News Karnataka Kannada
Tuesday, May 07 2024
ಮಂಗಳೂರು

ತಾಕತ್ತಿದ್ದರೆ ಷರತ್ತುಗಳಿಲ್ಲದೆ ಗ್ಯಾರಂಟಿ ಯೋಜನೆ ಜಾರಿ ಮಾಡಿ: ವೇದವ್ಯಾಸ್ ಕಾಮತ್ ಸವಾಲ್‌

Congress govt ruled by hate: Vedavyas Kamath
Photo Credit : News Kannada

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಸಮುದಾಯಗಳ ನಡುವೆ ಒಡಕು ಮೂಡಿಸಿ ದ್ವೇಷದ ರಾಜಕಾರಣದ ಮೂಲಕ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಅಲ್ಲಲ್ಲಿ ಬಿಜೆಪಿ ಕಾರ್ಯಕರ್ತರ, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆದು ಕೋಮು ಭಾವನೆ ಕೆರಳಿಸುವ ಕೃತ್ಯ ನಡೆಯುತ್ತಿದೆ. ಕೆಲವೆಡೆ ಪಾಕಿಸ್ಥಾನದ ಧ್ವಜ ಹಾರಿಸುವ ಮೂಲಕ ದೇಶ ದ್ರೋಹದ ಕೆಲಸವೂ ನಡೆದಿದೆ. ಈ ಎಲ್ಲ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಘೋಷಿಸಿದ `ಗ್ರಾರೆಂಟಿ’ ಈಗಲೇ ದೊಡ್ಡ ಮಟ್ಟಿನ ಗೊಂದಲಕ್ಕೆ ಎಡೆ ಮಾಡಿದೆ. ಸರಕಾರ ಬಂದ 24 ಗಂಟೆಯಲ್ಲೇ ಗ್ಯಾರಂಟಿ ಜಾರಿ ಎಂದು ಘೋಷಿಸಿದ್ದ ಕಾಂಗ್ರೆಸ್ ಈಗ ಪೊಳ್ಳು ಭರವಸೆಗಳನ್ನು ಈಡೇರಿಸಲು ಪರದಾಡುತ್ತಿದೆ. ಸರಕಾರ ಬಂದು ದಿನ ಹತ್ತಾದರೂ ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದೆ ಅನಗತ್ಯ ವಿಳಂಬ ಮಾಡಿ ಗ್ಯಾರಂಟಿಗಳಿಗೆ ನಿಯಮ ತರಲು ಹೊರಟಿದೆ. ಬಸ್ ಗಳಲ್ಲಿ ಜನ ಟಿಕೆಟ್ ಇಲ್ಲದೆ ಪ್ರಯಾಣಿಸಿ ನಿರ್ವಾಹಕರಲ್ಲಿ ಗಲಾಟೆ ಮಾಡುತ್ತಿದ್ದಾರೆ. ವಿದ್ಯುತ್ ಬಿಲ್ ಪಾವತಿಗೂ ಜನ ಕೆಲವೆಡೆ ತಗಾದೆ ತೆಗೆದು ಮೀಟರ್ ರೀಡಿಂಗ್‍ಗೆ ಬಂದ ಸಿಬ್ಬಂದಿಗೆ ಹಲ್ಲೆ ನಡೆಸಿದ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗಿವೆ. ಯಾವುದೇ ಸ್ಪಷ್ಟತೆ ಇಲ್ಲದೆ ಯೋಜನೆ ಘೋಷಿಸಿದ್ದರ ಪರಿಣಾಮ ಇದಾಗಿದೆ. ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಆರಂಭದಲ್ಲೇ ಗೊಂದಲಮಯವಾಗಿದೆ ಎಂದು ಕಾಮತ್ ಹೇಳಿದರು.

