ಬೆಳ್ತಂಗಡಿ: ಇತ್ತೀಚೆಗೆ ಮೃತ್ಯುಂಜಯ ನದಿ ತುಂಬಿ ಹರಿದ ಪರಿಣಾಮ ಮುಂಡಾಜೆಯ ಕಡಂಬಳ್ಳಿ ಕಿಂಡಿ ಅಣೆಕಟ್ಟಿನಲ್ಲಿ ವಿಪರೀತ ಮರಮಟ್ಟು ಹಾಗೂ ತ್ಯಾಜ್ಯ ಸಂಗ್ರಹ ಗೊಂಡಿದ್ದು ಸಮೀಪದ ಮುಂಡ್ರುಪಾಡಿ ಪ್ರದೇಶದ ಹಲವು ಎಕರೆ ವಿಸ್ತೀರ್ಣದ ಅಡಕೆ ತೋಟಗಳಿಗೂ ನೀರು ನುಗ್ಗಿ ತೋಟಗಳು ತ್ಯಾಜ್ಯಮಯವಾಗಿವೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ರಾಕೇಶ್ ಹಾಗೂ ತಂಡದವರು ಸೋಮವಾರ ಪರಿಶೀಲನೆ ನಡೆಸಿದರು.
ಈ ವರ್ಷದ ಜುಲೈ ತಿಂಗಳಿನಿಂದ ಈ ಕಿಂಡಿ ಅಣೆಕಟ್ಟಿನಲ್ಲಿ ವಿಪರೀತ ಮರಮಟ್ಟು ತುಂಬಿದ್ದು ಅದನ್ನು ಆಗಸ್ಟ್ ಮಧ್ಯ ಭಾಗದಲ್ಲಿ ಕಿಂಡಿ ಅಣೆಕಟ್ಟು ನಿರ್ವಹಣೆ ತಂಡದ ಸದಸ್ಯರ ನೇತೃತ್ವದಲ್ಲಿ ತೆರವುಗೊಳಿಸಲಾಗಿತ್ತು. ತೆರವುಗೊಳಿಸಿದ ಎರಡೇ ದಿನದಲ್ಲಿ ಮತ್ತೆ ನದಿಗಳ ನೀರು ಹೆಚ್ಚಿ ಮರಮಟ್ಟು ಹಾಗೂ ತ್ಯಾಜ್ಯ ಸಿಲುಕಿಕೊಂಡಿತ್ತು. ಸೆಪ್ಟೆಂಬರ್ ತಿಂಗಳ ಮೊದಲ ಹಾಗೂ ಎರಡನೇ ವಾರದಲ್ಲಿ ಎರಡು,ಮೂರು ಬಾರಿ ನದಿಯಲ್ಲಿ ಹೆಚ್ಚಿನ ನೀರಿನ ಏರಿಕೆ ಕಂಡು ಬಂದು ಮತ್ತಷ್ಟು ಮರಮಟ್ಟು ಸಿಲುಕಿ ನದಿ ನೀರು ಹರಿಯಲು ಅಡ್ಡಿ ಉಂಟಾಗಿ ಮುಂಡ್ರುಪಾಡಿಯ ಕೃಷಿ ತೋಟಗಳು ಸಂಪೂರ್ಣ ಜಲಾವೃತವಾಗಿ ಮರಮಟ್ಟು ಹಾಗೂ ತ್ಯಾಜ್ಯ ಕೂಡ ತೋಟಗಳಿಗೆ ಬಂದು ಬಿದ್ದಿದೆ.
ಸ್ಥಳೀಯರಾದ ವಾಸುದೇವ ಗೋಖಲೆ, ಅವಿನಾಶ ಗೋಖಲೆ, ಶ್ರೀನಿವಾಸ ಗೋಖಲೆ, ಪರೀಕ್ಷಿತ್,ಶಶಾಂಕ ಮರಾಠೆ ಮತ್ತಿತರರು ಉಪಸ್ಥಿತರಿದ್ದು ಸಮಸ್ಯೆಗಳ ಕುರಿತು ವಿವರ ನೀಡಿದರು.
ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದವರು ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿರುವ ಮರಮಟ್ಟುಗಳನ್ನು ಇಂದಿನಿಂದ ಸ್ಥಳೀಯರ ಹಾಗೂ ಕಿಂಡಿ ಅಣೆಕಟ್ಟು ನಿರ್ವಹಣಾ ಸಮಿತಿ ಸದಸ್ಯರ ಸಹಕಾರದಲ್ಲಿ ತೆರವುಗೊಳಿಸುವ ಕುರಿತು ಇಂಜಿನಿಯರ್ ರಾಕೇಶ್ ತಿಳಿಸಿದ್ದಾರೆ. ಕಿಂಡಿ ಅಣೆಕಟ್ಟು ಇರುವ ಪ್ರದೇಶಕ್ಕೆ ವಾಹನ, ಯಂತ್ರೋಪಕರಣಗಳನ್ನು ಕೊಂಡೊಯ್ಯಲು ರಸ್ತೆ ವ್ಯವಸ್ಥೆ ಇಲ್ಲದ ಕಾರಣ ತೆರವು ಕಾರ್ಯವನ್ನು ಮಾನವ ಶಕ್ತಿ ಬಳಸಿ ನಡೆಸಬೇಕಾದ ಅನಿವಾರ್ಯತೆ ಇದೆ.