ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಸುಳ್ಯ ಕೈ ಅಭ್ಯರ್ಥಿಯಾಗಿ ಜಿ. ಕೃಷ್ಣಪ್ಪ ಅವರ ಆಯ್ಕೆ ಖಂಡಿಸಿ ಸುಳ್ಯದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಂದಕುಮಾರ್ ಬೆಂಬಲಿಗ ರು ಪ್ರತಿಭಟನೆ ನಡೆಸಿದ್ದಾರೆ.
ಕೃಷ್ಣಪ್ಪ ಬದಲು ನಂದಕುಮಾರ್ ಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಸುಳ್ಯದಿಂದ ಮಂಗಳೂರು ಕಾಂಗ್ರೆಸ್ ಕಚೇರಿಗೆ ದೌಡಾಯಿಸಿದ ನಂದಕುಮಾರ್ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಬಸ್ ಗಳ ಮೂಲಕ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಕೈ ಕಾರ್ಯಕರ್ತರು, ಸ್ಥಳಕ್ಕೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಆಗಮಿಸಬೇಕೆಂದು ಆಗ್ರಹಿಸಿದರು.
ತುರ್ತು ಸಭೆ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಗೆ, ಪ್ರತಿಭಟನಾ ಸ್ಥಳದಿಂದಲೇ ಕರೆ ಮಾಡಿ ಅಸಮಾಧಾನ ಹೊರಹಾಕಿದರು.
ಸದ್ಯ ಘೋಷಣೆ ಮಾಡಿರುವ ಸ್ಥಾನವನ್ನು ಪುನರ್ ಪರಿಶೀಲನೆ ನಡೆಸಿ ನಂದಕುಮಾರ್ ರವರಿಗೆ ಬಿ ಫಾರ್ಮ್ ನೀಡಬೇಕು. ಕೆಪಿಸಿಸಿ ಗೆ ನಮ್ಮ ಮನವಿ ರವಾನೆ ಮಾಡಬೇಕು ಎಂದು ಆಗ್ರಹಿಸಿದರು.
ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆ ಹೊರತು ನಾಯಕರ ಅಭ್ಯರ್ಥಿಗಲ್ಲ. ಕಾರ್ಯಕರ್ತರ ಅಭಿಪ್ರಾಯಕ್ಕೆ ಬೆಲೆ ಕೊಡಿ ಎಂದು ಆಗ್ರಹಿಸಿದರು.