ಮಂಗಳೂರು: ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಮಳೆಗಾಲ ನಿರ್ವಹಣೆ ಕುರಿತು ಸ್ಪೀಕರ್ ಯು.ಟಿ. ಖಾದರ್ ಸಭೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು ಪೃಕೃತಿ ವಿಕೋಪದಿಂದ ತೊಂದರೆಯಾಗದಂತೆ ಸಭೆ ಕರೆಯಲಾಗಿದೆ. ಮುಳುಗಡೆ ಪ್ರದೇಶ, ಗುಡ್ಡ ಪ್ರದೇಶವನ್ನು ಗುರುತಿಸಿ ಅಧಿಕಾರಿಗಳನ್ನು ಸನ್ನದ್ಧವಾಗಿರುವಂತೆ ಸೂಚಿಸಲಾಗಿದೆ ಎಂದರು.
ಕಂಟ್ರೋಲ್ ರೂಂಗಳನ್ನು ತೆರೆಯಲು ಸೂಚಿಸಲಾಗಿದೆ. ಪ್ರಾಕೃತಿಕ ವಿಕೋಪ ಸಂದರ್ಭ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರ ಪಡೆಯಲು ಸೂಚನೆ ನೀಡಲಾಗಿದೆ ಎಂದರು. ಮೀನುಗಾರರ ಜೊತೆ ಚರ್ಚೆ ಮಾಡಿ ಬೋಟ್ ಗಳನ್ನು ಪಡೆಯಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪಶುಸಂಗೋಪನೆ ಇಲಾಖೆಗೆ ಅಗತ್ಯ ಸಲಕರಣೆ,ಅನುದಾನ ಬಿಡುಗಡೆ ಮಾಡಲಾಗುತ್ತದೆ. ಮೆಸ್ಕಾಂ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ಹೆಚ್ಚುವರಿ ವಾಹನ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.
ಮಳೆಗಾಲ ಸಂದರ್ಭ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಅರಣ್ಯ ಮತ್ತು ಮೆಸ್ಕಾಂ ಜಂಟಿಯಾಗಿ ಕೆಲಸ ನಿರ್ವಹಿಸಬೇಕು ಎಂದರು. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಜೀವಹಾನಿಯಾದರೆ ಅರಣ್ಯ ಮತ್ತು ಮೆಸ್ಕಾಂ ಅಧಿಕಾರಿಗಳು ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು. ಮನೆಗಳಿಗೆ ಹಾನಿಯಾದ ಸಂದರ್ಭದಲ್ಲಿ ತುರ್ತು ಪರಿಹಾರ ವಾಗಿ ಹತ್ತು ಸಾವಿರ ರೂಪಾಯಿ ತಕ್ಷಣ ನೀಡಬೇಕು ಎಂದು ತಿಳಿಸಿದರು.