ಮಂಗಳೂರು: ಹಿಜಾಬ್ ರದ್ದತಿ ವಾಪಸ್ ಪಡೆದಿದ್ದೇ ಆದಲ್ಲಿ ಕರ್ನಾಟಕದ ಎಲ್ಲಾ ಶಾಲಾ ಕಾಲೇಜುಗಳು ಕೇಸರಿಮಯವಾಗಲಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಈಗಾಗಲೇ ವಾರ್ಷಿಕ ಪರೀಕ್ಷೆಗಳು ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ಬರಬೇಕಾದರೆ ಹಿಜಾಬ್, ಬುರ್ಖಾ ಧರಿಸಿ ಬರಲು ಅವಕಾಶ ಕೊಡುತ್ತೇವೆ. ಹಿಜಾಬ್ ಆದೇಶ ರದ್ದು ಮಾಡುತ್ತೇವೆ ಎಂಬ ಹೇಳಿಕೆ ಕೊಡುವ ಮೂಲಕ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಮತಾಂಧತೆಯ ವಿಷಬೀಜ ಬಿತ್ತುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದರು.
ಉಡುಪಿಯಲ್ಲಿ ಆರಂಭವಾದ ಹಿಜಾಬ್ ಗಲಭೆ ಇಡೀ ರಾಜ್ಯದಲ್ಲಿ ಸಾಕಷ್ಟು ಸಂಘರ್ಷ ಸೃಷ್ಟಿಸಿತ್ತು. ಕೇವಲ ಐದು ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಪ್ರತಿಭಟನೆ ನಡೆಸಿದ್ದಕ್ಕೆ ಪಿಎಫ್ಐ, ಎಸ್ ಡಿಪಿಐ ಬೆಂಬಲ ನೀಡಿತ್ತು. ಈ ಬೆಂಬಲದಿಂದಲೇ ಕರ್ನಾಟಕದಾದ್ಯಂತ ಘರ್ಷಣೆ ಸಂಭವಿಸಿತ್ತು. ಇದೀಗ ಪಿಎಫ್ಐ ಬ್ಯಾನ್ ಆದರೂ ಅವರ ಮಾನಸಿಕತೆ ಮುಂದುವರಿಯುತ್ತಿದೆ. ಪಿಎಫ್ಐಗೆ ಬೆಂಬಲ ಕೊಡುವ ಕಾರ್ಯವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಆದ್ದರಿಂದ ಪಿಎಫ್ಐ ಬದಲು ಕಾಂಗ್ರೆಸ್ ಈ ಕೆಲಸ ಮಾಡುತ್ತಿದೆ ಎಂಬ ಸಂಶಯ ಬಲವಾಗುತ್ತಿದೆ ಎಂದರು.