ಬೆಳ್ತಂಗಡಿ: ಕಣಿಯೂರು ಗ್ರಾಮದ ನಾರಾಯಣ ರಾವ್ ಕೊಲ್ಲಾಜೆ ಹಾಗೂ ಇತರರ ಕುಮ್ಕಿ ಜಮೀನಿನಲ್ಲಿ ತಹಶೀಲ್ದಾರರು ನಡೆಸಿದ ಅಳತೆಯ ಹಾಗೂ ಮೇಜಣಿಯ ಯಥಾವತ್ ವರದಿಯನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೂತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಅವರು ಅಧಿಕಾರಿಗಳ ನೆರವಿನೊಂದಿಗೆ ರೈತರ ಕುಮ್ಕಿ ಜಮೀನನ್ನು ಅಕ್ರಮವಾಗಿ ರೈತೇತರರಿಗೆ ಹಂಚಿಕೆ ಮಾಡಿದೆ ಈ ಬಗ್ಗೆ ತಹಶೀಲ್ದಾರರು ನಢಸಿರುವ ಮೇಜಣಿಯ ಯಥವತ್ ಪ್ರತಿಯನ್ನು ಕೇಳಿದರೆ ಅದನ್ನು ನೀಡಲು ತಾಲೂಕು ಆಡಳಿತ ಮುಂದಾಗುತ್ತಿಲ್ಲ ತಕ್ಷಣವೆ ಈ ಬಗ್ಗೆ ಮಾಹಿತಿ ನೀಡಬೇಕು ತಪ್ಪು ವರದಿಗಳನ್ನು ನೀಡಿ ಇನ್ನಷ್ಟು ಅಕ್ರಮಗಳಿಗೆ ಕಾರಣವಾಗುವ ಅವಕಾಶವಿದೆ ಎಂದರು.
ಕೃಷಿಕರ ಕುಮ್ಕಿ ಜಮೀನನ್ನು ಯಾವುದೇ ಕಾರಣಕ್ಕೂ ಇತರರಿಗೆ ಹಂಚಲು ಅವಕಾಶ ನೀಡುವುದಿಲ್ಲ ಈಬಗ್ಗೆ ಮಾಡಿರುವ ಆದೇಶಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರುಗಳಾದ ಓಸ್ವಾಲ್ಡ್ ಫೆರ್ನಾಂಡಿಸ್, ಆದಿತ್ಯ ನಾರಾಯಣ್, ಸುರೇಂದ್ರ, ದಲಿತ ಮುಖಂಡ ಶೇಖರ ಲಾಯಿಲ ಹಾಗೂ ಇತರರು ಇದ್ದರು.