News Karnataka Kannada
Friday, May 03 2024
ಮಂಗಳೂರು

ಬೆಳ್ತಂಗಡಿ: ಮಳೆಯಿಂದ ಅಪಾರ ಹಾನಿ, ಮೆಸ್ಕಾಂಗೆ 10 ಲಕ್ಷ ರೂ. ನಷ್ಟ

Belthangady: Rain wreaks havoc
Photo Credit : By Author

ಬೆಳ್ತಂಗಡಿ: ತಾಲೂಕಿನಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಯು ಹಲವಾರು ಅವಾಂತರಗಳನ್ನು ಸೃಷ್ಟಿಸಿದ್ದು ಹೆಚ್ಚಿನ ಹಾನಿಯೂ ಉಂಟಾಗಿದೆ. ತಾಲೂಕಿನ ಮುಂಡಾಜೆ, ಕಲ್ಮಂಜ, ಚಿಬಿದ್ರೆ, ಉಜಿರೆ ಮೊದಲಾದ ಪ್ರದೇಶಗಳಲ್ಲಿ ಮಾ.17ರಂದು ಮಳೆ ಸುರಿದಿತ್ತು.

ಉಳಿದಂತೆ ಶುಕ್ರವಾರದ ಮಳೆ ತಾಲೂಕಿಗೆ ಈ ಬಾರಿ ಪ್ರಥಮ ಮಳೆಯಾಗಿದೆ. ಭಾರಿ ಗಾಳಿ, ಗುಡುಗು, ಸಿಡಿಲು,ಆಲಿಕಲ್ಲು ಸಹಿತವಾಗಿ ಸುರಿದ ಮಳೆಗೆ ಚಾರ್ಮಾಡಿ ಕಕ್ಕಿಂಜೆ, ನೆರಿಯ, ಮುಂಡಾಜೆ, ಕಲ್ಮಂಜ, ಮಿತ್ತಬಾಗಿಲು, ಕಡಿರುದ್ಯಾವರ, ಇಂದಬೆಟ್ಟು, ಲಾಯಿಲ, ನಡ ಮೊದಲಾದ ಗ್ರಾಮಗಳ ಹಲವಾರು ತೋಟಗಳಲ್ಲಿ ಅಡಕೆ, ತೆಂಗು, ಬಾಳೆ ಗಿಡಗಳು ಉರುಳಿ ಬಿದ್ದಿವೆ.

ಮುಂಡಾಜೆ ಗ್ರಾಮದ ಮೂರನೇ ಬ್ಲಾಕ್ ನ ಅಗರಿ ಎಲಿಯಮ್ಮ ಎಂಬವರ ವಾಸದ ಮನೆಯ 30ಕ್ಕಿಂತ ಅಧಿಕ ಶೀಟುಗಳು ಗಾಳಿಗೆ ಹಾರಿ ಹೋಗಿ ಪುಡಿಯಾಗಿವೆ. ಮನೆಯ ಚಾವಣಿಯ ಶೀಟುಗಳು ಹಾರಿಹೋದ ಕಾರಣ ಮನೆಯೊಳಗಿದ್ದ ವಸ್ತುಗಳಿಗೂ ಹಾನಿ ಸಂಭವಿಸಿದೆ.

ಕಡಿರುದ್ಯಾವರ ಗ್ರಾಮದ ಎರ್ಮಾಲ್ ಪಲ್ಕೆ ಎಂಬಲ್ಲಿ ಭವಾನಿ ರಮೇಶ್ ಎಂಬವರ ಮನೆಯ ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಬದ್ಯಾರು ಕಳೆಂಜಿರೋಡಿ ಸಮೀಪ ನವೀನ್ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಯ ಛಾವಣಿ ಸಂಪೂರ್ಣ ಹಾನಿಗೀಡಾಗಿದೆ. ಘಟನೆಯ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಉಜಿರೆಯ ಬಡೆಕೊಟ್ಟು ಎಂಬಲ್ಲಿ ಪ್ರಶಾಂತ ನಾಯ್ಕ ಎಂಬವರ ಮನೆಯ ಮೇಲೆ ಮರ ಬಿದ್ದು ಗೋಡೆ ಹಾಗೂ ಚಾವಣಿಗೆ ಹಾನಿ ಸಂಭವಿಸಿದೆ. ಇಜ್ಜಲ ಬಳಿ ವಲ್ಟಿ ಎಂಬವರ ದನದ ಕೊಟ್ಟಿಗೆಗೆ ಮರ ಬಿದ್ದು ನಷ್ಟ ಉಂಟಾಗಿದೆ. ಕೊಡೆಕಲ್ಲು ದರ್ಕಾಸು ಎಂಬಲ್ಲಿ ಕೂಸಮ್ಮ ಎಂಬವರ ದನದ ಕೊಟ್ಟಿಗೆಗೆ ಮರ ಉರುಳಿ ಬಿದ್ದು ಹಸುವಿಗೆ ಹಾಗೂ ಕರುವನ್ನು ಕಟ್ಟಲು ಬಂದಿದ್ದ ಪಕ್ಕದ ಮನೆಯ ಮಹಿಳೆಗೆ ಗಾಯಗಳು ಉಂಟಾಗಿವೆ.

