ಬೆಳ್ತಂಗಡಿ: ನಾರಾವಿ ಸನಿಹದ ಮಾಪಲ ಎಂಬಲ್ಲಿ ಗುಡ್ಡಜರಿತದ ಸದ್ದು ಸ್ಫೋಟಿಸಿದಂತೆ ಕೇಳಿದ ಹಿನ್ನಲೆಯಲ್ಲಿ ಪರಿಸರದ ನಾಗರಿಕರು ಆತಂಕಕ್ಕೊಳಗಾಗಿದ್ದಾರೆ.
ಪಶ್ಚಿಮ ಘಟ್ಟ ಪ್ರದೇಶದ ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ನಾರಾವಿ ಭಾಗದಲ್ಲಿ ಬುಧವಾರ ಸಂಜೆ ಭಾರಿ ಸ್ಪೋಟದ ಸದ್ದಿನೊಂದಿಗೆ ಇಲ್ಲಿನ ಸುವರ್ಣ ನದಿಯಲ್ಲಿ ಕೆಸರು ಮಿಶ್ರಿತ ನೀರು ಹರಿದಿತ್ತು. ಭಾರಿ ಮಳೆ ಸುರಿದಿದ್ದು ಜನರು ಜನ ಸ್ಪೋಟದ ಭೀತಿಗೊಳಗಾಗಿದ್ದರು. ಆದರೆ ಇದು ಇಲ್ಲಿನ ಮಾಪಲ ಪ್ರದೇಶದಲ್ಲಿ ಗುಡ್ಡಜರಿತ ಉಂಟಾಗಿರುವುದರುವುದರಿಂದ ಈ ಸದ್ದು ಕೇಳಿ ಬಂದಿದೆ ಎಂದು ಹೇಳಲಾಗುತ್ತಿದೆ.
ಇಲ್ಲಿನ ಸ್ಪೋಟದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭಿಸಿಲ್ಲ ಎಂದು ಬೆಳ್ತಂಗಡಿ ತಹಸೀಲ್ದಾರ್ ತಿಳಿಸಿದ್ದಾರೆ. ನೂರಾಲ್ಬೆಟ್ಟು ನಾರಾವಿ ಕುತ್ಲೂರು,ಈದು ಮೊದಲಾದ ಪ್ರದೇಶಗಳು ಶೇ.90 ಅರಣ್ಯ ಆವೃತವಾಗಿವೆ.
ನಾರಾವಿ ಸೂರ್ಯ ನಾರಾಯಣ ದೇವಸ್ಥಾನದ ಬಳಿ ಹರಿಯುತ್ತಿರುವ ಸುವರ್ಣಾ ನದಿಯಲ್ಲಿ ಏಕಾಏಕಿ ಪ್ರವಾಹ ಪರಿಸ್ಥಿತಿಯು ಕಂಡುಬಂದು ದೇವಾಲಯ ರಸ್ತೆಯು ಸಂಪೂರ್ಣ ಜಲಾವೃತವಾಗಿತ್ತು. ನೀರು ರಸ್ತೆಗೆ ಬರಲು ಒಂದಡಿಯಷ್ಟೇ ಬಾಕಿ ಇತ್ತು. ಬೆಳ್ತಂಗಡಿ-ಕಾರ್ಕಳ ರಾಜ್ಯ ಹೆದ್ದಾರಿಯ ನಾರಾವಿಯ ಅರಸಿಕಟ್ಟೆ ಬಳಿ ಸೇತುವೆ ಮೇಲ್ಭಾಗದಲ್ಲಿ ನೀರು ಹರಿದಿದ್ದು ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸಲು ತೊಂದರೆ ಉಂಟಾಗಿತ್ತು. ನದಿ ನೀರು ಏರಿದಂತೆ ಭಾರಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.
ಬಿರ್ಮೊಟ್ಟು , ರಾಮೆರಗುತ್ತು ಸುತ್ತಮುತ್ತ , ನಾರಾವಿ ಯ ಕೆಳಗಿನ ಪೇಟೆ ಯ ಸುತ್ತಮುತ್ತಲಿನ ತೋಟಗಳಿಗೆ ನೀರು ನುಗ್ಗಿತ್ತು.
ಸ್ಥಳೀಯರು ಹೇಳಿರುವಂತೆ ಈ ಬಾರಿಯೇ ಮಳೆಗೆ ಅಂಚಿಕಟ್ಟೆ ಸೇತುವೆ ಮುಳುಗಡೆಯಾಗಿದೆ . ಸೇತುವೆಯ ಮೇಲ್ಭಾಗದಲ್ಲಿ2 ಅಡಿ ನೀರು ನಿಂತಿದ್ದು ಒಂದು ಗಂಟೆ ಕಾಲ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
ಇಲ್ಲಿನ ಅರಣ್ಯ ಭಾಗದಲ್ಲಿ ನಿರಂತರವಾಗಿ ಸುರಿದ ಮಳೆ ಹಾಗೂ ನದಿಯಲ್ಲಿ ಮರದ ದಿಮ್ಮಿಗಳು ಸಿಲುಕಿರುವ ಕಾರಣದಿಂದ ನೀರು ಸರಾಗವಾಗಿ ಹರಿಯದೆ ಪ್ರವಾಹ ಸ್ಥಿತಿ ಉಂಟಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.