ಮಂಗಳೂರು: ಕ್ಷಯ ಅಥವಾ ಟಿಬಿ ಕಾಯಿಲೆಗೆ ತುತ್ತಾದ ವ್ಯಕ್ತಿಯು ಒಂದು ವರ್ಷದಲ್ಲಿ ಹತ್ತು ಜನರಿಗೆ ಸೋಂಕು ತಗುಲಿಸಬಹುದು. ಮಾರಕವಾಗಿರುವ ಈ ಕಾಯಿಲೆಯ ನಿವಾರಣೆಗೆ ಸರಕಾರವು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಂಡಿದ್ದಲ್ಲದೆ, ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನೂ ಕೊಡಿಸುತ್ತಿದೆ. ಆದರೆ, ಕ್ಷಯರೋಗಿಗಳ ಆರೈಕೆ ಮತ್ತು ಚಿಕಿತ್ಸೆಗಾಗಿ ಇರುವ ಆಸ್ಪತ್ರೆಯನ್ನು ಮುಚ್ಚಲು ಸರಕಾರಿ ಮಟ್ಟದಲ್ಲೇ ಹುನ್ನಾರ ನಡೆದಿದೆ.
1955 ರ ಅವಧಿಯಲ್ಲಿ ಸರ್ಕಾರ ಕ್ಷಯರೋಗಿಗಳ ಆರೈಕೆ ಮತ್ತು ಚಿಕಿತ್ಸೆಗಾಗಿ ನಗರದಿಂದ ಹೊರವಲಯದ ಮೂಡುಶೆಡ್ಡೆಯಲ್ಲಿ 250 ಎಕರೆ ಪರಿಸರದಲ್ಲಿ ನಿರ್ಮಿಸಲಾದ ಕ್ಷಯರೋಗ ಮತ್ತು ಎದೆರೋಗ ಆಸ್ಪತ್ರೆ ಇದೀಗಾ ಅಧಿಕಾರಿಗಳು, ಸರ್ಕಾರ, ಮತ್ತು ಕೆಲವೊಂದು ಸಂಸ್ಥೆಗಳ ಒತ್ತಡದಲ್ಲಿ ಮುಚ್ಚುವ ಭೀತಿಯಲ್ಲಿದೆ. ಈಗಾಗಲೇ ಹಲವು ಬಾರಿ ಕೆಲವು ವರ್ಷಗಳಿಂದ ಸರ್ಕಾರ ಈ ಆಸ್ಪತ್ರೆಯ ಅಧಿಕಾರಿಗಳಿಗೆ ನೋಟಿಸನ್ನು ನೀಡಿತ್ತು. ಆದ್ರೆ ಇಲ್ಲಿನ ಅಧಿಕಾರಿಗಳ ಮುತುವರ್ಜಿಯಿಂದ ಈ ಆಸ್ಪತ್ರೆ ಈವರೆಗೆ ಉಳಿದಿದೆ.
ಆಸ್ಪತ್ರೆಯಲ್ಲಿ 35 ಕ್ಕೂ ಅಧಿಕ ಕ್ಷಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆ ಮುಚ್ಚಿದರೆ ಈ ಕ್ಷಯರೋಗಿಗಳ ಪಾಡೇನು ಎಂಬ ಆತಂಕ ಎದುರಾಗಿದೆ. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಹೆಚ್ಚಿನವರು ಬೀದಿ ಪಾಲಾಗಿದ್ದವರು. ಆಸ್ಪತ್ರೆ ಮುಚ್ಚಿದರೆ ಈ ರೋಗಿಗಳ ಆರೈಕೆ ಅಸಾಧ್ಯವೇ ಸರಿ. ಅಷ್ಟೇ ಅಲ್ಲ, ಸೋಂಕು ತಗುಲಿದ ವ್ಯಕ್ತಿ ಸೂಕ್ತ ಚಿಕಿತ್ಸೆ ದೊರಕದೆ ಸಮಾಜದಲ್ಲಿದ್ದಾಗ ನೂರಾರು ಮಂದಿಗೆ ಕ್ಷಯರೋಗ ಹರಡಬಹುದು ಎಂಬ ಆತಂಕ ಮನೆ ಮಾಡಿದೆ.
ಅದೆಷ್ಟೋ ಕ್ಷಯರೋಗಿಗಳಿಗೆ ಮರು ಜೀವನ ಕಲ್ಪಿಸಿದ ಆಸ್ಪತ್ರೆ ಇದೀಗಾ ಇತರರ ಸ್ವಾರ್ಥಕ್ಜೆ ಬಲಿ ಪಡೆಯದೆ, ಜಿಲ್ಲೆಯ ಕ್ಷಯರೋಗಿಗಳ ಆರೈಕೆ ನಿಟ್ಟಿನಲ್ಲಿ ಸರಕಾರವು ಈ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಲಿ ಎಂಬುವುದು ನಾಗರೀಕರ ಆಶಯವಾಗಿದೆ.