ಬೆಳ್ತಂಗಡಿ: ಮನಸ್ಸಿಗೆ ಹಿತ ಅನ್ನಿಸುವ ಕಾರ್ಯಕ್ರಮ ವಿದ್ಯಾರ್ಥಿಗಳೊಂದಿಗೆ ಬೆರೆಯುವುದು. ವಿದ್ಯಾರ್ಥಿ ಸಂಘದ ಚುನಾವಣೆ ಎನ್ನುವುದು ವಿದ್ಯಾರ್ಥಿಗೆ ಭವಿಷ್ಯ ನೀಡುವುದು ಮಾತ್ರವಲ್ಲದೆ ಸಮಾಜದ ವಿವಿಧ ಕ್ಷೇತ್ರದಲ್ಲಿ ನಾಯಕತ್ವ ಬೆಳೆಸಲು ಪ್ರೇರಣೆಯಾಗುತ್ತದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಶ್ರೀ ಮಂಜುನಾಥ ಸ್ವಾಮಿ ಕಲಾಭವನ ಬೆಳ್ತಂಗಡಿಯಲ್ಲಿ ಜು. 23 ರಂದು ಬೆಳ್ತಂಗಡಿ ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘ, ಮತದಾರರ ಸಾಕ್ಷರತಾ ಸಂಘ ಕಲಾ ಮತ್ತು ಸಾಹಿತ್ಯ ಸಂಘ, ವಿಜ್ಞಾನ ಸಂಘ ಉದ್ಘಾಟನೆ ಸಾಧಕರಿಗೆ ಸಮ್ಮಾನ ನೆರವೇರಿಸಿ ಮಾತನಾಡಿದರು.
ವಿದ್ಯಾರ್ಥಿ ಶಕ್ತಿ ಗುಡುಗಿದರೆ ವಿಧಾನ ಸೌಧ ನಡುಗುವುದು ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಚುನಾವಣೆ ಎನ್ನುವುದು ಕೇವಲ ರಾಜಕೀಯ ಎಂಬ ತಪ್ಪು ಕಲ್ಪನೆಯಿದೆ. ಯಾವುದೇ ಸಾಮಾಜಿಕ ಕ್ಷೇತ್ರದಲ್ಲಿ ಮುನ್ನಡೆಯಲು ಬೇಕಾಗಿರುವುದು ನಾಯಕತ್ವ. ಹಾಗಾಗಿ ನಾವೆಲ್ಲರೂ ನಾಯಕತ್ವ ಗುಣವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಧಾನ ಭಾಷಣಕಾರರಾದ ಸರಕಾರಿ ಪ್ರಥಮ ದರ್ಜೆ ಕಾಲೇಜು ನಿವೃತ್ತ ಪ್ರಾಚಾರ್ಯ ಡಾ.ಟಿ.ಪಿ. ಆಂಟನಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಸುಕುಮಾರ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ, ಪ.ಪಂ. ಉಪಾಧ್ಯಕ್ಷ ಜಯಾನಂದ ಗೌಡ, ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ರೊನಾಲ್ಡ್ ಲೋಬೊ, ಖ್ಯಾತ ಉದ್ಯಮಿ ಜೇಮ್ಸ್ ಡಿಸೋಜ, ಹಿರಿಯ ಉಪನ್ಯಾಸಕ ಆನಂದ್, ಸರಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯರಾದ ರಾಜೇಂದ್ರ, ವಿಜ್ಞಾನ ಸಂಘದ ಸಂಚಾಲಕ ಮೋಹನ್ ಭಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಸಂಚಾಲಕಿ ಶುಭಾ ಪೌಲ್ ಪ್ರಸ್ತಾವಿಸಿದರು. ವಿದ್ಯಾರ್ಥಿನಿಯರಾದ ಕವನಾ ಸ್ವಾಗತಿಸಿ, ಶರ್ಮಿತ್ ವಂದಿಸಿದರು. ಗೌರವಿ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿ ಪ್ರತಿನಿಧಿಗಳಿಗೆ ನಾಮಫಲಕ ನೀಡಿ ಪ್ರಮಾಣವಚನ ಬೋಧನೆ. ಶೃತ ಪ್ರಮಾಣವಚನ ಕಾರ್ಯಕ್ರಮ ನೆರವೇರಿಸಿದರು. ಪ್ರಾಚಾರ್ಯರು ಪ್ರಮಾಣವಚನ ಬೋಧಿಸಿದರು.
ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸಮ್ಮಾನ ನೆರವೇರಿಸಲಾಯಿತು. ವಿದ್ಯಾರ್ಥಿ ಪ್ರತಿನಿಧಿಗಳು ಅನಿಸಿಕೆ ವ್ಯಕ್ತಪಡಿಸಿದರು. ಮತದಾರರ ಸಾಕ್ಷರತಾ ಸಂಘದ ಭಿತ್ತಿ ಪತ್ರ ಅನಾವರಣ ನಡೆಯಿತು. ಮತದಾನದ ಅರಿವು ಕುರಿತು ವಿದ್ಯಾರ್ಥಿಗಳು ಹಾಡು ಹಾಡಿದರು.