ಮಧ್ಯಪ್ರದೇಶ: ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದಲಿತ, ಹಿಂದುಳಿದವರು ಮತ್ತು ಬುಡಕಟ್ಟು ಸಮುದಾಯಗಳ ಜನರಿಗೆ ಸಿಗುವ ಮೀಸಲಾತಿಯಲ್ಲಿ ಶೇ.50ಕ್ಕಿಂತ ಅಧಿಕ ಮೀಸಲಾತಿ ನೀಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಮಧ್ಯಪ್ರದೇಶದ ರತ್ಲಾಮ್ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮೀಸಲಾತಿ ತೆಗೆದುಹಾಕುತ್ತೇವೆ ಎನ್ನುತ್ತದೆ. ಆದರೆ ನಾವು ಶೇ.50ಕ್ಕೂ ಹೆಚ್ಚು ಮೀಸಲಾತಿಯನ್ನು ಒದಗಿಸುತ್ತೇವೆ. ಇದು ಬಡವರು, ಹಿಂದುಳಿದವರು, ದಲಿತರು, ಆದಿವಾಸಿ ಸಮುದಾಯಗಳ ಅಗತ್ಯತೆಗೆ ತಕ್ಕಹಾಗೆ ಒದಗಿಸಲಾಗುತ್ತದೆ ಎಂದರು.
ಈ ಬಾರಿ ೪೦೦ ಸೀಟುಗಳನ್ನು ದಾಟುವ ಬಿಜೆಪಿ ಭರವಸೆಗೆ ಪ್ರತಿಕ್ರಿಯಿಸಿದ ರಾಹುಲ್, ಅವರಿಗೆ ೧೫೦ ಸೀಟುಗಳು ಸಹ ಸಿಗಲಿಕ್ಕಿಲ್ಲ ಎಂದರು.
ʼಬಿಜೆಪಿ ಮತ್ತು ಆರ್.ಎಸ್.ಎಸ್ ಸಂವಿಧಾನವನ್ನು ಬದಲಾಯಿಸಲು ಬಯಸುತ್ತವೆ ಹಾಗು ಇದಕ್ಕೆ ಅವರಿಗೆ ಅಧಿಕಾರ ಬೇಕುʼ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಜಲ, ಅರಣ್ಯ ಹಾಗು ಜಮೀನಿನ ಮೇಲಿನ ಹಕ್ಕುಗಳನ್ನು ಕೊಡುವ ಸಂವಿಧಾನವನ್ನು ಉಳಿಸಲು ಪ್ರಯತ್ನಿಸುತ್ತಿದೆ ಎಂದರು.
ಮುಸ್ಲಿಮರಿಗೆ ಅನುಕೂಲವಾಗುವಂತೆ ಕಾಂಗ್ರೆಸ್ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಯೋಜಿಸುತ್ತಿದೆ ಎಂದ ಪ್ರಧಾನಿ ಮೋದಿಯ ಆರೋಪವನ್ನು ಕಾಂಗ್ರೆಸ್ ನಿರಾಕರಿಸಿದೆ.