ವೇಣೂರು: ಕ್ಷುಲ್ಲಕ ವಿಚಾರಕ್ಕೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಪತ್ನಿಯನ್ನು ಹತ್ಯೆಗೈದಿರುವ ಆರೋಪಿ ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ನೆರಿಯಕಾಡು ನಿವಾಸಿ ಜೋನ್ಸನ್ ಕೆ.ಎಂ. (೪೧)ಗೆ ಮಂಗಳೂರು ಮಾನ್ಯ ೧ ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 7 ವರ್ಷಗಳ ಕಠಿಣ ಸಜೆ ಹಾಗೂ ರೂ. 10 ಸಾವಿರ ದಂಡ ವಿಧಿಸಿ ಮಂಗಳವಾರ ಆದೇಶ ನೀಡಿದೆ.
ಆರೋಪಿ ಜೋನ್ಸನ್ ಕೆ.ಎಂ. ತನ್ನ ಪತ್ನಿ ಸೌಮ್ಯ ಫ್ರಾನ್ಸಿಸ್ ಅವರನ್ನು ಮದುವೆಯಾದ ಸ್ವಲ್ಪ ಸಮಯದ ನಂತರ ವಿನಾಕಾರಣ ಕ್ಷುಲ್ಲಕ ವಿಚಾರದಲ್ಲಿ ಅಚಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ. ೨೦೨೧ರ ಜ.೭ರಂದು ರಾತ್ರಿ
ಹೆಂಡತಿಯ ಜೊತೆ ಗಲಾಟೆ ನಡೆಸಿದ ಜೋನ್ಸನ್ ಮರದ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಪತ್ನಿಯನ್ನು ಕೊಲೆಗೈದಿದ್ದ. ಈ ಬಗ್ಗೆ ಮೃತರ ಅಣ್ಣ ಸನೋಜ್ ಫ್ರಾನ್ಸಿಸ್ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ಸಂಬಂಧ ಅಂದು ಬೆಳ್ತಂಗಡಿ ವೃತ್ತ ನಿರೀಕ್ಷಕರಾಗಿದ್ದ ಸಂದೇಶ್ ಪಿ.ಜಿ. ಅವರು ಪ್ರಕರಣದಲ್ಲಿ ಆರೋಪಿ ಜಾನ್ಸನ್ ಕೆ.ಎಂ. ಎಂಬಾತನನ್ನು ಬಂಧಿಸಿ ಸೂಕ್ತ ಸಾಕ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ನಡೆಸಿ ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಮಾನ್ಯ ೧ ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಹೆಚ್.ಎಸ್. ಅವರು ಅಪರಾಧಿಗೆ ಕಲಂ: ೪೯೮ (ಎ) ಐಪಿಸಿ ಅಪರಾಧಕ್ಕೆ ಮೂರು ವರ್ಷಗಳ ಕಠಿಣ ಸಜೆ ಹಾಗೂ ೧೦ ಸಾವಿರ ರೂ. ದಂಡ ಹಾಗೂ ಕಲಂ: ೩೦೪ ಐಪಿಸಿ ಅಪರಾಧಕ್ಕಾಗಿ ೭ ವರ್ಷಗಳ ಕಠಿಣ ಸಜೆ ಮತ್ತು ೧೦ ಸಾವಿರ ರೂ ದಂಡ ವಿಧಿಸಿ ಆದೇಶ ಹೊರಡಿಸಿರುತ್ತಾರೆ.
ಪ್ರಕರಣದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರಾಗಿದ್ದ ಸಂದೇಶ್ ಪಿ.ಜಿ. ಅವರು ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದು, ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಕ್ರಾಸ್ತಾರವರು ವಾದಿಸಿದ್ದಾರೆ. ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ಪ್ರಸ್ತುತ ವೇಣೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್ಐ ವೆಂಕಟೇಶ್ರವರು ಕಾರ್ಯನಿರ್ವಹಿಸಿರುತ್ತಾರೆ. ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷ್ಯಂತ್ ಸಿಬಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಮತ್ತು ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ಪ್ರತಾಪ್ ಸಿಂಗ್ ಥೋರಾಟ್ ಮತ್ತು ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್ ಬಿ.ರವರ ನಿರ್ದೇಶನದಂತೆ ಧರ್ಮಸ್ಥಳ ಪಿಎಸ್ಐ ಅನಿಲ್ ಕುಮಾರ್ ಹಾಗೂ ಸಿಬ್ಬಂದಿಗಳ ಮೂಲಕ ನ್ಯಾಯಾಲಯದ ವಿಚಾರಣೆಯ ಮೋನಿಟರಿಂಗ್ ನಡೆಸಲಾಗಿತ್ತು.
ಆರೋಪಿಗೆ ಈ ಮೊದಲು ಉಜಿರೆ ಎಸ್.ಅರ್. ಬಾರ್ ಬಳಿ ನಡೆದ ಕೊಲೆ, ಕೊಯ್ಯೂರು ರೇಷ್ಮೆರೋಡ್ ಕೊಲೆ, ಬೆಳ್ತಂಗಡಿ ಸಂತೆಕಟ್ಟೆ ಕೊಲೆ ಹಾಗೂ ಧರ್ಮಸ್ಥಳ ಸುಟ್ಟು ಕೊಲೆ ಪ್ರಕರಣಗಳಲ್ಲಿ ಶಿಕ್ಷೆ ಅಗಿದೆ.