ಗ್ಯಾರಂಟಿಗೆ ಕಂಡೀಶನ್ ಯಾಕೆ? ಗ್ಯಾರಂಟಿ ಯೋಜನೆ ನಿಮಗೂ ಇದೆ, ನಮಗೂ ಇದೆ ಎಂದು ಚುನಾವಣೆ ಭಾಷಣದಲ್ಲಿ ಸಿದ್ದರಾಮಯ್ಯ, ಡಿಕೆಶಿ ಘೋಷಿಸಿದ್ದರು. ಬಸ್‍ನಲ್ಲಿ ಮದುವೆಗೂ ಫ್ರೀ, ದೇವಸ್ಥಾನಕ್ಕೂ ಫ್ರೀ, ಮಾವನ ಮನೆಗೂ ಫ್ರೀ, ತವರು ಮನೆಗೂ ಫ್ರೀ ಎಂದು ಅಂದು ಭಾಷಣ ಬಿಗಿದಿದ್ದರು. ಇದೀಗ ಅದನ್ನು ಜಾರಿಗೆ ತರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ನಿರುದ್ಯೋಗಿಗಳಿಗೆ ಘೋಷಿಸಿದ ನಿರುದ್ಯೋಗ ಭತ್ಯೆ ಕೇವಲ 2022-23ನೇ ಸಾಲಿನ ನಿರುದ್ಯೋಗಿಗಳಿಗೆ ಮಾತ್ರ ಅನ್ವಯ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಕಾಂಗ್ರೆಸ್ ಜನರನ್ನು ಮರಳು ಮಾಡಿ ಅಧಿಕಾರಕ್ಕೇರಿರುವುದು ಸ್ಪಷ್ಟವಾಗಿದೆ. ಗ್ಯಾರಂಟಿ ಜಾರಿಗೆ ನಿಯಮ ತಂದು ಜನರನ್ನು ಕಾಂಗ್ರೆಸ್ ವಂಚಿಸಲು ಹೊರಟಿದೆ. ನಮಗೂ ಫ್ರೀ, ನಿಮಗೂ ಫ್ರೀ ಅಂತ ಹೇಳುವಾಗ ಈ ಎಲ್ಲ ಪುಕ್ಕಟೆ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ಬಜೆಟ್ ಬೇಕು ಎಂಬ ಕನಿಷ್ಠ ಜ್ಞಾನ ನಿಮಗೆ ಇರಲಿಲ್ಲವೇ ? 200 ಯೂನಿಟ್ ವಿದ್ಯುತ್ ಉಚಿತ ಎಂದು ಹೇಳಿದ ನೀವು, ಈಗ ಅದು ಕೇವಲ 200 ಯೂನಿಟ್ ಒಳಗೆ ಉಪಯೋಗಿಸಿದವರಿಗೆ ಮಾತ್ರ ಎಂದು ಕಂಡೀಶನ್ ಹಾಕುತ್ತಿದ್ದೀರಿ. ಇದು ಯಾವ ನ್ಯಾಯ ? ಎಂದು ಪ್ರಶ್ನಿಸಿದ ಅವರು, ನೀವು ಘೋಷಿಸಿದ ಎಲ್ಲ ಗ್ಯಾರೆಂಟಿಗಳನ್ನು ಯಾವುದೇ ಶರತ್ತುಗಳು ಇಲ್ಲದೆ ಜಾರಿಗೆ ತನ್ನಿ ಎಂದು ಆಗ್ರಹಿಸಿದರು.

ರಾಜ್ಯದಿಂದಲೇ 10ಕೆ.ಜಿ. ಅಕ್ಕಿ ಕೊಡಿ : ಕಾಂಗ್ರೆಸ್ ಪಕ್ಷ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಿಸಿದೆ. ಆದರೆ ಈಗಾಗಲೇ ಕೇಂದ್ರ ಸರಕಾರದಿಂದ 5 ಕೆಜಿ ಅಕ್ಕಿ ಪಡಿತರ ಮೂಲಕ ವಿತರಣೆಯಾಗುತ್ತಿದೆ. ಕಾಂಗ್ರೆಸ್ ಈಗ ಕೇವಲ 5 ಕೆಜಿ ಹೆಚ್ಚುವರಿ ಅಕ್ಕಿ ನೀಡಿ ಜನರಿಗೆ ಮಂಕುಬೂದಿ ಎರಚಲು ಸಿದ್ಧತೆ ಮಾಡಿಕೊಂಡಿದೆ. ಕಾಂಗ್ರೆಸ್ ಘೋಷಿಸಿದಂತೆ ಕೇಂದ್ರದ ಪಾಲಿನ 5 ಕೆಜಿ ಅಕ್ಕಿ ಹೊರತುಪಡಿಸಿ ರಾಜ್ಯ ಸರಕಾರದಿಂದಲೇ ತಲಾ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಿ ಎಂದು ಆಗ್ರಹಿಸಿದರು.

ಪಠ್ಯ ಪರಿಷ್ಕರಣೆ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ರಾಜ್ಯ ಸರಕಾರ ಪಠ್ಯ ಪರಿಷ್ಕರಣೆ ಮೂಲಕ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮುಂದಾಗಿದೆ. ಪಠ್ಯದಲ್ಲಿ ಹೆಡಗೇವಾರ್ ಅವರ ಉಲ್ಲೇಖ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರು ಬರೆದಿರುವ ಪಠ್ಯದ ಭಾಗವನ್ನು ತೆಗೆದು ಹಾಕುವ ಬಗ್ಗೆ ಈಗಾಗಲೇ ಹೇಳಿಕೆಗಳು ಹೊರಬಿದ್ದಿವೆ. ಆರೆಸ್ಸೆಸ್/ ಬಜರಂಗದಳ ಬ್ಯಾನ್ ಬಗ್ಗೆಯೂ ಕಳೆದ ಕೆಲವು ದಿನಗಳಿಂದ ಪಕ್ಷದ ಪ್ರಮುಖರಿಂದ ಹೇಳಿಕೆಗಳು ಕೇಳಿ ಬರುತ್ತಿವೆ. ಬಿಜೆಪಿ ಆಡಳಿತಾವಧಿಯಲ್ಲಿ ಶಾಂತಿಯಿಂದ ಇದ್ದ ರಾಜ್ಯದಲ್ಲಿ ಜನರ ಭಾವನೆಗಳನ್ನು ಕೆರಳಿಸುವ ಮೂಲಕ ಮತ್ತೆ ಅರಾಜಕತೆ ಸೃಷ್ಟಿಗೆ ಕಾಂಗ್ರೆಸ್ ಮುಂದಾಗಿದೆ. ಇನ್ನು ಪೊಲೀಸರಿಗೆ ಕೇಸರೀಕರಣದ ಪಟ್ಟ ಕಟ್ಟಿ ಅವರಿಗೂ ಕಿರುಕುಳ ನೀಡುವ ಕೆಲಸಕ್ಕೆ ಸರಕಾರ ಮುಂದಾಗಿರುವುದು ದುರ್ದೈವ ಎಂದು ವೇದವ್ಯಾಸ್ ಕಾಮತ್ ತಿಳಿಸಿದರು.

ಅಭಿವೃದ್ಧಿ ವಿರೋಧಿ ನಡೆ ಬಿಜೆಪಿ ಸರಕಾರದ ಅವಧಿಯಲ್ಲಿ ಕಾಮಗಾರಿಗಳು ಅನುಮೋದನೆಗೊಂಡು ಅದಕ್ಕೆ ಬಿಡುಗಡೆಯಾದ ಸುಮಾರು 20 ಸಾವಿರ ಕೋಟಿ ರೂ. ಮೊತ್ತದ ಅನುದಾನವನ್ನು ತಡೆಹಿಡಿಯುವ ಮೂಲಕ ರಾಜಕೀಯ ಹಗೆತನ ಸಾಧಿಸಿ ಅಭಿವೃದ್ಧಿ ವಿರೋಧಿ ನಡೆಯನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಅನುದಾನವನ್ನು ತಡೆಹಿಡಿಯುವ ಕೆಲಸವನ್ನು ಸರಕಾರ ಮಾಡಬಾರದು. ಬಿಜೆಪಿ ಸರಕಾರ ಇಂತಹಾ ಕೀಳು ಮಟ್ಟದ, ಅಭಿವೃದ್ಧಿ ವಿರೋಧಿಯ ರಾಜಕೀಯ ಹಗೆತನವನ್ನು ಎಂದೂ ಮಾಡಿಲ್ಲ. ಹಿಂದಿನ ಸರಕಾರದ ಕಾಮಗಾರಿಗಳನ್ನು ಮುಂದುವರಿಸುವ ಕೆಲಸವನ್ನು ನಮ್ಮ ಅವಧಿಯಲ್ಲಿ ಮಾಡಲಾಗಿತ್ತು. ಕಾಮಗಾರಿಗಳನ್ನು ತಡೆಹಿಡಿಯುವ ಮೂಲಕ ಅನಗತ್ಯ ಗೊಂದಲ ಮೂಡಿಸುವ ಕೆಲಸವನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿದರು.

