ಮಂಗಳೂರು: ಬೈಂದೂರು ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಬಿಜೆಪಿ ನಡುವೆ ಬಿಗ್ ಫೈಟ್ ನಿಶ್ಚಿತವಾಗಿದೆ. ಅದರೊಂದಿಗೆ ಬಿಜೆಪಿ ನಾಯಕರ ಒಳಪೆಟ್ಟು ಪಕ್ಷದ ಅಭ್ಯರ್ಥಿಗೆ ಮುಳುವಾಗುವ ಸಾಧ್ಯತೆ ಅಧಿಕವಾಗಿದೆ.
ಬೈಂದೂರಿನಲ್ಲಿ ಈ ಬಾರಿ ಬಿಜೆಪಿ ಹೊಸ ಪ್ರಯೋಗವೊಂದನ್ನು ಮಾಡಿದೆ. ಹಾಲಿ ಶಾಸಕ ಸುಕುಮಾರ್ ಶೆಟ್ಟಿ ಅವರಿಗೆ ಕೋಕ್ ಕೊಟ್ಟು ಪಕ್ಕಾ ಆರ್ಎಸ್ಎಸ್ ಸ್ವಯಂ ಸೇವಕ ಗುರುರಾಜ ಗಂಟಿಹೊಳೆ ಅವರಿಗೆ ಟಿಕೆಟ್ ನೀಡಿದೆ. ಇದು ಟಿಕೆಟ್ ಆಕಾಂಕ್ಷಿಗಳಾಗಿದ್ದ ಹಾಲಿ ಶಾಸಕ ಸುಕುಮಾರ ಶೆಟ್ಟಿ, ಸೇರಿದಂತೆ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಟಿಕೆಟ್ ಕೈತಪ್ಪಿದ್ದು ಖಾತ್ರಿಯಾದ ಬಳಿಕ ಬೈಂದೂರು ಶಾಸಕ ಬಿ. ಸುಕುಮಾರ ಶೆಟ್ಟಿ ಅವರು ಬೆಂಬಲಿಗರೊಂದಿಗೆ ಸರಣಿ ಸಭೆ ನಡೆಸಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಬೈಂದೂರು ಕ್ಷೇತ್ರಕ್ಕೆ ಕೆಲ ತಿಂಗಳ ಹಿಂದಿನವರೆಗೂ ಸುಕುಮಾರ ಶೆಟ್ಟಿ ಅವರೇ ಅಭ್ಯರ್ಥಿ ಎಂಬ ವಾತಾವರಣವಿತ್ತು. ಸಂಘಟನೆ ಮಾಡುವ ಶಕ್ತಿ, ಹಣಬಲ, ಧಾರ್ಮಿಕ ಕ್ಷೇತ್ರಗಳ ಒಡನಾಟ ಅವರ ಪ್ಲಸ್ ಪಾಯಿಂಟ್. ಆದರೆ ಇತ್ತೀಚೆಗೆ ಯಡಿಯೂರಪ್ಪ ಅವರೊಂದಿಗಿನ ಮುನಿಸು ಟಿಕೆಟ್ ಪಡೆಯಲು ಅವರಿಗೆ ತೊಡಕಾಯಿತು ಎಂಬ ಮಾತಿದೆ. ಅಲ್ಲದೆ ಸಂಘ ಪರಿವಾರ, ಬಿಜೆಪಿ ಹೈಕಮಾಂಡ್ ಪ್ರಯೋಗ ಸೂತ್ರಕ್ಕೆ ಪುತ್ತೂರು ಸುಳ್ಯದಂತೆಯೇ ಬೈಂದೂರನ್ನು ಆಯ್ಕೆ ಮಾಡಿಕೊಂಡಿದ್ದು ಟಿಕೆಟ್ ಪಡೆಯಲು ಅಡ್ಡಿಯಾಯಿತು.
ಶೆಟ್ಟರಿಗೆ ಮನಸ್ಸಿನೊಳಗೆ ಮುನಿಸು: ಟಿಕೆಟ್ ತಪ್ಪಿದ್ದು ಖಾತ್ರಿಯಾದ ಬಳಿಕ ಸುಕುಮಾರ ಶೆಟ್ಟಿ ಸರಣಿ ಸಭೆಗಳನ್ನು ನಡೆಸಿ ತನ್ನ ಸಾಮರ್ಥ್ಯವನ್ನು ಹೈಕಮಾಂಡ್ಗೆ ಪ್ರದರ್ಶನ ಮಾಡುವ ಕಾರ್ಯ ಮಾಡಿದ್ದಾರೆ. ತನಗೆ ಟಿಕೆಟ್ ತಪ್ಪಿದ್ದಕ್ಕೆ ಬೇಸರವಿದೆ ಎಂದೂ ಹೇಳಿದ್ದಾರೆ. ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ , ಜೆಡಿಎಸ್ ಮುಖಂಡರು ನನ್ನನ್ನು ಸಂಪರ್ಕಿಸಿದ್ದು ನಿಜ ಎಂದು ಹೇಳುವ ಮೂಲಕ ನನಗೂ ಬೇರೆ ಪಕ್ಷದಲ್ಲಿಯೂ ಮಾನ್ಯತೆ ಇದೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಆದರೆ ತಾನು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯಿಲ್ಲ. ಬಿಜೆಪಿಯೇ ನನ್ನಆದ್ಯತೆ ಎಂದು ಹೇಳುವ ಮೂಲಕ ಮುಂದಿನ ಅವಕಾಶಕ್ಕೆ ದಾರಿ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಅವರೂ ಕೂಡ ಭವಿಷ್ಯದಲ್ಲಿ ಉತ್ತಮ ಅವಕಾಶದ ಭರವಸೆ ನೀಡಿದ್ದಾರೆ. ಹೀಗಾಗಿ ಮುಂದೆ ಅಭ್ಯರ್ಥಿ ಗಂಟಿಹೊಳೆ ಪರ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಾರೋ ಅಥವಾ ಸೈಲೆಂಟ್ ಆಗುವ ಮೂಲಕ ಒಳಪೆಟ್ಟು ನೀಡುತ್ತಾರೋ ಎಂಬುದನ್ನು ಕಾದುನೋಡಬೇಕಿದೆ.
ಕುಂದಾಪುರದಂತಲ್ಲ ಬೈಂದೂರು: ಕುಂದಾಪುರ ಕ್ಷೇತ್ರದಲ್ಲಿ ಹಾಲಾಡಿಯೇ ಪಕ್ಷದ ಬ್ರಾಂಡ್ ಐಕಾನ್ ಅವರು ಹೇಳಿದ್ದೇ ಅಂತಿಮ ಎಂಬ ಸ್ಥಿತಿಯಿದೆ. ಕುಂದಾಪುರದಲ್ಲಿ ಪಕ್ಷ ಸಂಘಟನೆಗಿಂತ ಹೆಚ್ಚಾಗಿ ವೈಯಕ್ತಿಕ ವರ್ಚಸ್ಸು (ಹಾಲಾಡಿ) ಇದುವರೆಗೆ ಕೆಲಸ ಮಾಡಿದೆ. ಆದರೆ ಬೈಂದೂರಿನಲ್ಲಿ ಪರಿಸ್ಥಿತಿ ಹಾಗಿಲ್ಲ. ಬಿಜೆಪಿ ಪಕ್ಷ ಸಂಘಟನೆ ಬಲಿಷ್ಠವಾಗಿದೆ. ಹಳ್ಳಿ ಹಳ್ಳಿಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಸುಕುಮಾರ ಶೆಟ್ಟಿ ಸೇರಿದಂತೆ ಹಿರಿಯ ಮುಖಂಡರು ಸೃಷ್ಟಿಸಿದ್ದಾರೆ. ಅವರ ನಡುವೆಯೇ ಪ್ರಸ್ತುತ ಬೆಳವಣಿಗೆಯಿಂದ ಬಿರುಕು ಉಂಟಾದಲ್ಲಿ ಮಾತ್ರ ಬಿಜೆಪಿಗೆ ನಷ್ಟ ಖಚಿತ.
ಕಾಂಗ್ರೆಸ್ ಗೋಪಾಲ ಪೂಜಾರಿಯೂ ಬಲಿಷ್ಠರು: ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಕೂಡ ಕಾರ್ಯಕರ್ತರ ನಿರಂತರ ಒಡನಾಟ ಹೊಂದಿದ ನಾಯಕ. ಕೆಎಸ್ಆರ್ಟಿಸಿ ಅಧ್ಯಕ್ಷರಾಗಿದ್ದ ವೇಳೆ ಹಳ್ಳಿ ಹಳ್ಳಿಗೆ ಬಸ್ ಸಂಪರ್ಕ ಒದಗಿಸಲು ಪ್ರಯತ್ನಿಸಿ ಜನರ ಮನಗೆದಿದ್ದಾರೆ. ಅಲ್ಲದೆ ಶಿರೂರು ಭಾಗದಲ್ಲಿ ಮುಸ್ಲಿಮರು, ಮಲೆನಾಡು ಭಾಗದಲ್ಲಿ ಬಿಲ್ಲವರ ವೋಟ್ ಗಳಿಕೆಯ ಶಕ್ತಿ ಹೊಂದಿರುವ ಮುಖಂ ಡ. ಹೀಗಾಗಿ ಬೈಂದೂರಿನಲ್ಲಿ ತಮ್ಮದೆ ವರ್ಚಸ್ಸು ಹೊಂದಿ ಮತದಾರರ ಮನಗೆದ್ದಿದ್ದಾರೆ. ಅಲ್ಲದೆ ಬಿಜೆಪಿಯಂತೆ ತಳಮಟ್ಟದಲ್ಲಿಯೇ ಕಾಂಗ್ರೆಸ್ ಕಟ್ಟುವಲ್ಲಿ ಶಕ್ತರಿದ್ದಾರೆ. ಹೀಗಾಗಿಯೇ ಕಾಂಗ್ರೆಸ್ ಹೈಕಮಾಂಡ್ ಅಳೆದೂ ತೂಗಿ ಉದ್ಯಮಿ ಯು.ಬಿ. ಶೆಟ್ಟಿ ಜಿಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ ಅವರು ಟಿಕೇಟ್ ರೇಸ್ನಲ್ಲಿದ್ದರೂ ಅಂತಿಮವಾಗಿ ಗೋಪಾಲ ಪೂಜಾರಿ ಅವರಿಗೆ ಟಿಕೆಟ್ ನೀಡಿದೆ.