ಮಂಗಳೂರು: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಗುಂಪೊಂದು ವಿವಸ್ತ್ರಗೊಳಿಸಿಗಿ ಮೆರವಣಿಗೆ ಮಾಡುತ್ತಿರುವ ವೀಡಿಯೊ ವೈರಲ್ ಆದ ನಂತರ ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಕೆಪಿಸಿಸಿ ವಕ್ತಾರಾದ ಎ.ಸಿ.ವಿನಯರಾಜ್, ಮಣಿಪುರ ರಾಜ್ಯದಲ್ಲಿ ಮಾರ್ಚ್ ತಿಂಗಳಿನಿಂದ ಮೀಸಲಾತಿ ವಿಚಾರಕ್ಕೆ ಸಂಭಂದಪಟ್ಟು ಜನಾಂಗೀಯ ಗಲಭೆ ಮೇಟಿ ಸಮಾಜ ಮತ್ತು ಕುಕ್ಕಿ ಸಮಾಜದ ಮಧ್ಯೆ ನಡೆಯುತ್ತಿದೆ. ಸುಮಾರು 150 ಜನ ಮೃತ ಪಟ್ಟಿದ್ದು, ಸುಮಾರು 300 ಕ್ಕಿಂತಲೂ ಹೆಚ್ಚು ಜನ ಗಾಯಗೊಂಡಿದ್ದು 40 ಸಾವಿರಕ್ಕಿಂತಲೂ ಹೆಚ್ಚು ಜನ ವಸತಿ ರಹಿತರಾಗಿದ್ದಾರೆ, ಮಹಿಳಾ ಅತ್ಯಾಚಾರಗಳು ದಿನದಿತ್ಯ ನಡೆಯುತ್ತಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳು, ಅಂಗಡಿ ಮುಂಗಟ್ಟುಗಳು, ಸರಕಾರಿ ಕಟ್ಟಡಗಳು, ಕೇಂದ್ರ ಮಂತ್ರಿಯೊಬ್ಬರ ಮನೆಯು ಸೇರಿದಂತೆ ಎಲ್ಲವು ಬೆಂಕಿಗೆ ಆಹುತಿಯಾಗಿದೆ. ಇದೆಲ್ಲವೂ ನಡೆಯುವಂತದ್ದು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೋಲೀಸರ ಕಣ್ಮುಂದೆ ಎಂಬುವುದು ನಂಬಲಸಾಧ್ಯ. ಇದೊಂದು ಸರಕಾರಿ ಕೃಪಾಪೋಷಿತ ಜನಾಂಗೀಯ ಗಲಭೆ, ಹಿಂಸಾತ್ಮಕ ಗಲಭೆ ಭೀಕರ ರೂಪಕ್ಕೆ ತಿರುಗಿ ಇಂದಿಗೆ 4 ತಿಂಗಳು ಕಳೆದಿದೆ.
ರಾಜ್ಯದಲ್ಲಿ ಬೀರೇನ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರ ಆಡಳಿತ ಮಾಡುತ್ತಿದೆ. ಇವರದೇ ಪಕ್ಷದ ಸುಮಾರು 10 ಶಾಸಕರು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ರಾಜ್ಯವನ್ನು ರಕ್ಷಿಸುವಂತೆ ಕೇಳಿಕೊಂಡಿದ್ದಾರೆ. ಇಲ್ಲಿಯ ಅನೇಕ ಜನಪರ ಸಂಘಟನೆಗಳು ಪ್ರಧಾನ ಮಂತ್ರಿಗಳನ್ನು ವಿನಂತಿ ಮಾಡಿಕೊಂಡಿದ್ದಾರೆ.
ಆದರೆ ಪ್ರಧಾನ ಮಂತ್ರಿಗಳು ಮತ್ತು ಕೇಂದ್ರ ಗೃಹ ಮಂತ್ರಿ ಅಮಿತ್ ಶಾಹ್ ಕರ್ನಾಟಕ ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲೇ ನಿರತರಾಗಿದ್ದರು. ಚುನಾವಣೆ ಸಂಧರ್ಭ ಚುನಾವಣೆ ಇರುವ ರಾಜ್ಯಗಳಿಗೆ ಹಲವಾರು ಬಾರಿ ಪ್ರಚಾರ, ರಾಲಿ, ರೋಡ್ ಶೋ ಗೆ ಹೋಗುವ ಪ್ರಧಾನ ಮಂತ್ರಿ ಮೋದಿಜಿ ಗೆ ಮಣಿಪುರ ರಾಜ್ಯ ನಮ್ಮ ದೇಶದ ಅವಿಭಾಜ್ಯ ಅಂಗ ಎಂಬುವುದನ್ನು ಮರೆತು ಬಿಟ್ಟರು. ಅಲ್ಲಿಯ ಜನ ನಮ್ಮ ಸಹೋದರ ಸಹೋದರಿಯರು ಎಂಬುವುದನ್ನು ಮರೆತು ಬಿಟ್ಟರು. ಅಮೇರಿಕಾದಲ್ಲಿ ಹೆಣ್ಣು ಮಕ್ಕಳ ಸಬಲೀಕರಣದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿಜಿ, ನನ್ನ ದೇಶದಲ್ಲಿ ಮಹಿಳೆಯರ ಬೆತ್ತಲೆ ಪರೇಡ್ ಆದ ಸಂದರ್ಭ ಇದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಅರಿತುಕೊಳ್ಳಬೇಕಾಗಿತ್ತು. ಗಲಭೆ ನಿಯಂತ್ರಿಸುವ ಬದಲು ಸಾಮಾಜಿಕ ಜಾಲತಾಣದ ಮೇಲೆ ನಿರ್ಬಂಧ ಹಾಗೂ ಇಂಟರ್ನೆಟ್ ಸೇವೆ ಸ್ಥಗಿತ ಮಾಡಿರುವುದು, ವಿಶ್ವ ಗುರು ಎಂದು ಜಂಬ ಕೊಚ್ಚಿಕೊಳ್ಳುವ ಪ್ರಧಾನಿ ಮೋದಿಜಿ ದೇಶ ಮತ್ತು ಪ್ರಪಂಚದ ಇತರ ದೇಶಗಳ ಜನರನ್ನು ಕತ್ತಲಲ್ಲಿ ಇಡುವ ಕೆಲಸ ಮಾಡಿದರು.