ಪ್ರಕೃತಿ ವಿಕೋಪ ನಿರ್ವಹಣೆ ಮರೆತ ಸರಕಾರ : ಕಾಂಗ್ರೆಸ್ ಆಡಳಿತಕ್ಕೆ ಬಂದು ವಾರ ಆಗುವಷ್ಟರಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ಮುಂಗಾರು ಪೂರ್ವ ಮಳೆಯಿಂದಾಗಿ ಅಲ್ಲಲ್ಲಿ ಪ್ರಕೃತಿ ವಿಕೋಪ ಸಂಭವಿಸುತ್ತಿರುವ ಸಂದರ್ಭದಲ್ಲಿ ಪವರ್ ಶೇರಿಂಗ್ ಜಗಳ ಮೂಲಕ ರಾಜ್ಯದ ಜನರನ್ನು ಮೂರ್ಖರನ್ನಾಗಿಸುವ ಕೆಲಸ ಆಗುತ್ತಿದೆ. ಪ್ರಕೃತಿ ವಿಕೋಪದಿಂದ ಜನರು ತೊಂದರೆ ಅನುಭವಿಸುತ್ತಿದ್ದರೂ ಈ ಬಗ್ಗೆ ಸಕಾಲಿಕ ಕ್ರಮ ಕೈಗೊಳ್ಳದೆ ದಿಲ್ಲಿಗೆ ತೆರಳಿ ಮಂತ್ರಿ ಮಂಡಲದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಮಂತ್ರಿ ಮಂಡಲ ರಚಿಸುವ ಬಗ್ಗೆ ಇರುವ ಉತ್ಸಾಹ ಆಡಳಿತ ನಡೆಸುವಲ್ಲಿ ಇಲ್ಲ ಎಂಬುದನ್ನು ಕಾಂಗ್ರೆಸ್ ಸರಕಾರ ಆರಂಭದಲ್ಲೇ ತೋರಿಸಿಕೊಟ್ಟಿದೆ ಎಂದು ಲೇವಡಿ ಮಾಡಿದರು.

ಸಂಪುಟ ಕಸರತ್ತು ನಿಲ್ಲಿಸಿ, ಜನರ ಕಣ್ಣೊರೆಸುವ ಕೆಲಸ ಮಾಡಿ : 2019ರಲ್ಲಿ ಬಿಎಸ್‍ವೈ ಅಧಿಕಾರ ವಹಿಸಿಕೊಂಡ ಸಂದರ್ಭ ರಾಜ್ಯದಲ್ಲಿ ದೊಡ್ಡ ಮಟ್ಟಿನ ಪ್ರಾಕೃತಿಕ ವಿಕೋಪ ಸಂಭವಿಸಿದ್ದರೂ ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ತಲೆಕೆಡಿಸಿಕೊಳ್ಳದೆ ಒಬ್ಬರೇ ಇಡೀ ರಾಜ್ಯ ಸುತ್ತಿ ಜನರ ಕಣ್ಣೊರೆಸುವ ಕೆಲಸ ಮಾಡಿದ್ದರು. ಆದರೆ ಇದೀಗ ಕಾಂಗ್ರೆಸ್ ಸರಕಾರ ಸಂಪುಟ ವಿಸ್ತರಣೆ ಮಾಡಿದ್ದರೂ ಖಾತೆ ಹಂಚಿಕೆ ಬಗೆಗಿನ ಗೊಂದಲ ಬಗೆಹರಿದಿಲ್ಲ. ರಾಜ್ಯದಲ್ಲಿ ಜನರು ಪಡುತ್ತಿರುವ ಕಷ್ಟವನ್ನು ಗಣನೆಗೆ ತೆಗೆದುಕೊಳ್ಳದೆ ಕಾಂಗ್ರೆಸ್ ಪಕ್ಷ ಕೇವಲ ಅಧಿಕಾರದ ಆಸೆಗೆ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದೆ.

ರಾಜಕೀಯ ಹಗೆತನದಿಂದ ಕೇಸು : ರಾಜಕೀಯ ದ್ವೇಷದ ಭಾಗವಾಗಿ ಕೆಲವು ಸಮಯಗಳ ಹಿಂದಿನ ಘಟನೆಗಳನ್ನು ಕೆದಕಿ ತೆಗೆಯುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಅದರ ಭಾಗವಾಗಿ ಡಾ.ಅಶ್ವತ್ಥ ನಾರಾಯಣ ಅವರ ಮೇಲೆ ಕೇಸು ಹಾಕುವ ಕೆಲಸ ನಡೆದಿದೆ. ಹರೀಶ್ ಪೂಂಜಾ ಅವರ ಮೇಲೂ ಹಗೆತನ ಸಾಧಿಸುವ ಕೆಲಸ ಆಗಿದೆ. ಮುಂದೆ ಇನ್ನಷ್ಟು ಇಂತಹಾ ನಡೆಗೆ ಕಾಂಗ್ರೆಸ್ ಮುಂದಾಗಿದೆ. ಈ ಮೂಲಕ ಬಿಜೆಪಿ ಬಲವನ್ನು ಕುಂದಿಸುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದ್ದೆ. ಕಾಂಗ್ರೆಸ್‍ನ ಈ ರಾಜಕೀಯ ನಾಟಕಕ್ಕೆ ಬಿಜೆಪಿ ತಕ್ಕ ಉತ್ತರ ನೀಡಲಿದೆ ಎಂದು ಕಾಮತ್ ತಿರುಗೇಟು ನೀಡಿದರು.

