ಬೆಳ್ತಂಗಡಿ: ನ್ಯಾಯಾಧೀಶರಾಗಿ ನಿಯುಕ್ತಿಗೊಂಡ ಉಜಿರೆಯ ಶೃತಿ ಕೆ.ಎಸ್. ಇವರಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ ಸಮಾರಂಭ ಶುಕ್ರವಾರ ನಡೆಯಿತು.ವಕೀಲರ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ದೇವರಾಜ್, ಪ್ರಧಾನ ಸಿವಿಲ್ ನ್ಯಾಯಾಧೀಶ ಸಂದೇಶ ಅವರು ಶೃತಿ ಅವರನ್ನು ಸಮ್ಮಾನಿಸಿ ಬೀಳ್ಕೊಂಡರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಎಸ್.ಅವರು ವೃತ್ತಿಯಲ್ಲಿ ನಡೆದು ಬಂದ ದಾರಿಯನ್ನು ಮರೆಯಬಾರದು. ಮುಂದಿನ ದಿನಗಳಲ್ಲಿ ಕಿರಿಯ ವಕೀಲ ಸಹೋದರ ಸಹೋದರಿಯರು ತಮ್ಮ ನ್ಯಾಯಾಲಯದಲ್ಲಿ ವಾದ ಮಂಡಿಸುವ ಸಂದರ್ಭ ಅವರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇರಲಿ ಎಂದರು.
ಉಪಾಧ್ಯಕ್ಷ ಗಣೇಶ್ ಗೌಡ ಉಪಸ್ಥಿತರಿದ್ದರು. ವಕೀಲರಿಗೆ ಯೋಗ ತರಬೇತಿ ನೀಡಿದ ಧರ್ಮಸ್ಥಳದ. ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯ ವೈದ್ಯರುಗಳಾದ ಶಶಿಪ್ರಭಾ ಹಾಗೂ ನವ್ಯಾ ಅವರನ್ನು ಪುರಸ್ಕರಿಸಲಾಯಿತು. ಅನಾರೋಗ್ಯದಿಂದಿರುವ ವಕೀಲ ಶ್ರೀಧರ ಗೌಡ ಅವರಿಗೆ ವಕೀಲರ ಸಂಘ ಹಾಗೂ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ರೂ.75,000 ನ್ನು ನೀಡುವ ವಿಚಾರವನ್ನು ತಿಳಿಸಲಾಯಿತು.
ವಕೀಲರ ಸಂಘದ ಜೊತೆ ಕಾರ್ಯದರ್ಶಿ ಪ್ರಿಯಾಂಕಾ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಮಮ್ತಾಜ್, ಶೃತಿ ಅವರನ್ನು ಪರಿಚಯಿಸಿದರು. ಕೋಶಾಧಿಕಾರಿ ಪ್ರಕಾಶ್ ವಂದಿಸಿದರು. ಕಾರ್ಯದರ್ಶಿ ಶೈಲೇಶ್ ಠೋಸರ್ ಕಾರ್ಯಕ್ರಮ ನಿರ್ವಹಿಸಿದರು.