ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ, ಚಿಬಿದ್ರೆ ಗ್ರಾಮಗಳಲ್ಲಿ ನಡೆಯುತ್ತಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸುತ್ತಿರುವ ತಂಡಕ್ಕೆ ಒಂಟಿಸಲಗ ಎದುರಾಗಿದೆ.
ಇಲ್ಲಿನ ಅರಣ್ಯ ಇಲಾಖೆ ವ್ಯಾಪ್ತಿಯ ಚಿಬಿದ್ರೆ ಬ್ಲಾಕ್ ಪ್ರದೇಶದಲ್ಲಿ ಗುರುವಾರ ಸಂಜೆ ವೇಳೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಕಾಡಿನ ಭಾಗದ ಹಳ್ಳ ಒಂದರ ಸಮೀಪ ಒಂಟಿ ಸಲಗ ಮಲಗಿರುವುದು ಕಂಡು ಬಂದಿದೆ. ಈ ಸಮಯ ಅದನ್ನು ಓಡಿಸಲು ಸಜ್ಜಾದ ತಂಡಕ್ಕೆ ಕಾಡಾನೆ ದಾಳಿ ನಡೆಸಲು ಮುಂದಾಗಿದೆ. ಜನರ ಗುಂಪನ್ನು ಕಂಡು ರೋಷಗೊಂಡ ಆನೆ ಒಂದಿಷ್ಟು ದೂರದವರೆಗೆ ತಂಡವನ್ನು ಓಡಿಸಿ ಮತ್ತೆ ಕಾಡಿನ ಮೇಲ್ಭಾಗದತ್ತ ಹೋಗಿ ಮರೆಯಾಗಿತ್ತು. ಅಗತ್ಯ ಸಲಕರಣೆಗಳೊಂದಿಗೆ ಕಾರ್ಯಾಚರಣೆ ಮುಂದುವರಿಸಿದ ತಂಡಕ್ಕೆ ಬಳಿಕ ಕಾಡಾನೆ ಕಂಡುಬಂದಿರಲಿಲ್ಲ.
ಈ ವೇಳೆ ನಾಗರಹೊಳೆಯ ಆನೆಕಾವಾಡಿಗ ವೆಂಕಟೇಶ್ ಅವರ ನಗದು ಇದ್ದ ಪರ್ಸ್, ಎಟಿಎಂ ಕಾರ್ಡ್ ಇತ್ಯಾದಿ ಕಳೆದು ಹೋಗಿರುತ್ತದೆ.
ಶುಕ್ರವಾರ ಮುಂಜಾನೆ ಹೊತ್ತಿಗೆ ಇಲ್ಲಿನ ತೋಟತ್ತಾಡಿಯ ಕಜೆ ಪರಿಸರಕ್ಕೆ ಮತ್ತೆ ಕಾಡಾನೆ ಕಾಡಿನಿಂದ ಇಳಿದುಬಂದು ಕೃಷಿ ನಾಶ ಮಾಡಲು ಮುಂದಾದ ಹೊತ್ತಿಗೆ ಸ್ಥಳೀಯರಿಂದ ಮಾಹಿತಿ ಪಡೆದ ತಂಡ ಅಲ್ಲಿಗೆ ಆಗಮಿಸುತ್ತಿದ್ದಂತೆ ಜಾಗ ಖಾಲಿ ಮಾಡಿತ್ತು. ಚಿಬಿದ್ರೆ ಗ್ರಾಮದ ಕಲ್ಲಗುಂಡ ಪರಿಸರದಲ್ಲಿ ಕ್ರಮಿಸಿ ರಾಷ್ಟ್ರೀಯ ಹೆದ್ದಾರಿ, ಮೃತ್ಯುಂಜಯ ನದಿಯನ್ನು ದಾಟಿ ನಳೀಲು, ಹೊಸಮಠ ಕಡೆ ಹೋಗಿರುವ ಕುರುಹುಗಳು ಶುಕ್ರವಾರ ಪತ್ತೆಯಾಗಿವೆ.
ರೋಷ ಗೊಂಡಿರುವ ಒಂಟಿ ಸಲಗವನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಗೆ ಹೆಚ್ಚಿನ ಜಾಗೃತೆ ವಹಿಸುವುದು ಅಗತ್ಯವಾಗಿದೆ. ಕಾರ್ಯಾಚರಣೆ ವೇಳೆ ಯಾವುದೇ ಕ್ಷಣದಲ್ಲಿ ಸಲಗ ದಾಳಿಗೆ ಮುಂದಾದರೆ ಅಪಾಯ ತಪ್ಪಿದ್ದಲ್ಲ.
ಬೆಳ್ತಂಗಡಿ ಆರ್ ಎಫ್ ಒ ತ್ಯಾಗರಾಜ್ ಭೇಟಿ ನೀಡಿ ಉಪ ವಲಯ ಅರಣ್ಯಾಧಿಕಾರಿ ಭವಾನಿ ಶಂಕರ ತಂಡ ಹಾಗೂ ಸ್ಥಳೀಯರಿಂದ ಹೆಚ್ಚಿನ ಮಾಹಿತಿ ಪಡೆದಿದ್ದಾರೆ.ಉರಗ ಮಿತ್ರ ಕಕ್ಕಿಂಜೆಯ ಸ್ನೇಕ್ ಅನಿಲ್ ತಂಡದೊಂದಿಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.