ಬೆಳ್ತಂಗಡಿ: ತಾಲೂಕಿನ ಪ್ರತಿ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಅಭಿವೃದ್ದಿ ಕಾರ್ಯಗಳನ್ನು ನಿರ್ವಹಿಸಲಾಗಿದೆ.
ಮುಂದಿನ ಹಂತದಲ್ಲಿ ಇನ್ನಷ್ಟು ಅಭಿವೃದ್ದಿ ಕಾಮಗಾರಿ ನಡೆಸಲು ಯೋಜನೆ ರೂಪಿಸಲಾಗಿದೆ.ಪ್ರತಿ ಕಾಮಗಾರಿಗು ಗ್ರಾಮಸ್ಥರ ಸಹಕಾರವು ಅಗತ್ಯವಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಹಾಗೂ ಕಡಿರುದ್ಯಾವರ ಗ್ರಾಮದಲ್ಲಿ 3ಕೋಟಿ ರೂ.ಅನುದಾನದಲ್ಲಿ ನಡೆಯಲಿರುವ ರಸ್ತೆಗಳ ಅಭಿವೃದ್ದಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕಡಿರುದ್ಯಾವರ ಗ್ರಾಮಕ್ಕೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ 13ಕೋಟಿ ರೂ.ಗಿಂತ ಅಧಿಕ ಹಾಗೂ ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ತೋಟತ್ತಾಡಿ ಗ್ರಾಮಕ್ಕೆ 5.30ಕೋಟಿ ರೂ. ಗಿಂತ ಅಧಿಕ ಅನುದಾನವನ್ನು ಅಭಿವೃದ್ದಿ ಕಾಮಗಾರಿಗಳಿಗೆ ಒದಗಿಸಲಾಗಿದೆ. ತನ್ನೂರಿನ ಅಭಿವೃದ್ಧಿ ಪ್ರತಿಯೊಬ್ಬ ಗ್ರಾಮಸ್ಥನ ಕನಸಾಗಿದ್ದು ಅದನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸಗಳನ್ನು ಪ್ರತಿ ಗ್ರಾಮದಲ್ಲಿ ಹಂತ ಹಂತವಾಗಿ ಮಾಡಲಾಗುತ್ತಿದೆ ಎಂದರು.
ಕಡಿರುದ್ಯಾವರ ಗ್ರಾಪಂ ಅಧ್ಯಕ್ಷ ಅಶೋಕ್ ಕುಮಾರ್, ಉಪಾಧ್ಯಕ್ಷೆ ಬೇಬಿ, ಸದಸ್ಯರು ಚಾರ್ಮಾಡಿ ಗ್ರಾಪಂ ಅಧ್ಯಕ್ಷ ಕೆ.ವಿ.ಪ್ರಸಾದ್, ಮಾಜಿ ಅಧ್ಯಕ್ಷ ಅಶೋಕ್ ಕುಮಾರ್ ಜೈನ್, ತಾಪಂ ಮಾಜಿ ಸದಸ್ಯ ಕೊರಗಪ್ಪ ಗೌಡ, ಮಿತ್ತ ಬಾಗಿಲು ಗ್ರಾಪಂ ಉಪಾಧ್ಯಕ್ಷ ವಿನಯ ಚಂದ್ರ, ಪ್ರಮುಖರಾದ ಶ್ರೀನಿವಾಸ ಗೌಡ,ಪ್ರಭಾಕರ ಶೆಣೈ,ಕಿಶೋರ್ ಕುಮಾರ್ ವಳಂಬ್ರ, ವಿಘ್ನೇಶ್ ಪ್ರಭು, ವಾಸು ಬಂಗೇರ, ಸುರೇಶ್ ಕೌಡಂಗೆ, ಮೋಹನ್ ಗೌಡ ಬಾಯಿತ್ಯಾರು, ಕಮಲಾಕ್ಷ ಪೂಜಾರಿ, ಓಬಯ್ಯ ಗೌಡ, ಮೋಹನ್ ಬಾರೆ ಮತ್ತಿತರರು ಇದ್ದರು.
ಕಾಮಗಾರಿ ವಿವರ
-ಕಡಿರುದ್ಯಾವರ ಗ್ರಾಮದ ಹೇಡ್ಯ- ವಳಂಬ್ರ ರಸ್ತೆ ಮರು ಡಾಮರೀಕರಣ- ರೂ.80ಲಕ್ಷ ಅನುದಾನ
-ತೋಟತ್ತಾಡಿ- ಅಂತರ ಬಯಲು ರಸ್ತೆ ಮರುಡಾಮರಿಕರಣ- ರೂ.70ಲಕ್ಷ ಅನುದಾನ
-ಬೆಂದ್ರಾಳ -ಕುತ್ರಿಜಾಲು ರಸ್ತೆ ಮರುಡಾಮರಿಕರಣ ರೂ.80ಲಕ್ಷ ಅನುದಾನ
-ತೋಟತ್ತಾಡಿ -ಪಾದೆ ಬೈಲು ರಸ್ತೆ ಕಾಂಕ್ರೀಟೀಕರಣ ರೂ.70ಲಕ್ಷ ಅನುದಾನ.
-ಕಡಿರುದ್ಯಾವರ- ಮನ್ನಡ್ಕ ಕಾಂಕ್ರೀಟ್ ರಸ್ತೆ ಉದ್ಘಾಟನೆ ರೂ.25ಲಕ್ಷ ಅನುದಾನ.