ಮೂಡುಬಿದಿರೆ: ಸುಮಾರು ನಾಲ್ಕು ದಶಕಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಹೆಸರು, ಕೀರ್ತಿಯನ್ನು ಹೊಂದಿದ್ದ ಮೂಡುಬಿದಿರೆ ವಲಯದ ಎರಡು ಅನುದಾನಿತ ಪ್ರೌಢಶಾಲೆಗಳೀಗ ವಿದ್ಯಾರ್ಥಿಗಳ ಕೊರತೆಯಿಂದಾಗಿ, ಸುವರ್ಣ ಮಹೋತ್ಸವ ಆಚರಿಸದೆ ಮಚ್ಚಲ್ಪಟ್ಟು ಇತಿಹಾಸದ ಪುಟ ಸೇರಿದೆ.
ನೀರುಡೆಯ ಮುಕ್ತಿ ಪ್ರಕಾಶ್ ಪ್ರೌಢಶಾಲೆ ಹಾಗೂ ತಾಕೊಡೆಯ ಆದರ್ಶ ಪ್ರೌಢಶಾಲೆ ನಿಗಧಿತ ಸಂಖ್ಯೆಯ ವಿದ್ಯಾರ್ಥಿಗಳಿಲ್ಲದೆ, ಸರ್ಕಾರದ ಆದೇಶದಂತೆ ಪ್ರಸಕ್ತ ವರ್ಷದಲ್ಲಿ ಮುಚ್ಚಿವೆ.
ಕಥೋಲಿಕ್ ಶಿಕ್ಷಣ ಮಂಡಳಿ ಮಂಗಳೂರು ಆಧೀನದಲ್ಲಿ 1981ರಲ್ಲಿ ಸ್ಥಾಪನೆಗೊಂಡ ಆದಶ ಕನ್ನಡ ಮಾಧ್ಯಮ ಅನುದಾನಿತ ಶಾಲೆ ಪ್ರಾರಂಭದಿಂದ 2023ನೇ ಇಸವಿಯವರೆಗೆ 10ನೇ ತರಗತಿಯ 40 ಬ್ಯಾಚ್ಗಳಲ್ಲಿ 2,065 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. 1981ರಿಂದ 2023ರವರ ಅವಧಿಯಲ್ಲಿ 10 ಮುಖ್ಯ ಶಿಕ್ಷಕರು, 22 ಸಹಶಿಕ್ಷಕರು ಸೇವೆ ಸಲ್ಲಿಸಿದ್ದಾರೆ. ಮೂಡುಬಿದಿರೆ ವಲಯದಲ್ಲಿ ಸತತ 6 ಬಾರಿ ಸೇರಿದಂತೆ ಒಟ್ಟು 9ನೇ ಬಾರಿಗೆ ಶೇ.100 ಫಲಿತಾಂಶವನ್ನು ಪಡೆದ ಏಕೈಕ ಕನ್ನಡ ಮಾಧ್ಯಮದ ಹೆಗ್ಗಳಿಕೆ ಪಾತ್ರವಾಗಿತ್ತು.
ಸಿದ್ಧಕಟ್ಟೆ, ವಾಮದಪದವು ಕಳೆದ ವರ್ಷ ಶೇ.100 ಫಲಿತಾಂಶ, ಈ ವರ್ಷ ಬೀಗ:
1983ರಲ್ಲಿ ಸ್ಥಾಪನೆಗೊಂಡ ಮುಕ್ತಿ ಪ್ರಕಾಶ್ ಅನುದಾನಿತ ಪ್ರೌಢಶಾಲೆಯು ಮುಚ್ಚೂರು, ನೀರ್ಕೆರೆ, ಕೊಂಪದವು, ಎಡಪದವು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣ ಪಡೆಯುವ ನೆಚ್ಚಿನ ಶಿಕ್ಷಣ ಸಂಸ್ಥೆಯಾಗಿತ್ತು. ಒಂದು ಕಾಲದಲ್ಲಿ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳಿದ್ದ ಶಾಲೆ ಎಂಬ ಹೆಗ್ಗಳಿಕೆ ಪಡೆದಿದ್ದ ಈ ಶಾಲೆಯು ಪ್ರಸಕ್ತ ವರ್ಷ ಕನಿಷ್ಠ ವಿದ್ಯಾರ್ಥಿಗಳಿಲ್ಲದೆ ಮುಚ್ಚಿದೆ. ಕಳೆದ ವರ್ಷ ಎಸ್ಎಸ್ಎಲ್ಸಿಯಲ್ಲಿ ಶೇ.100 ಫಲಿತಾಂಶವನ್ನು ಪಡೆದಿದ್ದರೂ, ಈ ವರ್ಷ ಅನುದಾನಿತ ಶಾಲೆಗಳಿಗಿರುವ ಸರ್ಕಾರದ ಆದೇಶದಂತೆ ಕನಿಷ್ಠ 25 ವಿದ್ಯಾರ್ಥಿಗಳು ದಾಖಲಾಗದೆ ಶಾಲೆ ಮುಚ್ಚಲ್ಪಟ್ಟಿದೆ. ಕಳೆದ ವರ್ಷ 61 ವಿದ್ಯಾರ್ಥಿಗಳು 8ರಿಂದ 10 ತರಗತಿಯವರೆಗೆ ಇದ್ದು, ಅವರಲ್ಲಿ ಎಸ್ಎಸ್ಎಲ್ಸಿ ಪಾಸಾದವರು ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳನ್ನು ಹತ್ತಿರದ ಪ್ರೌಢಶಾಲೆಗಳಿಗೆ ಸೇರಿಸಲಾಗಿದೆ.
ಭಾವನಾತ್ಮಕ ಪತ್ರ:
ತಾಕೋಡೆಯ ಆದರ್ಶ ಪೌಢಶಾಲೆಯು ಮುಚ್ಚುವುದನ್ನು ಶಾಲೆಯ ಆಡಳಿತ ಮಂಡಳಿ ಭಾವನಾತ್ಮಕ ಪತ್ರದ ಮೂಲಕ ಹಳೇ ವಿದ್ಯಾರ್ಥಿಗಳ ಜೊತೆ ಹಂಚಿಕೊಂಡಿದೆ. ಶಾಲೆಯ ಸಂಚಾಲಕ ಹಳ ವಿದ್ಯಾರ್ಥಿಗಳಿಗೆ ಪತ್ರ ಬರೆದಿದ್ದು, ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ, ಶಿಕ್ಷಕರ, ಪೋಷಕರ ದಾನಿಗಳ ಪ್ರೋತ್ಸಾಹವನ್ನು ಸ್ಮರಿಸಿದ್ದಾರೆ.