ಬೆಳ್ತಂಗಡಿ: ಸರಕಾರದ ಅನೇಕ ಯೋಜನೆಗಳನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯವನ್ನು ಬಿಜೆಪಿ ಪಕ್ಷ ನಿಷ್ಠೆಯಿಂದ ಮಾಡುತ್ತಾ ಬಂದಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ನಾಲ್ಕುವರೆ ವರ್ಷದಲ್ಲಿ ಮೂರುವರೆ ಸಾವಿರ ಕೋಟಿ ಅನುದಾನ ತಂದು ಹಿಂದುಳಿದರ ಏಳಿಗೆಯ ಜತೆಗೆ ಜಾತಿ, ಪಕ್ಷ ರಹಿತ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇವೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ದ.ಕ.ಜಿಲ್ಲಾ ಭಾರತೀಯ ಜನತಾ ಪಾರ್ಟಿ ಎಸ್.ಸಿ. ಮೋರ್ಚಾದ ವತಿಯಿಂದ ಬೆಳ್ತಂಗಡಿಯ ಗುರುವಾಯನಕೆರೆ ಕಿನ್ಯಮ್ಮ ಸಭಾಂಗಣದಲ್ಲಿ ಮಾ.20 ರಂದು ಹಮ್ಮಿಕೊಂಡ ಪರಿಶಿಷ್ಟ ಜಾತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ದೇಶಕ್ಕೆ ಮಹತ್ತರ ಕೊಡುಗೆ ನೀಡಿದ ಡಾ.ಬಿ.ಅಂಬೇಡ್ಕರ್ ಹೆಸರಿನಡಿ ಕಾಂಗ್ರೆಸ್ ಪಕ್ಷ ಜಾತಿರಾಜಕೀಯ ನಡೆಸುತ್ತಾ ಬಂದಿದೆ. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಅಂಬೇಡ್ಕರ್ ಅವರ ಜೀವನ ಕಾಲಘಟ್ಟವನ್ನು ಪ್ರತಿ ಹಂತದಲ್ಲೂ ಗುರುತಿಸುವ ನೈಜಕಾರ್ಯವಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ದೇಶಕ್ಕೆ ಮಾದರಿಯಾಗಬಲ್ಲ 7 ಕೋ.ರೂ. ಅನುದಾನದಡಿ ಮಾದರಿ ಅಂಬೇಡ್ಕರ್ ಭವನದ ನಿರ್ಮಾಣ ಇನ್ನು ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಎಸ್.ಸಿ. ಸಮಾವೇಶ ರಾಜ್ಯ ಸಂಚಾಲಕ ಮಹೇಂದ್ರ ಕೊತ್ವಾಲ್ ಮಾತನಾಡಿ, ಸಮಾವೇಶದ ಉದ್ದೇಶ ಕಟ್ಟಕಡೆಯ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದಾಗಿದೆ. ಈದೇದಲ್ಲಿ ಸೈನ್ಯ, ಹಣ, ರೈತ ಬಲದೊಂದಿಗೆ ಜ್ಞಾನದ ಬಲ ನೀಡಿದ ಡಾ.ಬಿ.ಅಂಬೇಡ್ಕರ್ ಅವರ ಆಶಯದಂತೆ ಸಮುದಾಯದ ನೈಜ ಅಭಿವೃದ್ಧಿ ಬಿಜೆಪಿ ಪಕ್ಷದಿಂದಾಗಿದೆ ಎಂದು ಹೇಳಿದರು.
ಕೊಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಅಂಬೇಡ್ಕರ್ ಕೇವಲ ದಲಿತ ನಾಯಕರಲ್ಲ, ಅವರು 138 ಕೋಟಿ ಭಾರತೀಯರ ನಾಯಕ. ಕಾಂಗ್ರೆಸ್ ನಲ್ಲಿ ಟಿಪ್ಪು, ಬ್ರಿಟೀಷರು ಸೇರಿದಂತೆ ಬೇರೆ ಬೇರೆ ಆಕ್ರಮಿತರ ವಂಶಾವಳಿಯಿದೆ. ಆದರೆ ಬಿಜೆಪಿಯಲ್ಲಿರುವುದು ನೈಜ ಭಾರತೀಯರು ಮಾತ್ರ. ನಾವೆಲ್ಲ ಸ್ವಾಭಿಮಾನ ಭಾರತ ಕಟ್ಟಲು ಬಿಜೆಪಿಯನ್ನು ಬೆಂಬಲಿಸೋಣ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಮಾತನಾಡಿ, ಈ ದೇಶದಲ್ಲಿ ಜಾತಿಯಿಂದ ಯಾರೂ ಗುರುತಿಸಿಕೊಂಡಿಲ್ಲ. ಬದಲಾಗಿ ತನ್ನ ಸಾಧನೆ, ಶ್ರೇಷ್ಠತೆ, ನಡತೆಯಿಂದ ಗುರುತಿಸಿಕೊಂಡಿದ್ದಾನೆ. ಈ ದೇಶದ ಪರಂಪರೆ ಉಳಿಸಿ ಹಿಂದೂ ಸಮಾಜ ಒಂದೇ ವೇದಿಕೆಯಲ್ಲಿ ಬರುವ ಕೆಲಸ ಬಿಜೆಪಿ ಪಕ್ಷದಿಂದಾಗಿದೆ ಎಂದು ಹೇಳಿದರು.
ವಿ.ಪ.ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಎಸ್.ಸಿ. ಮೋರ್ಚಾ ರಾಜ್ಯ ಪ್ರ.ಕಾರ್ಯದರ್ಶಿ ದಿನಕರ ಬಾಬು, ಬೆಳ್ತಂಗಡಿ ಮಂಡಲ ಚುನವಣಾ ಪ್ರಭಾರಿ ಆಶಾ ತಿಮ್ಮಪ್ಪ ಗೌಡ, ಎಸ್.ಸಿ. ಮೋರ್ಚಾ ಜಿಲ್ಲಾ ಪ್ರಭಾರಿ ಮಂಗಳಾ ಆಚಾರ್ಯ, ಜಿಲ್ಲಾ ಪ್ರ.ಕಾರ್ಯದರ್ಶಿ ಕಸ್ತೂರಿ ಪಂಜ, ಸಮಾವೇಶದ ಜಿಲ್ಲಾ ಸಂಚಾಲಕ ಸಂದೇಶ್ ಶೆಟ್ಟಿ, ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸಮಜಲು, ಪ್ರಮುಖರಾದ ದಿನೇಶ್ ಅಮ್ಟೂರು, ಆನಂದ ಪಾಂಗಳ, ಕೇಶವ ದೈಪಾಲ, ಆನಂದ ಕೆ., ಉಪಸ್ಥಿತರಿದ್ದರು.
ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ವಿನಯನೇತ್ರ ದಡ್ಡಲ್ ಕಾಡ್ ಪ್ರಾಸ್ತಾವಿದರು. ಎಸ್.ಸಿ. ಮೋರ್ಚಾ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ಕುಕ್ಕಳ ಸ್ವಾಗತಿಸಿದರು. ಮಂಡಲ ಪ್ರ.ಕಾರ್ಯದರ್ಶಿ ಶ್ರೀನಿವಾಸ್ ರಾವ್ ನಿರೂಪಿಸಿದರು. ಸದಾಶಿವ ಕರಂಬಾರು ವಂದಿಸಿದರು.
ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ 7 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಬೇಡ್ಕರ್ ಭವನದ ನೀಲನಕಾಶೆಯನ್ನು ಶಾಸಕ ಹರೀಶ್ ಪೂಂಜ ಅನಾವರಣ ಮಾಡಿದರು. ಇದೇ ವೇಳೆ ಕಣಿಯೂರು ಸೀತಾರಾಮ ಮಡಿವಾಳ, ಕಾಂತಪ್ಪ ನಾಯ್ಕ, ರಂಜಿತ್ ಬಾಂಗೇರು, ನಿತಿನ್ ಕಣಿಯೂರು, ಕೃಷ್ಣಪ್ಪ ಮಡಿವಾಳ, ರುಕ್ಮಯ ಗೌಡ ಅಡೀಲು ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.