ಮಂಗಳೂರು: ನಗರದ ಪ್ರಭಾವಿ ಬಿಲ್ಲವ ಮುಖಂಡ ಪದ್ಮರಾಜ್ ಅವರು ಕಾಂಗ್ರೆಸ್ ನಿಂದ ಲೋಕಸಭಾ ಕಣಕ್ಕೆ ಇಳಿಯುವುದು ಪಕ್ಕಾ ಆಗಿದೆ. ಆದರೆ ಅಧಿಕೃತ ಘೋಷಣೆವೊಂದೇ ಬಾಕಿಯಿದೆ. ಹೀಗಾಗಿ ಪದ್ಮರಾಜ್ ಅವರು ಅಧಿಕೃತ ಘೋಷಣೆಗೂ ಮುನ್ನವೇ ಟೆಂಪಲ್ ರನ್ ಮಾಡುತ್ತಿದ್ದಾರೆ.
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಟ್ರಸ್ಟಿಯೂ ಆಗಿರೋ ಪದ್ಮರಾಜ್ ಅವರು ಗೋಕರ್ಣನಾಥೇಶ್ವರ ದೇವಸ್ಥಾನ ಭೇಟಿ ನೀಡಿ ದೇವರ ದರ್ಶನ ಪಡೆದು ಗೋಕರ್ಣನಾಥನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಟಿಕೆಟ್ ಫಿಕ್ಸ್ ಆದ ಹಿನ್ನೆಲೆಯಲ್ಲಿ ಪದ್ಮರಾಜ್ ಪೂಜೆ ಸಲ್ಲಿಸಿದ್ದಾರೆ. ಇವರ ಜೊತೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಭಾಗಿಯಾಗಿದರು.
ಇನ್ನು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಪರಮಾಪ್ತ ಪದ್ಮರಾಜ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದು ಬಿಲ್ಲವ ಸಮಾಜದ ಪ್ರಭಾವಿ ಮುಖಂಡ. ಕಳೆದ ವಿಧಾನಸಭಾ ಚುನಾವಣೆ ಹೊತ್ತಲ್ಲಿ ಇವರು ಕಾಂಗ್ರೆಸ್ ಸೇರಿದ್ದರು. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ಗೆ ಯತ್ನಿಸಿ ವಿಫಲರಾಗಿದ್ದರು. ಇತ್ತ ಬಿಜೆಪಿಯಿಂದ ನಿವೃತ್ತ ಯೋಧ, ಸುಶಿಕ್ಷಿತ ಬ್ರಿಜೇಶ್ ಚೌಟ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ವೃತ್ತಿಯಲ್ಲಿ ವಕೀಲರಾಗಿರೋ ಪದ್ಮರಾಜ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಅಲ್ಲದೆ ಬಿಜೆಪಿಯ ಬಂಟ ಅಭ್ಯರ್ಥಿಗೆ ಪ್ರಭಾವಿ ಬಿಲ್ಲವ ಮುಖಂಡನ ಮೂಲಕ ಠಕ್ಕರ್ ಕೊಡಲು ಕಾಂಗ್ರೆಸ್ ಪ್ಲಾನ್ ಮಾಡಿದೆ.