ಬೆಳ್ತಂಗಡಿ: ತಾಲೂಕಿನ ನೆರಿಯದಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಾಲ್ಮೀಕಿ ಆಶ್ರಮ ಶಾಲೆಯ ವಸತಿ ನಿಲಯಕ್ಕೆ ಕಲ್ಲುತೂರಾಟ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ರಾತ್ರಿ 10:15ರ ಸುಮಾರಿಗೆ ಘಟನೆ ನಡೆದಿದ್ದು ಈ ಸಮಯ ವಸತಿ ನಿಲಯದಲ್ಲಿದ್ದ ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿ ಹೊರಗೆ ಬರುತ್ತಿದ್ದಂತೆ ಕಿಡಿಗೇಡಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಈ ವಸತಿ ನಿಲಯದಲ್ಲಿ ಪ್ರಾಥಮಿಕ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ 55 ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ವಸತಿ ನಿಲಯದ ಸಮೀಪದಲ್ಲಿರುವ ರಸ್ತೆಯ ಕಡೆಯಿಂದ ಕಲ್ಲು ತೂರಾಟ ನಡೆಸಿದ್ದು ಯಾವುದೇ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ಧರ್ಮಸ್ಥಳ ಠಾಣೆಗೆ ಮಾಹಿತಿ ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಾಚ್ ಮ್ಯಾನ್ ಕೊರತೆ
ಸರಕಾರಿ ವಸತಿ ನಿಲಯಗಳಲ್ಲಿ ವಾರ್ಡನ್,ವಾಚ್ ಮ್ಯಾನ್ ಸೇರಿದಂತೆ ಅನೇಕ ಹುದ್ದೆಗಳು ಖಾಲಿ ಬಿದ್ದಿವೆ. ಇದರಿಂದ ಹೆಚ್ಚಿನ ಹಾಸ್ಟೆಲ್ ಗಳಲ್ಲಿ ಅಡುಗೆ ಸಿಬ್ಬಂದಿ ತಮ್ಮ ಕೆಲಸದ ಜತೆ ವಾರ್ಡನ್ ನಿಂದ ವಾಚ್ ಮ್ಯಾನ್ ತನಕದ ಕರ್ತವ್ಯಗಳನ್ನು ಮಾಡಬೇಕಾದ ಅನಿವಾರ್ಯತೆ ಇದೆ. ನೆರಿಯದ ಈ ವಸತಿ ನಿಲಯದಲ್ಲು ವಾಚ್ ಮ್ಯಾನ್ ಇರುವುದಿಲ್ಲ.