ಮಂಗಳೂರು: ಅಜೆಕಾರು ಗ್ರಾಮದ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಪ್ರದೇಶಕ್ಕೆ ಶ್ರೀರಾಮಸೇನೆ ಮುಖಂಡ, ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿರುವ ಪ್ರಮೋದ್ ಮುತಾಲಿಕ್ ಭೇಟಿ ನೀಡಿದರು.
ಈ ಯೋಜನೆಗೆ 108 ಕೋಟಿ ರೂ. ವೆಚ್ಚವಾಗಿದ್ದು, ಅಲ್ಲದೆ ತಡೆಗೋಡೆ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 30 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆಯಾಗಿದೆ. ಈ ಯೋಜನೆ ಶಾಸಕರ ಜೇಬು ತುಂಬಿಸುವ ಯೋಜನೆಯಾಗಿದ್ದು, ಇಲ್ಲಿ ಒಂದು ಹನಿ ನೀರು ಕೂಡ ಶೇಖರಣೆಯಾಗಿಲ್ಲ ಎಂದು ಆರೋಪಿಸಿದರು. ಯಾವ ಉದ್ದೇಶದಿಂದ ಈ ಯೋಜನೆಯನ್ನು ಮಂತ್ರಿಗಳು ಮಾಡಿದ್ದರೋ ಅದು ಸಂಪೂರ್ಣವಾಗಿ ವಿಫಲವಾಗಿದೆ. ಯೋಜನೆ ಅವೈಜ್ಞಾನಿಕವಾಗಿದೆ. ರಸ್ತೆಯಲ್ಲಿ ಓಡಾಡುವ ಜನರಿಗೆ ತೋರಲೆಂದು ಏತ ನೀರಾವರಿ ಯೋಜನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಳೆಗಾಲ ಆರಂಭಕ್ಕೆ 2 ತಿಂಗಳು ಬಾಕಿಯಿದೆ. ಈಗ ನೀರಿನ ಹಾಹಾಕಾರ ಇದೆ. ಜನರಿಗೆ ಪ್ರಸ್ತುತ ನೀರಿನ ಅಗತ್ಯವಿದೆ. ಆದರೆ ಈಗ ಅಣೆಕಟ್ಟಿಯಲ್ಲಿ ಹನಿ ನೀರೂ ಕೂಡ ಇಲ್ಲ ಎಂದರು. ಯೋಜನೆ ಉದ್ಘಾಟನೆಗೊಂಡು ವರ್ಷ ಪೂರ್ಣಗೊಂಡಿಲ್ಲ. 1 ಕೋಟಿ ರೂ. ಖರ್ಚು ಮಾಡಿ ಉದ್ಘಾಟನಾ ಕಾರ್ಯಕ್ರಮ ಮಾಡಿದ್ದಾರೆ. ಯೋಜನೆ ಮೂಲಕ ಶಾಸಕರು ಜನರ ಕಣ್ಣಿಗೆ ಮಣ್ಣೆರೆಚಿ ಮೋಸ ಮಾಡಿದ್ದಾರೆ. ಜನರ ಅಭಿವೃದ್ಧಿಗೆ ಅಣೆಕಟ್ಟು ಕಟ್ಟಿಲ್ಲ. ಜನಪ್ರತಿನಿಧಿ, ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಜೀವಂತ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಕ್ರಿಮಿನಲ್ ಪ್ರಕರಣಕ್ಕೆ ಚಿಂತಿಸುತ್ತಿದ್ದೇವೆ.
ಹರೀಶ್ ಅಧಿಕಾರಿ, ರಾಘವ್ ಮುದ್ರಾಡಿ ನಾಗೇಶ್ ಪೈ, ವಿವೇಕಾನಂದ ಶೆಣೈ, ಸತ್ಯರಂಜನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಯೋಜನೆ ಪ್ರದೇಶದಲ್ಲಿ ಕ್ರಿಕೆಟ್ ಆಟ: ಎಣ್ಣೆಹೊಳೆ ಏತ ನೀರಾವರಿ ಯೋಜನೆ ಪ್ರದೇಶದಲ್ಲಿಯೇ ಶ್ರೀರಾಮ ಸೇನೆ ಮುಖಂಡ ಮುತಾಲಿಕ್, ಹರೀಶ್ ಅಧಿಕಾರಿ, ರಾಘವ್ ಮುದ್ರಾಡಿ ನಾಗೇಶ್ ಪೈ, ವಿವೇಕಾನಂದ ಶೆಣೈ, ಸತ್ಯರಂಜನ್ ಶೆಟ್ಟಿ ಮೊದಲಾದವರು ಕ್ರಿಕೆಟ್ ಆಟವಾಡುವ ಮೂಲಕ ನೀರಿನ ಸಂಗ್ರಹವಿಲ್ಲದಿರುವುದನ್ನು ತೋರಿಸಿ ವ್ಯಂಗ್ಯವಾಡಿದರು.