ದ.ಕ., ಉಡುಪಿ ಜನರನ್ನು ವಂಚಿಸಬೇಡಿ : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮಂದಿಗೆ ಗ್ಯಾರಂಟಿ ಯೋಜನೆ ಕೊಡಬಾರದು ಎಂದು ಜಾಲತಾಣಗಳಲ್ಲಿ ಬರೆಯುವ ಕಾಂಗ್ರೆಸ್ ಪಕ್ಷದವರಿಗೆ ನಾಚಿಕೆ ಆಗಬೇಕು. ದಕ ಜಿಲ್ಲೆಯ 8 ಕ್ಷೇತ್ರದಲ್ಲಿ 5 ಲಕ್ಷಕ್ಕೂ ಅಧಿಕ ಮತ ಪಡೆದ ಕಾಂಗ್ರೆಸ್ ಪಕ್ಷ ಈಗ ಹೀಗೆ ಹೇಳುವುದು ಸರಿಯಲ್ಲ. ಕೇವಲ ಗೆಲ್ಲಿಸಿದ ಕ್ಷೇತ್ರಗಳಿಗೆ ಮಾತ್ರ ಗ್ಯಾರಂಟಿ ಕೊಡುವ ಕಾಂಗ್ರೆಸ್ ಮನಸ್ಥಿತಿ ಸರಿಯಲ್ಲ.

ಖಾಸಗಿ ಸಾರಿಗೆ ಸ್ಥಗಿತದ ಹುನ್ನಾರ : ನಗರದಲ್ಲಿ ಖಾಸಗಿ ಸಿಟಿ ಬಸ್ ಸ್ಥಗಿತಗೊಳಿಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಸುಮಾರು 500ಕ್ಕೂ ಅಕ ಬಸ್‍ಗಳು ಈ ಭಾಗದಲ್ಲಿ ಸಾರ್ವಜನಿಕರಿಗೆ ಸೇವೆ ನೀಡುತ್ತಿವೆ. ಸಾವಿರಾರು ಕುಟುಂಬಗಳು ಈ ಸೇವೆಯಲ್ಲಿ ಜೀವನ ನಿರ್ವಹಿಸುತ್ತಿವೆ. ಇವರ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಸರಕಾರ ಮಾಡಬಾರದು. ಖಾಸಗಿ ಬಸ್‍ಗಳನ್ನು ಸ್ಥಗಿತ ಮಾಡಿದ್ದೇ ಆದರೆ ಅಷ್ಟೂ ಬಸ್‍ಗಳನ್ನು ಸರಕಾರ ಎಲ್ಲಿಂದ ತಂದು ಓಡಿಸಬೇಕು ? ಈ ಬಗ್ಗೆ ಅನಗತ್ಯ ಗೊಂದಲ ಉಂಟು ಮಾಡಬಾರದು.

ದೈವ, ದೇವತೆಗಳಿಗೆ ಅವಮಾನ : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಸತ್ಯಸಾರಮಣಿ ದೈವದ ಮೇಲೆ ಪ್ರಮಾಣ ಮಾಡಿ ಪ್ರತಿಜ್ಞೆ ಸ್ವೀಕರಿಸಿರುವುದನ್ನು ವಿರೋಧಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ತುಳುನಾಡಿನ ದೈವ, ದೇವರಿಗೆ ಅಪಮಾನ ಮಾಡಿದ್ದಾರೆ. ಆರಂಭದಲ್ಲಿ ಇದೇ ರೀತಿಯಲ್ಲಿ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾಗ ಸಿದ್ದರಾಮಯ್ಯ ಅವರು ಯಾಕೆ ಮಾತನಾಡಲಿಲ್ಲ ?, ಕಾಂಗ್ರೇಸ್ಸಿನ ಕೆಲವು ಶಾಸಕರು ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದಾಗ ಸಿದ್ದರಾಮಯ್ಯ ಎಲ್ಲಿದ್ದರು? ಎಂದು ಶಾಸಕ ಕಾಮತ್ ಪ್ರಶ್ನಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು