ಬೆಳ್ತಂಗಡಿ: ದಿಡುಪೆ-ಪೈಚಾರು ರಾಜ್ಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೋಮಂತಡ್ಕ ದಿಡುಪೆ ದೇವಿಗುಡಿ ಸಮೀಪದ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಮೃತಪಟ್ಟ ಘಟನೆ ನ.23 ರ ತಡರಾತ್ರಿ ನಡೆದಿದೆ.
ಮೃತಪಟ್ಟ ಬೈಕ್ ಸವಾರ ಪ್ರದೀಪ್ (22) ನೆರಿಯ ಗ್ರಾಮದ ಪಾದೆಗುಡ್ಡ ನಿವಾಸಿ ನೋಣಯ್ಯ ಗೌಡ ಎಂಬವರ ಪುತ್ರರಾಗಿದ್ದಾರೆ. ಇವರು ಸಂಬಂಧಿಕರ ಮನೆಯ ಶುಭ ಕಾರ್ಯದ ನಿಮಿತ್ತ ಸಾಮಗ್ರಿಗಳನ್ನು ನೀಡಲು ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಗಾಯಾಳುವನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿರುವ ಕುರಿತು ವರದಿಯಾಗಿದೆ. ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿಪ್ಪರ್ ಚಾಲಕರಾಗಿದ್ದ ಮೃತ ಪ್ರದೀಪ್ ಮನೆಯ ಆಧಾರ ಸ್ತಂಭವಾಗಿದ್ದರು. ಇವರ ತಂದೆ,ತಾಯಿ ಇತ್ತೀಚೆಗಷ್ಟೇ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದರು ಸಹೋದರಿಯರಿಬ್ಬರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಣ್ಣ ಪ್ರಮಾಣದ ಕೃಷಿ ಹೊಂದಿರುವ ಕುಟುಂಬಕ್ಕೆ ಪ್ರದೀಪ್ ಅವರ ಆದಾಯವೇ ಆಧಾರವಾಗಿತ್ತು.
ಪದೇ ಪದೇ ಅಪಘಾತ
ದೇವಿಗುಡಿಯ ಸಮೀಪದ ಈ ರಸ್ತೆ ತಿರುವಿನಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಕಳೆದ ವರ್ಷ ಇದೇ ಪರಿಸರದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಮೃತಪಟ್ಟಿದ್ದ ಘಟನೆ ಸಂಭವಿಸಿದೆ.