ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಆಟೋ ರಿಕ್ಷಾ ನದಿಗೆ ಉರುಳಿದ ಪರಿಣಾಮ ನೀರಿಗೆ ಬಿದ್ದ ಪ್ರಯಾಣಿಕ ಮಹಿಳೆ ಮೃತ ಪಟ್ಟ ಘಟನೆ ಮುಂಡಾಜೆ ಸಮೀಪದ ಚಿಬಿದ್ರೆ ಗ್ರಾಮದ ಕಾಪು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮೃತ ಮಹಿಳೆಯನ್ನು ಚಿಬಿದ್ರೆಯ ಕಕ್ಕಿಂಜೆ ಕತ್ತರಿಗುದ್ದೆ ನಿವಾಸಿ ಸಫಿಯಾ(57) ಎಂದು ಗುರುತಿಸಲಾಗಿದೆ.
ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡು ಕಕ್ಕಿಂಜೆ ಕಡೆ ಹೋಗುತ್ತಿದ್ದಾಗ ಅಬೂಬಕ್ಕರ್ ಸಿದ್ದೀಕ್ ಎಂಬವರು ಚಲಾಯಿಸುತ್ತಿದ್ದ ರಿಕ್ಷಾ ನಿಯಂತ್ರಣ ತಪ್ಪಿ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಬದಿಯ ಕಣಿವೆ ಮೂಲಕ ಉರುಳಿ ಮೃತ್ಯುಂಜಯ ನದಿಗೆ ಬಿದ್ದಿದೆ.ಈ ವೇಳೆ ಮಹಿಳೆ ನದಿ ನೀರಿಗೆ ಬಿದ್ದು ಮೃತ ಪಟ್ಟರು.
ರಿಕ್ಷಾ ಚಾಲಕ ಸಹಿತ ಇತರ ಪ್ರಯಾಣಿಕರಾದ ಮರಿಯಮ್ಮ(25) ಹಾಗೂ ಮಹಮ್ಮದ್ ಅಶ್ರಫ್(35 )ಗಾಯ ಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.ಪ್ರಕರಣ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ.
ಅಪಾಯಕಾರಿ ಜಾಗ
ಹೆದ್ದಾರಿಯ ಈ ವ್ಯಾಪ್ತಿಯ ಸುಮಾರು 200ಮೀ. ರಸ್ತೆ ಅಗಲ ಕಿರಿದಾಗಿದ್ದು,ಭಾರಿ ಏರು ಹಾಗೂ ಒಂದು ಬದಿ ಆಳವಾದ ನದಿಯ ಕಣಿವೆ ಹೊಂದಿದೆ.ಇದೀಗ ಇಲ್ಲಿಂದ ಕೆಳಗಿರುವ ಕಿಂಡಿ ಅಣೆಕಟ್ಟಿಗೆ ಹಲಗೆ ಇಳಿಸಲಾಗಿದ್ದು ನದಿಯಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹಗೊಂಡಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ರಿಕ್ಷಾವೊಂದು ನದಿ ಕಣಿವೆಗೆ ಉರುಳಿದಾಗ ಮರದ ಬೇರೊಂದಕ್ಕೆ ಸಿಲುಕಿದ ಕಾರಣ ನದಿಗೆ ಬೀಳುವುದು ತಪ್ಪಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು.