ನಂಜನಗೂಡು: ಸರ್ಕಾರದ ಪಿಂಚಣಿ ನಂಬಿ ದಿಕ್ಕೆಟ್ಟ ವಿಶೇಷ ಚೇತನ, ತುತ್ತು ಅನ್ನಕ್ಕೂ ಪರದಾಡುತ್ತಿರುವ ಬಗ್ಗೆ ನ್ಯೂಸ್ ಕರ್ನಾಟಕ ವಾಹಿನಿಯ ವರದಿ ಮಾಡಿದ 24 ಗಂಟೆಯ ಒಳಗೆ ಅಧಿಕಾರಿಗಳ ತಂಡ ಭೇಟಿ ನೀಡಿ, ವಿಶೇಷ ಚೇತನನ ಸಮಸ್ಯೆಯನ್ನು ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಕೋಣನೂರು ಗ್ರಾಮದ ವಿಶೇಷ ಚೇತನ ರಾಜಶೇಖರ ಮೂರ್ತಿ ಮನೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಸಿದ್ಧಾರ್ಥ್, ಗ್ರಾಮ ಸಹಾಯಕಿ ಭಾಗ್ಯ, ವಿಶೇಷ ಚೇತನ ಅಧಿಕಾರಿ ಶೇಖರಪ್ಪ, ಶಿಶು ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಕಲಾವತಿ ಭೇಟಿ ನೀಡಿದರು.
ಅಂಗವಿಕಲ ರಾಜಶೇಖರ ಮೂರ್ತಿ ಅವರ ಖಾತೆಯನ್ನು ಪರಿಶೀಲಿಸಿ, ಪಿಂಚಣಿ ಸ್ಥಗಿತವಾಗಿರುವ ಬಗ್ಗೆ ಅಂಚೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಖಾತೆಗೆ ಸಂಬಂಧಿಸಿದಂತೆ ಆಗಿರುವ ಲೋಪದೋಷಗಳನ್ನು ಸರಿಪಡಿಸಲಾಗಿದ್ದು, ಇನ್ನು ಎರಡು ಮೂರು ದಿನಗಳೊಳಗಾಗಿ ಸ್ಥಗಿತ ಕೊಂಡಿರುವ ಪಿಂಚಣಿ ಹಣ ಖಾತೆಗೆ ಜಮೆ ಮಾಡಲಾಗುತ್ತದೆ. ವಿಶೇಷ ಚೇತನ ರಾಜಶೇಖರ ಮೂರ್ತಿ ಅವರನ್ನು ಯಾರು ನೋಡಿಕೊಳ್ಳುತ್ತಿಲ್ಲ ಹಾಗಾಗಿ ಅವರನ್ನು ಬೇರೆ ಕಡೆ ಇರಿಸಲು ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ನ್ಯೂಸ್ ಕರ್ನಾಟಕ ಫಲಶೃತಿಯಾಗಿದೆ.