ಬೆಳ್ತಂಗಡಿ: ಮಹಿಳಾ ಸಬಲೀಕರಣ, ದುಶ್ಚಟಗಳ ನಿವಾರಣೆ, ಅಂಗಾಂಗ ದಾನ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಯೆ ಅರಿವು ಮತ್ತು ಜನಜಾಗೃತಿ ಮೂಡಿಸುವುದಕ್ಕಾಗಿ ಮಹಾರಾಷ್ಟ್ರದಿಂದ ಪುಣೆಯಿಂದ ಕಾರ್ ರ್ಯಾಲಿಯಲ್ಲಿ ಬಂದ ೨೫ ರೋಟರಿ ಕ್ಲಬ್ಗಳ ೮೮ ಮಹಿಳಾ ಸದಸ್ಯರನ್ನು ಉಜಿರೆಯಲ್ಲಿ ಕಾಶಿಬೆಟ್ಟು ಎಂಬಲ್ಲಿರುವ ರೋಟರಿ ಸಭಾ ಭವನದಲ್ಲಿ ಬುಧವಾರ ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ಮನೋರಮಾ ಭಟ್ ನೇತೃತ್ವದಲ್ಲಿ ರೋಟರಿ ಕ್ಲಬ್ನ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಲಾಯಿತು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ಮನೋರಮಾ ಭಟ್ ಪುಣೆಯಿಂದ ೨೫ ರೋಟರಿ ಕ್ಲಬ್ಗಳ ೮೮ ಮಹಿಳಾ ಸದಸ್ಯರು ಜನಜಾಗೃತಿ ಮೂಡಿಸಲು ೨೧೦೦ ಕ.ಮಿ. ದೂರ ಕಾರ್ ರ್ಯಾಲಿ ಆಯೋಜಿಸಿರುವುದು ಶ್ಲಾಘನೀಯವಾಗಿದೆ. ನವಂಬರ್ ೨೮ ರಂದು ಪೂನಾದಿಂದ ಹೊರಟ ಕಾರ್ ರ್ಯಾಲಿ ಬಿಜಾಪುರ, ಹಂಪಿ, ಚಿತ್ರದುರ್ಗ, ಬೆಂಗಳೂರು, ಚಿಕ್ಕಮಗಳೂರು, ಮಂಗಳೂರು, ಮಣಿಪಾಲ, ಗೋವಾ, ಬೆಳಗಾವಿ ಮೂಲಕ ಡಿಸೆಂಬರ್ ೨ ರಂದು ಇಂದು ಶುಕ್ರವಾರ ಮರಳಿ ಪುಣೆ ತಲುಪಲಿದ್ದಾರೆ ಎಂದು ತಿಳಿಸಿದರು.
ಪುಣೆಯ ರೊಟೇರಿಯನ್ ಹೇಮಾ ಪರಮಾರ್ ಕಾರ್ ರ್ಯಾಲಿಯ ನೇತೃತ್ವ ವಹಿಸಿದ್ದು, ಪ್ರಕೃತಿಯ ಸೊಗಡನ್ನು ಸವಿಯುವ ಜೊತೆಗೆ ಅನೇಕ ಜನರೊಂದಿಗೆ ಮುಕ್ತವಾಗಿ ಬೆರೆತು ಪ್ರವಾಸಿ ತಾಣಗಳನ್ನೂ ವೀಕ್ಷಿಸುವ ಸದವಕಾಶ ದೊರಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ ರ್ಯಾಲಿಯಿಂದ ತಮ್ಮಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿದೆ ಎಂದು ಅವರು ಹೇಳಿದರು.
ರೋಟರಿ ಜಿಲ್ಲಾ ರಾಜ್ಯಪಾಲ ಎನ್. ಪ್ರಕಾಶ್ ಕಾರಂತ ಮತ್ತು ಅನಿಲ್ ಪರಮಾರ್, ಜಿಲ್ಲಾ ರಾಜ್ಯಪಾಲರುಗಳಾದ ಸುಭೋದ್ ಜೋಷಿ, ದೀಪಕ್ ಪುರೋಹಿತ್ ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು. ಈ ಸಂದರ್ಭ ಅವರು ಜಾಗೃತಿಯ ಫಲಕಗಳನ್ನು ಬೆಳ್ತಂಗಡಿ ರೋಟರಿ ಕ್ಲಬ್ಗೆ ಹಸ್ತಾಂತರಿಸಿದರು.