ಮಂಗಳೂರು: ಭಾರೀ ವಿವಾದದ ಬಳಿಕ ಇಂದು ಮಂಗಳೂರು ವಿವಿಯಲ್ಲಿ ಗಣೇಶ ಪ್ರತಿಷ್ಟಾಪನೆ ನಡೆದಿದೆ. ಸತತ ವಿವಾದದ ಬಳಿಕ ಕೊನೆಗೂ ಗಣೇಶೋತ್ಸವ ನಡೆಸಲು ವಿವಿ ಆಡಳಿತ ಅನುಮತಿ ನೀಡಿದೆ. ಮಂಗಳೂರು ವಿವಿ ಉಪಕುಲಪತಿ ಜಯರಾಜ್ ಅಮೀನ್ ಗಣೇಶ ಪ್ರತಿಷ್ಟಾಪನೆಗೆ ಅನುಮತಿ ನೀಡಿದ್ದರು. ಹೀಗಾಗಿ ಇಂದು ಬೆಳಿಗ್ಗೆ ಮಂಗಳೂರು ವಿವಿ ಮಂಗಳಾ ಆಡಿಟೋರಿಯಂನಲ್ಲಿ ಗಣೇಶ ಪ್ರತಿಷ್ಟಾಪನೆ ಆಗಿದೆ.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಳೆದ 40 ವರ್ಷಗಳಿಂದ ಗಣೇಶೋತ್ಸವ ನಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ವಿವಿಯ ಮಂಗಳಾ ಆಡಿಟೋರಿಯಂನಲ್ಲೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಆದರೆ ಈ ಬಾರಿ ಇದಕ್ಕೆ ವಿಘ್ನ ಎದುರಾಗಿತ್ತು.
ಆದರೆ ಈಗ ಎಲ್ಲ ಅಡೆತಡೆಗಳನ್ನು ಮೀರಿ ಸ್ವತಃ ವಿಸಿಯೇ ಸಕಲ ಧಾರ್ಮಿಕ ವಿಧಿಗಳೊಂದಿಗೆ ಗಣೇಶ ಮೂರ್ತಿ ಪ್ರತಿಷ್ಟಾಪಿಸಿದ್ದಾರೆ. ಸಣ್ಣ ಗಣೇಶ ಮೂರ್ತಿಗೆ ಪ್ರತಿಷ್ಟಾಪನೆ ಬಳಿಕ ಪೂಜೆ ಸಲ್ಲಿಸಲಾಗಿದೆ.
ಹಾಸ್ಟೆಲ್ ವಾರ್ಡನ್ ಗಳ ಉಸ್ತುವಾರಿಯಲ್ಲಿ ಬೆಳಿಗ್ಗೆ 11.01 ಗಂಟೆಗೆ ಮಂಗಳಾ ಆಡಿಟೋರಿಯಂನಲ್ಲಿ ಗಣಪತಿ ಆರಾಧನೆ ಆರಂಭಗೊಂಡಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಭಾಗಿಯಾಗಿದ್ದು, ಜಿಲ್ಲೆಯ ಬಿಜೆಪಿ ಶಾಸಕರು, ಸ್ಥಳೀಯ ಹಿಂದೂ ನಾಯಕರು ಭಾಗಿಯಾಗುವ ಸಾಧ್ಯತೆಯಿದೆ.
ಇನ್ನು ವಿವಿಯ ಮಂಗಳಾ ಆಡಿಟೋರಿಯಂ ಒಳಭಾಗದಲ್ಲೂ ಡಿಸಿಪಿ ಸಿದ್ದಾರ್ಥ್ ಗೋಯಲ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕೆಎಸ್ಆರ್ಪಿ ಸೇರಿದಂತೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಮಂಗಳಾ ಆಡಿಟೋರಿಯಂ ಎಂಟ್ರಿ ಗೇಟ್ ಸೇರಿ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.