ಬೆಳ್ತಂಗಡಿ: ವ್ಯವಹಾರಿಕ ಕೇಂದ್ರವಾದ ಉಜಿರೆ ವ್ಯಾಪ್ತಿಯಲ್ಲಿ ಸಹಕಾರಿ ಸಂಘಗಳ ಕೊಡುಗೆಯಿಂದ ಅಭಿವೃದ್ಧಿ ವೇಗಪಡೆಯುತ್ತಿದೆ. 3 ಕೋ.ರೂ. ವೆಚ್ಚದಲ್ಲಿ ಉಜಿರೆ ಪ್ರಾ.ಕೃ.ಪ.ಸ.ಸೇವಾ ಸಂಘದ ನೂತನ ಕಟ್ಟಡ ರಚನೆಯಾಗುವ ಮೂಲಕ ಅಗತ್ಯ ಸೇವಾ ಸೌಲಭ್ಯ ನೀಡಲು ಮುಂದಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘದ ವತಿಯಿಂದ ಸಂಘದ ವಠಾರದಲ್ಲಿ 3 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಟ್ಟಡಕ್ಕೆ ಸೆ.17 ರಂದು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಸಹಕಾರಿ ಹಾಗೂ ರಾಜಕೀಯ ವ್ಯವಸ್ಥೆಯಡಿ ಅಧ್ಯಕ್ಷರಾದ ಇಚ್ಚಿಲ ಸುಂದರ ಗೌಡರವರು ಅನುಭವ ಪ್ರೇರಣೆಯಾಗಿದೆ. ಸಂಘಕ್ಕೆ ಶಾಸಕನ ನೆಲೆಯಲ್ಲಿ ಭವಿಷ್ಯದಲ್ಲಿ ಅಗತ್ಯ ಸಹಕಾರ ಒದಗಿಸುವುದಾಗಿ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಬೆಳೆಯುತ್ತಿರುವ ಉಜಿರೆ ಗ್ರಾಮದಲ್ಲಿ ಉಜಿರೆ ಸಹಕಾರಿ ಸಂಘವು ಬಹುದೊಡ್ಡ ಯೋಜನೆಗೆ ಅಡಿಪಾಯ ಹಾಕುವ ಮೂಲಕ ಉಜಿರೆ ವ್ಯಾಪ್ತಿಯ ಹಲವು ಮಂದಿಗೆ ಬದುಕು ಕಟ್ಟಿಕೊಳ್ಳಲು ನೂತನ ಕಟ್ಟಡ ಸಹಕಾರಿಯಾಗಲಿದೆ. ಯೋಜನೆ ಯೋಚನೆಗಳು ದೂರದೃಷ್ಟಿಯಿಂದ ಕೂಡಿರಲು ಇಂತಹಾ ಕಲ್ಪನೆ ಬೆಳೆಯಲು ಸಾಧ್ಯ ಎಂದು ಹೇಳಿದರು.
ಉಜಿರೆ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ ಶುಭ ಹಾರೈಸಿದರು. ಸ್ವಚ್ಛತಾ ಹಿ ಸೇವಾ ಪುರಸ್ಕಾರ ಪಡೆದ ಉಜಿರೆ ಗ್ರಾ.ಪಂ. ಪಿಡಿಒ ಪ್ರಕಾಶ್ ಶೆಟ್ಟಿ ಶೆಟ್ಟಿ ನೊಚ್ಚ ಅವರನ್ನು ಈ ವೇಳೆ ಸಂಘದ ವತಿಯಿಂದ ಸಮ್ಮಾನಿಸಲಾಯಿತು.
ಉಜಿರೆ ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಇಚ್ಚಿಲ ಸುಂದರ ಗೌಡ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ, ಸಂಘದ ಉಪಾಧ್ಯಕ್ಷೆ ಪ್ರೇಮಾ, ನಿರ್ದೇಶಕರಾದ ಶ್ರೀನಿವಾಸ ಗೌಡ, ಸದಾಶಿವ, ಅಬ್ದುಲ್ ರಹಿಮಾನ್ ಬಿ.ಎಂ., ಸೌಮ್ಯಲತಾ ಎಂ, ಮೋಹನ್ ದಾಸ್ ಎಂ.ಬಿ., ಅಶ್ವಥ್ ಇ.ಎಸ್., ಅರುಣ ಕುಮಾರ್, ಸಾದು ಎಂ, ಅಣ್ಣು ನಾಯ್ಕ್, ಸಿಇಒ ಸರಸ್ವತಿ ಸಿ., ಉಪಸ್ಥಿತರಿದ್ದರು.