ಸುಮಾರು ಎರಡು ತಿಂಗಳ ಹಿಂದೆ ಮೇಟಿ ಸಮಾಜದ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಸಾರ್ವಜನಿಕವಾಗಿ ಪರೇಡ್ ಮಾಡಿ ಲೈಂಗಿಕ ಕಿರುಕುಳ ಕೊಟ್ಟು, ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು ಖಂಡನೀಯ. ಶ್ರೀ ರಾಮ ಹುಟ್ಟಿದ ದೇಶದಲ್ಲಿ ಇಂತಹ ಘಟನೆ ಪೋಲೀಸರ ಸಮ್ಮುಖದಲ್ಲಿ ನಡೆದಿರುವುದು ಮಾನವ ಕುಲ ತಲೆ ತಗ್ಗಿಸುವಂತಹ ಹೀನಾಯ ಘಟನೆ. ಕಂಡ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸುಪ್ರಿಂ ಕೋರ್ಟ್ ತಾನಾಗಿ ಕೇಸನ್ನು ತೆಗೆದುಕೊಂಡು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡು, ನಾವೇ ಕ್ರಮ ಜರುಗಿಸಬೇಕಾ ಅಥವಾ ನೀವು ಕ್ರಮ ವಹಿಸುತ್ತೀರಾ ಎಂದು ಚಾಟಿ ಬೀಸಿದ ಮೇಲೆ, ನಿನ್ನೆಯವರೆಗೂ ಮೌನವಾಗಿದ್ದ ಪ್ರಧಾನ ಮಂತ್ರಿಗಳು ಹೇಳಿಕೆಯನ್ನು ಕೊಟ್ಟಿರುವುದು.
ಭೇಟಿ ಪಡಾವೋ ಭೇಟಿ ಬಚಾವೋ’ ಎಂದು ಹೋದಲೆಲ್ಲಾ ಹೇಳುವ ಮೋದಿಜಿ ಸುಪ್ರೀಂ ಕೋರ್ಟ್ ಚಾಟಿ ಬೀಸುವವರೆಗೆ ಯಾಕೆ ಹೇಳಿಕೆ ನೀಡಿಲ್ಲ. ಈ ರಾಜ್ಯದ ಜನರನ್ನು ಕಾಪಾಡುವ ಉದ್ದೇಶದಿಂದ ಯಾಕೆ ರಾಷ್ಟ್ರಪತಿ ಆಳ್ವಿಕೆ ಘೋಷಣೆ ಮಾಡಿಲ್ಲ. ಎಲ್ಲ ರಾಜ್ಯದಲ್ಲಿ ಮಹಿಳೆಯರ ರಕ್ಷಣೆಗೆ ಕಾನೂನನ್ನು ಇನ್ನಷ್ಟು ಸುಧೃಡಗೊಳಿಸಬೇಕು ಎಂದು ಹೇಳಿರುವುದು ಶೋಚನೀಯ. ಮಹಿಳೆಯರ ಮೇಲೆ ಅತ್ಯಾಚಾರ ಆಗುತ್ತಿರುವುದು ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಹಾಗೂ ಈ ದೇಶದ ಗಮನ ಸೆಳೆದ ಗಂಭೀರ ಅತ್ಯಾಚಾರ ಮಾಡಿ ಕೊಲೆ ಪ್ರಕರಣಗಳಲ್ಲಿ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರೇ ಭಾಗಿಯಾಗಿರುವುದು ಅಚ್ಚರಿಯನ್ನು ಮೂಡಿಸುತ್ತದೆ.
ಪ್ರಧಾನ ಮಂತ್ರಿಗಳ ಕೈಕೆಳಗೆ ಅನೇಕ ಗುಪ್ತ ಮಾಹಿತಿ ದಳಗಳು ಇವೆ. ಈ ವಿಚಾರ ಇವರ ಗಮನಕ್ಕೆ ಬಂದಿಲ್ಲವೇ. ಈ ದೇಶದ ಮತ್ತು ಮಣಿಪುರ ರಾಜ್ಯದ ಮಾನವ ಹಕ್ಕು ಆಯೋಗ ಯಾಕೆ ಮೌನವಾಗಿತ್ತು. ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ತನ್ನ ಕೈಗೊಂಬೆಯಾಗಿ ಮಾಡಿದ್ದಕ್ಕೆ ಇದೊಂದು ಸ್ಪಷ್ಟ ನಿಧರ್ಶನ.
ಆದಿವಾಸಿ ಜನಾಂಗಕ್ಕೆ ಸೇರಿದ ಮಹಿಳೆ ಆಗಿದ್ದುಕೊಂಡು ಹಾಗೂ ಈ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಧ್ರೌಪದಿ ಮುರ್ಮು ಯಾಕೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿಲ್ಲ. ಇವರೊಬ್ಬ ಮಹಿಳೆ ಆಗಿದ್ದುಕೊಂಡು ಯಾಕೆ ಮೌನ ವಹಿಸಿದ್ದಾರೆ. ಮೋದಿಜಿ ಅವರನ್ನು ಕೇಳುವ ಧೈರ್ಯ ಅವರಲ್ಲಿ ಇಲ್ಲವೇ. ಈ ದೇಶದಲ್ಲಿ ಏನಾಗುತ್ತಿದೆ. ರಾಜ ಧರ್ಮ ಕಾಪಾಡುವವರು ಯಾರು.
ಬಿಜೆಪಿ ಮಹಿಳಾ ಪರ ಹೋರಾಟ ಮಾಡುವ ಸ್ಮೃತಿ ಇರಾನಿ ಯಾಕೆ ಇದರ ಬಗ್ಗೆ ಚಕಾರವೆತ್ತಿಲ್ಲ. ಬಿಜೆಪಿ ಮಹಿಳಾ ಸಂಘಟನೆಗಳು ಯಾಕೆ ಮೌನವಾಗಿದೆ. ಬಿಜೆಪಿ ಪಕ್ಷ ಈ ಘಟನೆಯನ್ನು ಖಂಡಿಸಿ ಯಾಕೆ ಹೇಳಿಕೆ ನೀಡಿಲ್ಲ. ಬಿಜೆಪಿ ಮಹಿಳಾ ಪ್ರತಿನಿಧಿಗಳು ಯಾಕೆ ಮಾತನಾಡುತ್ತಿಲ್ಲ. ಶೋಬಾ ಕರಂದ್ಲಾಜೆ ಎಲ್ಲಿ ಇದ್ದಾರೆ ಈಗ.
ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಕೇಂದ್ರ ಮಂತ್ರಿ ಬ್ರಿಜ್ ಭೂಷಣ್ ರವರ ವಿರುದ್ಧ ಪ್ರಧಾನಮಂತ್ರಿ ಏನೂ ಕ್ರಮ ಕೈಗೊಂಡಿಲ್ಲ. ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣ, ಉನಾವ್ ಅತ್ಯಾಚಾರ ಪ್ರಕರಣ, ಬಿಲ್ಕಿಸ್ ಬಾನು ಅತ್ಯಾಚಾರ ಕೊಲೆ ಪ್ರಕರಣ ಹಾಗೂ ಕಾಶ್ಮೀರದ ಖತ್ವ ಅತ್ಯಾಚಾರ ಕೊಲೆ ಪ್ರಕರಣಗಳ ಬಗ್ಗೆ ಪ್ರಧಾನ ಮಂತ್ರಿಗಳು ಯಾವೊಂದು ಹೇಳಿಕೆ ನೀಡದೆ ಮೌನ ವಹಿಸಿದ್ದೇ ಇಂತಹ ಕ್ರೂರ ಪ್ರಕರಣಗಳು ದೇಶದಲ್ಲಿ ಸಂಭವಿಸುತ್ತಿದೆ. ಇದರಿಂದ ‘ಬಿಜೆಪಿ ಹಠಾವೋ ಬೇಟಿ ಬಚಾವೊ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಹೋರಾಟಮಾಡಬೇಕಿದೆ ಎಂದಿದ್ದಾರೆ.
ಇನ್ನು ಈ ಸುದ್ದಿಗೋಷ್ಠಿಯಲ್ಲಿ ಕಾರ್ಪೋರೇಟರ್ಗಳಾದ ಜೆಸಿಂತಾ ಆಲ್ಫ್ರೆಡಾ, ಜೀನತ್ ಸಂಶುದ್ದೀನ್, ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಸಾಲಿಯಾನ್, ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್, ರಾಕೇಶ್ ದೇವಾಡಿಗ, ದುರ್ಗಾಪ್ರಸಾದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಶಿಕಲಾ, ಶಾಂತಲಾ ಗಟ್ಟಿ, ಡಿಸಿಸಿ ಉಪಾಧ್ಯಕ್ಷರಾದ ಅಪ್ಪಿ, ರೂಪ ಚೇತನ್ ಮುಂತಾದವರು ಉಪಸ್ಥಿತಿಯಲ್ಲಿದ್ದರು.