ಮಂಗಳೂರು: ಜಿಲ್ಲೆಯಲ್ಲಿ ಒಂದು ವರ್ಗದ ಜನರ ಹತ್ಯೆಯಾಗಿದೆ ಎಂಬ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆ ಕುರಿತು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ರಮಾನಾಥ ರೈ ಸುದ್ದಿಗೋಷ್ಠಿ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಒಂದು ವರ್ಗದ ಹತ್ಯೆ ಆಗಿದೆ ಎಂದು ಹೇಳಿದ್ದಾರೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆದಿದೆ. ಈ ಹತ್ಯೆಯಲ್ಲಿ ಭಾಗಿಯಾಗಿದವರು ಒಬ್ಬರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಲ್ಲ. ಕಾಂಗ್ರೆಸ್ ನ ಹಿಂದೂ, ಮುಸ್ಲಿಂ ಕಾರ್ಯಕರ್ತರು ಯಾರು ಈ ಹತ್ಯೆಯಲ್ಲಿ ಇಲ್ಲ. ಎಲ್ಲಾ ಹತ್ಯೆಯಲ್ಲಿ ಇರುವವರು ಮತೀಯವಾದಿ ಸಂಘಟನೆಯವರು, ನಿಮ್ಮ ಕಾರ್ಯಕರ್ತರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕತ್ತಿ, ಹೊಡಿ ಬಡಿ ಭಾಷಣ ಮಾಡುವವರು ಯಾರು…? ಸಿದ್ದ ರಾಮಯ್ಯ ಅವರ ಅವಧಿಯಲ್ಲಿ ಹತ್ಯೆ ಆಗಿದೆ ಎಂದು ಹೇಳುತ್ತಾರೆ. ಆದರೆ ಸಿಎಂ ಇಂತಹ ಯಾವುದೇ ಹತ್ಯೆಯನ್ನು ಬೆಂಬಲಿಸುವುದಿಲ್ಲ. ಹತ್ಯೆ ಮಾಡುವ ಪಕ್ಷವೆಂಬುದು ಇದ್ದರೆ ಅದು ಬಿಜೆಪಿ ಪಕ್ಷ. ಟಿಪ್ಪು ಜಯಂತಿ ಗಲಭೆ ವೇಳೆ ಹರೀಶ್ ಹತ್ಯೆಯಾಯಿತು. ಈ ಹತ್ಯೆ ಮಾಡಿದವರೇ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಾರೆ. ಒಬ್ಬ ಸತ್ತರೆ ಅವರು ಹೇಳುವುದು ಒಳ್ಳೆಯ ಫಸಲು ಬರುತ್ತೆ ಎನ್ನುತ್ತಾರೆ. ಇವರು ಹತ್ಯೆ ನಡೆದರೆ ಅದರಲ್ಲಿ ಲಾಭ ನೋಡುತ್ತಾರೆ. ನಾವು ಅಂತಹವರಲ್ಲ.
ನಳೀನ್ ಕುಮಾರ್ ಕಟೀಲ್ ಮಾತಿಗೆ ಪೂರಕವಾಗಿ ಎಸ್ಐಟಿ ರಚನೆ ಮಾಡಬೇಕು. ತನಿಖೆಯ ಮೂಲಕ ಹತ್ಯೆ ಹಿಂದೆ ಇರುವ ಪಿತೂರಿದಾರರ ಬಂಧನ ಆಗಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ಈ ಪಿತೂರಿದಾರನಿಗೆ ಶಿಕ್ಷೆ ಆದರೆ ಮಾತ್ರ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಸಾಧ್ಯ ಎಂದರು. ಈಗ ಲೋಕಸಭೆ ಚುನಾವಣೆ ಸಮೀಪಿಸಿದ ಕಾರಣ ಇವರು ರಾಜಕೀಯ ಮಾಡುತ್ತಿದ್ದಾರೆ. ಇನ್ನೂ ಹತ್ಯೆಯನ್ನು ಮುಂದಿಟ್ಟು ರಾಜಕೀಯ ಮಾಡುತ್ತಾರೆ. ವಿಧಾನಸಭೆ ಚುನಾವಣೆಯ ಬಳಿಕ ಬಿಜೆಪಿ ನೀರಿನಿಂದ ತೆಗೆದ ಮೀನಿನಂತಾಗಿದೆ. ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಅಪಪ್ರಚಾರ ಮಾಡಿದರು. ಅದೂ ಅವರಿಗೆ ತಿರುಗು ಬಾಣವಾಗಿದೆ. ಕಾಂಗ್ರೆಸ್ ಎಂದಿಗೂ ದ್ವೇಷ ರಾಜಕೀಯ ಮಾಡಿಲ್ಲ. ಯಾವುದೇ ಹತ್ಯೆಯಲ್ಲಿ ಕಾಂಗ್ರೆಸ್ ಪಕ್ಷ ಭಾಗಿಯಾಗಿಲ್ಲ. ಹೆಣದ ರಾಜಕೀಯ ಅಪಪ್ರಚಾರ ಮಾಡುವುದನ್ನು ಬಿಡಬೇಕು. ಜನರು ಎಚ್ಚರಿಕೆ ವಹಿಸಬೇಕು. ಈ ಸಮಾಜದಲ್ಲಿ ಹತ್ಯೆ ರಾಜಕೀಯ ಮಾಡುವವರಿದ್ದಾರೆ. ರಾತ್ರಿ ವೇಳೆ ಹೋಗುವವರು ಸ್ವಲ್ಪ ಎಚ್ಚರ ವಹಿಸಬೇಕು ಎಂದು ಎಚ್ಚರಿಸಿದರು.