ಬೆಳ್ತಂಗಡಿ: ರಾಜ್ಯಾದ್ಯಂತ ಗೃಹಜ್ಯೋತಿ ಯೋಜನೆಯಿಂದ ಜನ ಫುಲ್ ಖುಷ್ ಆಗಿದ್ದಾರೆ. ಆದರೆ ಕುತ್ಲೂರು ಭಾಗಕ್ಕೆ ವಿದ್ಯುತ್ ಸೌಕರ್ಯವಿಲ್ಲದೆ ದಟ್ಟ ಕಾನನದಲ್ಲಿ ಮಲೆಕುಡಿಯರು ಕಗ್ಗತ್ತಲಿನಲ್ಲಿ ಬದುಕುವಂತಾಗಿದೆ. ಹೌದು ದೇಶಕ್ಕೆ ಸ್ವಾತಂತ್ರ್ಯ ದೊರೆತು ಹಲವು ದಶಕಗಳೇ ಕಳೆದರೂ ಬೆಳ್ತಂಗಡಿ ತಾಲೂಕು ಕುತ್ಲೂರಿಗೆ ವಿದ್ಯುತ್ ಸಂಪರ್ಕದ ವ್ಯವಸ್ಥೆ ದೊರೆತಿಲ್ಲ.
ಕುತ್ಲೂರಿನಲ್ಲಿ 32 ಮನೆಗಳಿದ್ದು, ಇದುವರೆಗೆ ಈ ಪ್ರದೇಶಕ್ಕೆ ರಸ್ತೆ, ವಿದ್ಯುತ್ ಸೇರಿದಂತೆ ಯಾವುದೇ ಮೂಲಸೌಕರ್ಯಗಳು ಇಲ್ಲ. ದೇಶದ ಜನರೂ 5ಜಿ, 6ಜಿ ಯುಗದಲ್ಲಿದ್ದರೂ ಕೂಡ ಇಲ್ಲಿನ ನಿವಾಸಿಗಳು ಕನಿಷ್ಠ ಮೂಲಸೌಕರ್ಯಗಳೂ ಇಲ್ಲದಂತೆ ಬದುಕುತ್ತಿರುವುದು ವ್ಯವಸ್ಥೆಯ ದೋಷಕ್ಕೆ ಕೈಗನ್ನಡಿಯಂತಿದೆ. ಕುತ್ಲೂರು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಕಾರಣ ವಿದ್ಯುತ್ ಮಾರ್ಗ ರಚನೆಗೆ ಅರಣ್ಯ ಇಲಾಖೆ ತಡೆಯೊಡ್ಡುತ್ತದೆ. ಈ ನಿಟ್ಟಿನಲ್ಲಿ ಶಾಸಕರಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಿಸಿರುವ ಜನರು: ಈ ಜಾಗ ಮೀಸಲು ಅರಣ್ಯವಾಗಿರುವ ಕಾರಣ ರಸ್ತೆ, ವಿದ್ಯುತ್ ಸಹಿತ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಜನರು ಮುಖ್ಯಪೇಟೆ ತಲುಪಲು ದಟ್ಟ ಕಾಡಿನ ನಡುವೆ 9 ಕಿಲೋಮೀಟರ್ ನಡೆಯುವುದು ಅನಿವಾರ್ಯವಾಗಿದೆ. ಈ ಪ್ರದೇಶದಲ್ಲಿ ಜೀಪ್, ಕೆಲ ರಿಕ್ಷಾಗಳಷ್ಟೆ ಸಾಗಲು ಸಾಧ್ಯವಿದ್ದು, ಜೀಪ್ಗೆ ದುಬಾರಿ ಬಾಡಿಗೆ ನೀಡುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ದೂರದೂರಿನ ಹಾಸ್ಟೆಲ್ ನಲ್ಲಿ ಉಳಿದು ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾರೆ.
ಅಂಗನವಾಡಿಗೂ ಕರೆಂಟಿಲ್ಲ: ಕುತ್ಲೂರಿನಲ್ಲಿ ಅಂಗನವಾಡಿಯೇನೋ ಇದೆ. ಸುಸಜ್ಜಿತ ಕಟ್ಟಡವೂ ನಿರ್ಮಾಣವಾಗಿದೆ. ಆದರೆ ಇಲ್ಲಿಗೂ ಕೂಡ ವಿದ್ಯುತ್ ಸಂಪರ್ಕವಿಲ್ಲ.
ಪ್ರಕೃತಿ ಶಕ್ತಿಯಿಂದಲೇ ವಿದ್ಯುತ್: ಇಲ್ಲಿನ ಕೆಲಜನರು ಶ್ರಮವಹಿಸಿ ಸೋಲಾರ್ ಸೇರಿದಂತೆ ಕೆಲ ನೈಸರ್ಗಿಕ ಶಕ್ತಿ ಮೂಲಗಳ ವಿದ್ಯುತ್ ಸ್ಥಾವರ ಮಾಡಿಕೊಂಡಿದ್ದಾರೆ. ಅಲ್ಲದೆ ಕಿರುಜಲವಿದ್ಯುತ್ ಘಟಕಗಳನ್ನು ಕೂಡ ಸ್ಥಾಪಿಸಿಕೊಂಡಿದ್ದಾರೆ. ಆದರೆ ಕಿರುಜಲವಿದ್ಯುತ್ ಘಟಕಗಳು ಕೇವಲ ಮಳೆಗಾಲದಲ್ಲಿ ಮಾತ್ರ (ನೀರಿನ ಹರಿವು ಹೆಚ್ಚಿರುವ ವೇಳೆ ಮಾತ್ರ) ಕಾರ್ಯನಿರ್ವಹಿಸುತ್ತವೆ ಎಂಬುದು ಮತ್ತೊಂದು ಸಮಸ್ಯೆಯಾಗಿದೆ.