ಬೆಳ್ತಂಗಡಿ: ಪಾಶ್ಚಾತ್ಯ ಅನುಕರಣೆಗಳು ನಮ್ಮನ್ನು ನಮ್ಮ ಪರಂಪರೆಯಿಂದ ವಿಮುಖರನ್ನಾಗಿಸುತ್ತಿವೆ. ಮನೆಯ ಹಿರಿಯರು ಇದನ್ನು ತಡೆಗಟ್ಟಬೇಕು ಎಂದು ರಾಷ್ಟ್ರಸೇವಿಕಾ ಸಮಿತಿ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ಕುಮುದಿನಿ ಹೇಳಿದರು.
ಅವರು, ಸುಲ್ಕೇರಿ ಶ್ರೀರಾಮ ಶಾಲೆಯಲ್ಲಿ ರಾಷ್ಟ್ರಸೇವಿಕಾ ಸಮಿತಿಯ ಮಂಗಳೂರು ವಿಭಾಗದ ಪುತ್ತೂರು ಜಿಲ್ಲಾ ಪ್ರಾರಂಭಿಕ ಶಿಕ್ಷಾ ವರ್ಗದ ಸಮಾರೋಪದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಹೆಣ್ಣು ಮಕ್ಕಳಿಗೆ ಸಂಸ್ಕಾರ ನೀಡುವ, ವ್ಯಕ್ತಿತ್ವ ನಿರ್ಮಾಣದ ಕಾರ್ಯ ಸಮಿತಿಯು ಮಾಡುತ್ತಿದೆ. ಕೇಂದ್ರದಲ್ಲಿ ಸಂಘದ ಶಿಕ್ಷಣ ಪಡೆದ ಸ್ವಯಂಸೇವಕರು ದೇಶವನ್ನು ಮುನ್ನಡೆಸುತ್ತಿದ್ದಾರೆ. ಇದೊಂದು ಸಾಧನೆಯೇ ಆದರೂ ಅದರಿಂದ ಸಂತುಷ್ಟರಾಗುವ ಹಾಗಿಲ್ಲ. ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ಅಖಂಡ ಭಾರತ ಸಾಕಾರದತ್ತ ಹೆಜ್ಜೆಯಿಡಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿಯ ವಕ್ರದಂತ ತಜ್ಞೆ ಡಾ. ಆಶಾ ಪಿದಮಲೆ ಅವರು, ಇಂದು ಹೆಣ್ಣು ಮಕ್ಕಳು ಗುರಿ ಸಾಧಿಸಲು ಸಾಕಷ್ಟು ಅನುಕೂಲತೆಗಳಿವೆ. ಗುರಿ ಸಾಧಿಸುವ ಛಲ ನಮ್ಮಲ್ಲಿ ಬರಬೇಕು. ಇನ್ನೊಬ್ಬರಿಗೆ ಸಹಾಯ ಮಾಡುವಷ್ಟು ನಾವು ಶಕ್ತಿವಂತರಾಗಬೇಕು ಎಂದರು.
ಸಮಿತಿ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ಸುಗುಣ ರಾವ್ ಶಿಬಿರಾಧಿಕಾರಿಯಾಗಿದ್ದರು. ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಕಮಲಾ ಭಟ್ ಇದ್ದರು. ಜಿಲ್ಲಾ ಬೌದ್ಧಿಕ್ ಪ್ರಮುಖ್ ವೇದಾವತಿ ಸ್ವಾಗತಿಸಿದರು. ತಾಲೂಕು ಕಾರ್ಯವಾಹಿಕೆ ಮಂಗಳಾ ರತ್ನಾಕರ್ ವಂದಿಸಿದರು. ಶಿಬಿರದಲ್ಲಿ 62 ಹೆಣ್ಣು ಮಕ್ಕಳು ಭಾಗವಹಿಸಿದ್ದರು.