ಬಂಟ್ವಾಳ: ರಾಜ್ಯದಲ್ಲಿ ಕಾಂಗ್ರೆಸ್ ಮಾಡಿದ ಅಭಿವೃದ್ಧಿ ಕಾರ್ಯಗಳಿಂದ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಹಿಂದೆ ನಡೆದ ಕೊಲೆಗಳನ್ನು ಕಾಂಗ್ರೆಸ್ ಮೇಲೆ ಹೊರಿಸಿ ಭಾವನಾತ್ಮಕವಾಗಿ ಜನರನ್ನು ಮರುಳು ಮಾಡಿದ್ದು, ಆದರೆ ಈ ಬಾರಿ ಅವರ ಮಾತುಗಳಿಗೆ ಮಾರು ಹೋಗದೆ ತಕ್ಕ ಉತ್ತರ ನೀಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.
ಅವರು ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬಂಟ್ವಾಳ ಪ್ರಜಾಧ್ವನಿ ಯಾತ್ರೆಯಲ್ಲಿ ಕರಿಯಂಗಳ, ಬಡಗಬೆಳ್ಳೂರು, ಅಮ್ಮುಂಜೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಯಾತ್ರೆ ಸಾಗಿದ ಬಳಿಕ ಬಡಕಬೈಲು ಜಂಕ್ಷನ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಈಗಾಗಲೇ ನೀಡಿರುವ ಗ್ಯಾರಂಟಿ ಭರವಸೆಗಳಲ್ಲಿ ಒಂದೊಂದು ಕುಟುಂಬಗಳಿಗೆ ಲಕ್ಷಾಂತರ ರೂ.ಲಾಭವಾಗಲಿದ್ದು, ಜತೆಗೆ ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ತಂದಿದ್ದೇವೆ. ಅದರ ಮೂಲಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ, ನಾರಾಯಣ ಗುರು ನಿಗಮ, ಬಂಟ ಅಭಿವೃದ್ಧಿ ನಿಗಮ, ಅತಿ ಹಿಂದುಳಿದ ವರ್ಗಗಳ ನಿಗಮ ಮಾಡಿ ತಲಾ ೨೫೦ ಕೋ.ರೂ.ಗಳ ಅನುದಾನ ನೀಡಲಿದ್ದೇವೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ನಾವು ನೀಡಿದ ೫ ಸಾವಿರ ಕೋ.ರೂ.ಗಳಿಗೆ ಸಾಕ್ಷಿ ಕೇಳುತ್ತಿರುವ ಬಿಜೆಪಿಯವರ ಅವರ ೨ ಸಾವಿರ ಕೋ.ರೂ.ಗಳಿಗೆ ಸಾಕ್ಷಿ ತೋರಿಸಲಿ. ನನ್ನ ವಿರುದ್ಧ ಮಾಡಿರುವ ಎಲ್ಲಾ ಅಪಪ್ರಚಾರಗಳಿಗೆ ತಕ್ಕ ಪಾಠ ಕಲಿಸುವಂತೆ ತಾನು ದೇವರ ಬಳಿ ಪ್ರಾರ್ಥನೆ ಮಾಡಿದ್ದೇನೆ. ನಾನು ೧೩ ವರ್ಷ ಮಂತ್ರಿಯಾಗಿ ಕೆಲಸ ಮಾಡಿದ್ದು, ಮನಸ್ಸು ಮಾಡಿದ್ದರೆ ಎಲ್ಲಿಗೋ ತಲುಪಬಹುದಿತ್ತು. ಆದರೆ ನಾನು ಪ್ರಾಮಾಣಿಕತೆ ಬಿಟ್ಟು ಕೆಲಸ ಮಾಡಿಲ್ಲ. ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ನೀವು ನೀಡಿರುವ ಸಹಕಾರ ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಎಂ.ಎಸ್.ಮಹಮ್ಮದ್, ಪದ್ಮಶೇಖರ್ ಜೈನ್, ಅಬ್ಬಾಸ್ ಆಲಿ, ಪಿಯೂಸ್ ರಾಡ್ರಿಗಸ್, ಸುಭಾಶ್ಚಂದ್ರ ಶೆಟ್ಟಿ, ಅಪ್ಪಿ, ಜಯಂತಿ ಪೂಜಾರಿ ಮೊದಲಾದವರಿದ್ದರು.
ಎಡ್ತೂರು ರಾಜೀವ ಶೆಟ್ಟಿ ಅವರು ಹಿಂದೆ ರಮಾನಾಥ ರೈ ಅವರು ಸಚಿವರಾಗಿದ್ದ ವೇಳೆ ಕರಿಯಂಗಳ, ಅಮ್ಮುಂಜೆ, ಬಡಗಬೆಳ್ಳೂರು ಗ್ರಾ.ಪಂ.ಗಳಿಗೆ ನೀಡಿದ ಕೊಡುಗೆಗಳನ್ನು ವಿವರಿಸಿದರು. ಮಾಣಿ ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.