ಬೆಳ್ತಂಗಡಿ: ಮಳೆಗಾಲದ ಆರಂಭಕ್ಕೂ ಮೊದಲು ಧರ್ಮಸ್ಥಳದಲ್ಲಿ ನೇತ್ರಾವತಿ ನದಿಯಲ್ಲಿದ್ದ ತ್ಯಾಜ್ಯಗಳನ್ನು ತೆಗೆದು ಸ್ವಚ್ಚಗೊಳಿಸುವ ಕಾರ್ಯವನ್ನು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನಡೆಯಿತು.
ಧರ್ಮಸ್ಥಳ ದೇವಳದ ಸಿಬ್ಬಂದಿ, ಶೌರ್ಯ ವಿಪತ್ತು ನಿರ್ವಹಣಾ ತಙಡದ ಸದಸ್ಯರು, ಎಸ್.ಕೆ.ಡಿ.ಆರ್. ಡಿ.ಪಿ ಉದ್ಯೋಗಿಗಳು ಹಾಗೂ ಗ್ರಾಮಸ್ಥರು ಸ್ವಚ್ಚತಾ ಕಾರ್ಯದಲ್ಲಿ ಭಾಗಿಗಳಾದರು.
ಸ್ವಚ್ಚತಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್ ಮಂಜುನಾಥ್ ನೆರವೇರಿಸಿ ಮಾತನಾಡುತ್ತಾ ಜಗತ್ತು ಇಂದು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ತ್ಯಾಜ್ಯದ ಸಮಸ್ಯೆಯಾಗಿದೆ. ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಪ್ಲಾಸ್ಟಿಕ್ ಬಳಕೆ ಅತಿಯಾಗಿ ಹೆಚ್ಚಾಗುತ್ತಿದ್ದು ಇದು ಅತ್ಯಂತ ಅಪಾಯ ಕಾರಿಯಾಗಿದೆ. ನದಿಯನ್ನು ಪವಿತ್ರವಾಗಿ ಉಳಿಸುವ ನಿಟ್ಟಿನಲ್ಲಿ ಜಾಗೃತ ದಳ ರಚನೆಯಾಗಬೇಕು, ಕ್ಷೇತ್ರಕ್ಕೆ ಆಗಮಿಸುವ ಭಕ್ತರಲ್ಲಿ ಜಾಗೃತಿ ಮೂಡಿಸುವ ಕಾರ್ಯಮಾಡಬೇಕಾಗಿದೆ ಎಂದು ಅವರು ಹೇಳಿದರು.
ಸ್ವಚ್ಚತಾ ಅಭಿಯಾನದಲ್ಲಿ ಡಾ. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಎಸ್.ಕೆ.ಡಿ.ಆರ್.ಡಿ.ಪಿ ಪ್ರಾದೇಶಿಕ ನಿರ್ದೇಶಕ ದುಗ್ಗಪ್ಪ ಗೌಡ, ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಯಸ್, ರಾಜೇಂದ್ರ ದಾಸ್,ಮಲ್ಲಿನಾಥ್ ಹಾಗೂ ಇತರರು ಸ್ವಯಂ ಸೇವಕರಾಗಿ ತ್ಯಾಜ್ಯಗಳನ್ನು ತೆರವು ಗೊಳಿಸಿದರು.
ನೇತ್ರಾವತಿ ಹಳೆ ಸೇತುವೆ ಪರಿಸರ ಹಾಗೂ ಸ್ನಾನಘಟ್ಟ ಮತ್ತು ಈ ಪ್ರದೇಶದ ರಸ್ತೆ ಬದಿಯಲ್ಲಿದ್ದ ಕಸ ತ್ಯಾಜ್ಯಗಳನ್ನು ತೆರವು ಗೊಳಿಸಲಾಯಿತು.
ನದಿಯಲ್ಲಿದ್ದ ಬಟ್ಟೆ ಬರೆಗಳು, ಪ್ಲಾಸ್ಟಿಕ್, ಬಾಟ್ಲಿಗಳು, ಹಾಗೂ ಇತರೆ ತ್ಯಾಜ್ಯಗಳನ್ನು ತೆರವು ಗೊಳಿಸಲಾಯಿತು. ಹಲವು ಲೋಡ್ ಕಸವನ್ನು ನದಿಯಿಂದ ತೆಗೆಯಲಾಯಿತು. 150ಕ್ಕೂ ಹೆಚ್ಚು ಮಂದಿ ಸ್ವಚ್ಚತಾ ಕಾರ್ಯದಲ್ಲಿ ಭಾಗಿಗಳಾದರು.