್ಗೆ ಉತ್ತರಿಸಿದ ಮೀನುಗಾರರ ಮಕ್ಕಳ ಕಲ್ಯಾಣಕ್ಕೆ ಸರ್ಕಾರ ನಿಶ್ಚಿತವಾಗಿ ಕ್ರಮ ಕೈಗೊಳ್ಳಲಿದೆ ಎಂದರು.
ಬಿಜೆಪಿ ಮೀನುಗಾರರನ್ನು ನಿರ್ಲಕ್ಷಿಸಿದೆ ಮೀನುಗಾರರನ್ನು ಸಾಲ ಮುಕ್ತ ಮಾಡುವ ಯೋಜನೆಗಳಿವೆಯೇ ?
ರಾಹುಲ್ ಗಾಂಧಿ: ಈ ವಿಚಾರ ಮುಂದಿನ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳುತ್ತಾರೆ. ಆದರೆ ಮೀನುಗಾರರ ಸಮಸ್ಯೆಗೆ ಕಾಂಗ್ರೆಸ್ ಖಂಡಿತ ಪರಿಹಾರ ಒದಗಿಸಲಿದೆ. ಮೀನುಗಾರಿಕೆ ಎಷ್ಟು ಕ್ಲಿಷ್ಟಕರ ಎಂಬುದು ಗೊತ್ತಿದೆ. ಜಿಎಸ್ಟಿ, ಡಿಸೇಲ್, ಪೆಟ್ರೋಲ್, ಸೀಮೆಎಣ್ಣೆ ಬೆಲೆ ಏರಿಕೆಯಿಂದ ತೊಂದರೆಯಾಗುತ್ತಿದೆ. ರೈತರಂತೆ ಮೀನುಗಾರರು ಸಮುದ್ರದ ಕೃಷಿಕರು, ದೇಶದ ಬೆನ್ನೆಲುಬು. ಮೀನುಗಾರರಿಗೆ ಮಂತ್ರಿಮಂಡಲ ರಚಿಸುವುದು ನಮ್ಮ ಉದ್ದೇಶ. ನಿಮ್ಮ ಸಮಸ್ಯೆ ಹಂಚಿಕೊಳ್ಳಲು ನಿರ್ದಿಷ್ಟ ಇಲಾಖೆ ಅಗತ್ಯ. ದೊಡ್ಡ, ಸಣ್ಣ ಮೀನುಗಾರರ ನಡುವಿನ ದೊಡ್ಡ ಅಸಮೋತಲನ ಸರಿಪಡಿಸಬೇಕಿದೆ. ಶ್ರೀಮಂತ ಮೀನುಗಾರರು ಬಂಡವಾಳ ಹೂಡಿಕೆ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದು, ಆದರೆ ಬಡ ಮೀನುಗಾರರ ಸಂಕಷ್ಟದಲ್ಲಿಯೇ ದಿನದೂಡುತ್ತಿದ್ದಾರೆ.
ನಾನು ಕೇರಳದ ಮೀನುಗಾರರ ಸ್ನೇಹಿತನೊಂದಿಗೆ ಒಂದುದಿನ ಬೆಳಗ್ಗಿನ ಜಾವ ಮೀನುಗಾರಿಕೆಗಾಗಿ ತೆರಳಿದ್ದು, ಸಮುದ್ರದಲ್ಲಿ ಮೀನುಗಾರಿಕೆ ನಡೆಸುವುದು, ಮೀನು ಬಲೆ ಎಳೆಯುವುದು ಎಷ್ಟು ಕಷ್ಟ ಎಂಬುದು ತಿಳಿದುಕೊಂಡಿದ್ದೇನೆ. ಸಮುದ್ರದ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವುದು ಕಷ್ಟ. ಈ ನಿಟ್ಟಿನಲ್ಲಿ ನಾನು 1 ದಿನ ಮೀನುಗಾರಿಕೆಗೆ ತೆರಳಿದ ಮಾತ್ರಕ್ಕೆ ಎಲ್ಲವೂ ತಿಳಿಯುವುದಿಲ್ಲ. ಇದಕ್ಕಾಗಿಯೇ ಸಂವಾದ ಏರ್ಪಡಿಸಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.