ಕಾರವಾರ: ಡಿಸೆಂಬರ್ ತಿಂಗಳಿನಲ್ಲಿ ಕರಾವಳಿ ಉತ್ಸವ ಆಚರಣೆಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ನಗರ ಪೊಲೀಸ್ ಪರೇಡ್ ಮೈದಾನದಲ್ಲಿ ರಾಜ್ಯೋತ್ಸವ ಆಚರಣೆ ಬಳಿಕ ಮಾತನಾಡಿದ ಅವರು, ಕಾರವಾರದಲ್ಲಿ ಕರಾವಳಿ ಉತ್ಸವ ಆಚರಣೆಗೆ ದಿನಾಂಕ ನಿಗದಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ಸಾರ್ವಜನಿಕರ ಒತ್ತಾಯದ ಮೆರೆಗೆ ಕರಾವಳಿ ಉತ್ಸವವನ್ನು ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಬಹುತೇಕ ಡಿಸೆಂಬರ್ನಲ್ಲಿ ಉತ್ಸವ ಸಂಘಟಿಸುವ ಬಗ್ಗೆ ಚಿಂತನೆ ನಡೆದಿದೆ. ಈ ಬಾರಿ ಕರಾವಳಿ ಉತ್ಸವ ನಡೆಸುವುದು ಶತಸಿದ್ಧ ಎಂದರು.
ಹೆಂಜಾ ನಾಯ್ಕ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಸೇನಾ ಪೂರ್ವ ತರಬೇತಿ ಶಾಲೆಯನ್ನು ನ ೨೧ ಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಉದ್ಘಾಟಿಸಲಿದ್ದಾರೆ.
ಜಿಲ್ಲೆಯಲ್ಲಿ ೪ ತಿಂಗಳಿಗೆ ಒಮ್ಮೆಯಂತೆ ವರ್ಷಕ್ಕೆ ೩ ಬಾರಿ ನಡೆಯುವ ಸೇನಾ ಪೂರ್ವ ತರಬೇತಿಗೆ ಈಗಾಗಲೇ ೧೨೫ ಅಭ್ಯರ್ಥಿಗಳು ತರಬೇತಿಗೆ ಆಯ್ಕೆಯಾಗಿದ್ದಾರೆ. ಈ ತರಬೇತಿಯು ಅಗ್ನಿಪತ ಯೋಜನೆಗೆ ಪೂರಕವಾಗಲಿದೆ.
ತರಬೇತಿ ಶಾಲೆಗೆ ಸ್ವಂತ ಕಟ್ಟಡ ಇಲ್ಲ, ಹೀಗಾಗಿ ಇಲ್ಲಿನ ಸರಕಾರಿ ಎಂಜಿನಿಯರಿಂಗ್ ಕಾಲೇಜಿನ ಖಾಲಿ ಜಾಗದಲ್ಲಿ ನಡೆಸುತ್ತೇವೆ. ಮುಂದೆ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದರು.