ಮಂಗಳೂರು: ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣ ಕಾರ್ಯ ಬಹುತೇಕ ಅಂತಿಮ ಹಂತ ತಲುಪಿದ್ದು, ದೇಶದ ಹಲವು ಭಾಗಗಳಿಂದ ಅನೇಕ ರೀತಿಯ ವಸ್ತುಗಳು ಅಯೋಧ್ಯೆಯ ಪುಣ್ಯ ಭೂಮಿಯನ್ನ ತಲುಪಿದೆ.
ಈ ನಡುವೆ ಇದೇ ಮೊದಲ ಬಾರಿಗೆ ದ.ಕ ಜಿಲ್ಲೆಯಿಂದ ನಾಗಲಿಂಗ ಪುಷ್ಪ ಎನ್ನುವ ಗಿಡವೊಂದು ಅಯೋಧ್ಯೆಯ ಪುಣ್ಯ ಭೂಮಿಯನ್ನು ತಲುಪಿದ್ದು, ಶ್ರೀರಾಮನ ಮಂದಿರದ ಎದುರು ಅಲಂಕಾರಕ್ಕಾಗಿ ನೆಡಲು ರಾಮ ಜನ್ಮಭೂಮಿ ಟ್ರಸ್ಟ್ ಆಡಳಿತ ಸಿದ್ದತೆ ನಡೆಸಿದೆ. ದ.ಕ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ನಿಡ್ಡೋಡಿ ಗ್ರಾಮದ ವಿನೇಶ್ ಪೂಜಾರಿ ಎಂಬವರು ತಾವು ಬೆಳೆದ ನಾಗಲಿಂಗ ಪುಷ್ಪದ ಗಿಡವನ್ನು ಅಯೋಧ್ಯೆಗೆ ಕಳುಹಿಸಿ ಕೊಟ್ಟಿದ್ದಾರೆ.
ಈ ಮೊದಲೇ ಇವರಿಗೆ ನಾಗಲಿಂಗ ಪುಷ್ಟದ ಗಿಡವನ್ನು ಅಯೋಧ್ಯೆಗೆ ಕಳುಹಿಸುವ ಉದ್ದೇಶವಿದ್ದು, ಅದರಂತೆ ಗೂಗಲ್ ಮೂಲಕ ಅಯೋಧ್ಯೆಯೆ ನಂಬರ್ ಪಡೆದು ಕರೆ ಮಾಡಿ ವಿಚಾರಿಸಿದ್ದಾರೆ.
ಈ ವೇಳೆ ಅಯೋಧ್ಯ ದೇವಸ್ಥಾನ ಆಡಳಿತ ಮಂಡಳಿ ಗಿಡಗಳನ್ನು ಕಳುಹಿಸಿ ಕೊಡುವಂತೆ ಸೂಚಿಸಿದೆ. ಶಿವಪೂಜೆಗೆ ಪವಿತ್ರ ಎಂದು ನಂಬಲ್ಪಡುವ ನಾಗಲಿಂಗ ಪುಷ್ಪವನ್ನು ಮಲ್ಲಿಕಾರ್ಜುನ ಪುಷ್ಪ, ಶಿವಲಿಂಗ ಪುಷ್ಪ ಎಂದೆಲ್ಲ ಕರೆಯುತ್ತಾರೆ.