ಮಂಡ್ಯ: ತಾಲ್ಲೂಕಿನ ಮಂಗಲ ಗ್ರಾಮದ ನಿವೃತ್ತ ಐಎಎಸ್ ಅಧಿಕಾರಿ, ಕರ್ನಾಟಕ ಜಾನಪದ ಪರಿಷತ್ತಿನ ನಿಕಟಪೂರ್ವ ರಾಜ್ಯಾಧ್ಯಕ್ಷ, ಮಂಡ್ಯ ಕೃಷಿಕ್ ಫೌಂಡೇಶನ್ ಅಧ್ಯಕ್ಷ ಹಾಗೂ ಲೇಖಕರೂ ಆದ, ಜಿಲ್ಲೆಯ ಕೆರೆಗಳ ಪುನಶ್ಚೇತನದ ರೂವಾರಿ ಟಿ. ತಿಮ್ಮೇಗೌಡ ಅವರು ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಡಿ. 4 ರಂದು ಬೆಂಗಳೂರಿನ ಕನ್ನಡ ಭವನದಲ್ಲಿ ನಡೆಯಲಿರುವ ‘ಕನ್ನಡ ನುಡಿ ಸಮ್ಮೇಳನ’ದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ವೇದಿಕೆಯ ಗೌರವ ಸಲಹೆಗಾರ ಟಿ. ಸತೀಶ್ ಜವರೇಗೌಡ ತಿಳಿಸಿದ್ದಾರೆ.
1945 ಮೇ 2 ರಂದು ಮಂಗಲ ಗ್ರಾಮದ ರೈತಾಪಿ ಕುಟುಂಬದಲ್ಲಿ ಜನಿಸಿದ ಟಿ. ತಿಮ್ಮೇಗೌಡರರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೆಲಕಾಲ ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ಕೆ.ಎ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೇಲೆ ಉಪವಿಭಾಗಾಧಿಕಾರಿಯಾಗಿ ಅತ್ಯಂತ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ ಬಳಿಕ, ಐ.ಎ.ಎಸ್.ಗೆ ಪದನ್ನೋತಿ ಹೊಂದಿ ಕೋಲಾರ, ಚಿಕ್ಕಮಗಳೂರು, ಬೆಂಗಳೂರು ನಗರದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಬಿಡಿಎ ಕಾರ್ಯದರ್ಶಿ, ಬೆಂಗಳೂರು ವಿಭಾಗದ ಆಯುಕ್ತ, ಸರ್ವೆ ಮತ್ತು ತೋಟಗಾರಿಕೆ ಇಲಾಖೆಯ ನಿರ್ದೇಶಕ, ಸಾರಿಗೆ ಇಲಾಖೆಯ ಆಯುಕ್ತ, ಕಾವೇರಿ ನೀರಾವರಿ ವಿಭಾಗದ ಮೊಟ್ಟಮೊದಲ ವ್ಯವಸ್ಥಾಪಕ ನಿರ್ದೇಶಕರಂತಹ ಬಹುದೊಡ್ಡ ಹುದ್ದೆಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ ಹೆಗ್ಗಳಿಕ ತಿಮ್ಮೇಗೌಡರದ್ದು. ಮೂರನೆಯ ಹಣಕಾಸು ಆಯೋಗದ ಸದಸ್ಯರಾಗಿ ಸಹ ಸರ್ಕಾರಕ್ಕೆ ರಚನಾತ್ಮಕ ಶಿಫಾರಸುಗಳನ್ನು ಮಾಡಿದ್ದಾರೆ.
ಸೃಜನಶೀಲ ಸಾಹಿತಿಯಾಗಿಯೂ ಹೆಸರು ಮಾಡಿರುವ ಗೌಡರು ‘ಯಾರ್ಯಾರ ನೆನೆಯಲಿ’, ‘ನೆನಪಿನ ಹಾದಿಯಲ್ಲಿ’, ‘ಅದ್ಭುತ ಜಗತ್ತು’ ಎಂಬ ಪುಸ್ತಕ ರಚಿಸಿದ್ದಾರೆ. ‘ದಿ ವಿಲೇಜ್ ವಾಯ್ಸ್’ ಎಂಬ ಕೃತಿಯನ್ನು ತಮ್ಮ ಗಾಡ್ ಮದರ್ ಡಾ. ಸ್ಕಾರ್ಲೆಟ್ ಎಫ್. ಸ್ಟೀನ್ ಜೊತೆಗೆ ಸಂಪಾದಿಸಿದ್ದಾರೆ. ‘ಜೀವನ್ಮುಖಿ’ ಪತ್ರಿಕೆಯ ಅಂಕಣಕಾರರಾಗಿ ಜನಪ್ರಿಯರಾಗಿದ್ದಾರೆ.
ಜೊತೆಗೆ ಕೃಷಿ, ನೀರಾವರಿ, ಶಿಕ್ಷಣ, ರಾಜಕೀಯ, ಆರ್ಥಿಕತೆ, ಗ್ರಾಮೀಣಾಭಿವೃದ್ಧಿ ಇತ್ಯಾದಿ ವಿಷಯಗಳ ಕುರಿತ ಇವರ ಹಲವಾರು ಲೇಖನಗಳು ನಾಡಿನ ವಿವಿಧ ಪತ್ರಿಕೆಯಲ್ಲಿ ಪ್ರಕಟವಾಗಿವೆ. ವಿವಿಧ ಟಿವಿ ವಾಹಿನಿಗಳ ನೂರಾರು ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಆಳವಾದ ವಿಷಯ ಜ್ಞಾನ ಮತ್ತು ಭಾಷಾ ಪ್ರೌಢಿಮೆ, ವಿಚಾರ ಮಂಡಿಸುವ ಕ್ರಮದಿಂದ ಗಮನಸೆಳೆದಿದ್ದಾರೆ. ಕೃಷಿಕ್ ಸರ್ವೋದಯ ಫೌಂಡೇಶನ್ನಿನ ಸಂಸ್ಥಾಪಕರಲ್ಲೊಬ್ಬರಾಗಿ ಸಾವಿರಾರು ಮಂದಿ ಗ್ರಾಮೀಣ ಮತ್ತು ನಗರ ವಿದ್ಯಾರ್ಥಿಗಳಿಗೆ ಐ.ಎ.ಎಸ್., ಕೆ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯೋಜಿತ ತರಬೇತಿ ಕೊಡಿಸುವ ಮೂಲಕ ಅವರ ಗುರಿಯ ಈಡೇರಿಕೆಗೆ ದಾರಿದೀವಿಯಾಗಿದ್ದಾರೆ. ‘ಮಂಗಲದ ಮಹಾಚೇತನ’ ಇವರಿಗೆ ಗೌರವಪೂರ್ವಕವಾಗಿ ಸಂದಾಯವಾದ ಅಭಿನಂದನ ಗ್ರಂಥವಾಗಿದೆ.