ಉಜಿರೆ ಪಂಚರಿಕಾಡು ಎಂಬಲ್ಲಿ ಲೀಲಾ ಎಂಬವರ ಕೊಟ್ಟಿಗೆಯ‌ ಶೀಟುಗಳಿಗೆ ಹಾನಿಯಾಗಿದೆ. ಬಾಕ್ರೊಟ್ಟು ಎಂಬಲ್ಲಿ ಉಷಾ ಕೇಶವ ಎಂಬುವರ ಕೊಟ್ಟಿಗೆಗೆ ಮರ ಬಿದ್ದು ಹಾನಿ ಸಂಭವಿಸಿದೆ.

ನಡ ಗ್ರಾಮದ ಅಲ್ಲಲ್ಲಿ ಮನೆಗಳಿಗೆ ಹಾನಿ ಸಂಭವಿಸಿದೆ. ನಾವೂರು ಗ್ರಾಮದ ಜನತಾ ಕಾಲೋನಿಯ ಸಂಪರ್ಕ ರಸ್ತೆ ಬದಿ ನಿರ್ಮಿಸಲಾಗಿದ್ದ ತಡೆಗೋಡೆ ಕುಸಿದು ಬಿದ್ದಿದೆ.ಅನೇಕ ಕಡೆಗಳಲ್ಲಿ ಮನೆಗಳ ವೈರಿಂಗ್,ವಿದ್ಯುತ್ ಉಪಕರಣಗಳು ಸಿಡಿಲಿಗೆ ಸುಟ್ಟು ಹೋಗಿವೆ.

ಮೆಸ್ಕಾಂ ಗೆ 10 ಲಕ್ಷ ರೂ.ನಷ್ಟ.
ಪ್ರಥಮ ಮಳೆಗೆ ಮೆಸ್ಕಾಂಗೆ ಸುಮಾರು 10 ಲಕ್ಷ ರೂ.ಗಿಂತ ಅಧಿಕ ನಷ್ಟ ಉಂಟಾಗಿದೆ .ಗಾಳಿ ಮಳೆಯಿಂದ ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು,ಮರಗಳ ರೆಂಬೆಗಳು ಲೈನ್ ಮೇಲೆ ಬಿದ್ದು ವಿದ್ಯುತ್ ತಂತಿಗಳು ಕಡಿದು ಬಿದ್ದಿವೆ. ಉಜಿರೆ ಮೆಸ್ಕಾಂ ಉಪ ವಿಭಾಗದ ಮುಂಡಾಜೆ, ಉಜಿರೆ,ನಿಡಿಗಲ್ ಮೊದಲಾದ ಪ್ರದೇಶ ಸೇರಿದಂತೆ ಅಲ್ಲಲ್ಲಿ 25 ವಿದ್ಯುತ್ ಕಂಬಗಳು, ಎರಡು ಪರಿವರ್ತಕ ಕೇಂದ್ರಗಳು ಸಂಪೂರ್ಣ ಹಾನಿಗೊಳಗಾಗಿವೆ. ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ಇಂದಬೆಟ್ಟ, ನಡ ಸುರ್ಯ, ಮನ್ನಡ್ಕ ಮೊದಲಾದ ಸ್ಥಳಗಳು ಸೇರಿದಂತೆ 12 ವಿದ್ಯುತ್ ಕಂಬಗಳು ನೆಲಸಮವಾಗಿದೆ ಹಾಗೂ ಅನೇಕ ಕಡೆಗಳಲ್ಲಿ ವಿದ್ಯುತ್ ತಂತಿಗಳು ಮುರಿದುಬಿದ್ದಿವೆ. ಇದರಿಂದ ತಾಲೂಕಿನ ಗ್ರಾಮಾಂತರ ಭಾಗಗಳಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಗಿದ್ದು ದುರಸ್ತಿ ಕಾಮಗಾರಿ ನಡೆಯುತ್ತಿದೆ.

ಶಾಸಕರ ಭೇಟಿ
ಶುಕ್ರವಾರ ಸುರಿದ ಮಳೆಗೆ ಹಾನಿಗೊಳಗಾದ ನಡ ಹಾಗೂ ಉಜಿರೆ ಗ್ರಾಮಗಳ ಮನೆಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು,ನಡ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ್ ಗೌಡ, ಉಜಿರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಾ ಆರ್.ಶೆಟ್ಟಿ, ಮಾಜಿ ತಾಲೂಕು ಸ್ಥಾಯಿ ಸಮಿತಿ ಸದಸ್ಯ ಶಶಿಧರ್ ಕಲ್ಮಂಜ, ಬಿಜೆಪಿ ಎಸ್. ಟಿ ಮೋರ್ಚಾ ಅಧ್ಯಕ್ಷರು ಚೆನ್ನಕೇಶವ ಅರಸುಮಜಲು ಮತ್ತಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು